newsics.com/ನ್ಯೂಸಿಕ್ಸ್
ಪಶ್ಚಿಮ ಬಂಗಾಳ ರಾಜಕೀಯದಲ್ಲಿ ದೊಡ್ಡ ಗೊಂದಲದ ಪರಿಸ್ಥಿತಿ ಸೃಷ್ಟಿಯಾಗಿದೆ. ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಸೋಲು ಕಂಡ ನಂತರವೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ.
ಸಾಮಾನ್ಯವಾಗಿ ಚುನಾವಣೆಯಲ್ಲಿ ಸೋತ ನಂತರ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ, ಹೊಸ ಸರ್ಕಾರ ಬರುವವರೆಗೂ ಉಸ್ತುವಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡುವುದು ಪ್ರಜಾಪ್ರಭುತ್ವದ ಪದ್ಧತಿ.
ಆದರೆ ಮಮತಾ ಬ್ಯಾನರ್ಜಿ ‘ಇದು ಜನಾದೇಶವಲ್ಲ, ನನ್ನ ವಿರುದ್ಧ ನಡೆದ ಪಿತೂರಿ’ ಎಂದು ಹೇಳಿ, ತಮ್ಮ ಸ್ಥಾನದಿಂದ ಹಿಂದೆ ಸರಿಯುವುದಿಲ್ಲವೆಂದು ಘೋಷಿಸಿದ್ದಾರೆ. ಹಾಗಾದ್ರೆ ಮಮತಾ ರಾಜೀನಾಮೆ ನೀಡದಿದ್ದರೆ ಬಿಜೆಪಿ ಸರ್ಕಾರ ರಚಿಸುವುದು ಹೇಗೆ? ನೋಡಿ.
ರಾಜೀನಾಮೆ ಕೊಡಲ್ಲ ಎಂದ ಮಮತಾ ಬ್ಯಾನರ್ಜಿ!
ಮಮತಾ ಬ್ಯಾನರ್ಜಿ ಅವರ ಈ ನಿರ್ಧಾರದಿಂದ ಬಂಗಾಳದಲ್ಲಿ ಸಾಂವಿಧಾನಿಕ ಬಿಕ್ಕಟ್ಟಿನ ಭೀತಿ ಉಂಟಾಗಿದೆ. ಸಂವಿಧಾನದ 172ನೇ ವಿಧಿಯ ಪ್ರಕಾರ ಯಾವುದೇ ವಿಧಾನಸಭೆಯ ಅವಧಿ 5 ವರ್ಷಕ್ಕಿಂತ ಹೆಚ್ಚು ಇರಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದ ವಿಧಾನಸಭೆಯ ಪ್ರಸ್ತುತ ಅವಧಿ ಇಂದು ಮಧ್ಯರಾತ್ರಿ 12:01ಕ್ಕೆ ಮುಗಿಯುತ್ತಿದೆ. ಈ ಸಮಯದ ನಂತರ ಮಮತಾ ಕಾನೂನುಬದ್ಧವಾಗಿ ಮುಖ್ಯಮಂತ್ರಿಯಾಗಿ ಮುಂದುವರೆಯಲು ಅವಕಾಶವಿಲ್ಲ. ಸಂವಿಧಾನ ತಜ್ಞರ ಪ್ರಕಾರ, 164ನೇ ವಿಧಿಯನ್ವಯ ಮುಖ್ಯಮಂತ್ರಿಗಳು ‘ರಾಜ್ಯಪಾಲರ ಸಂತೋಷದ ಅವಧಿ’ವರೆಗೆ ಮಾತ್ರ ಹುದ್ದೆಯಲ್ಲಿ ಇರುತ್ತಾರೆ. ಅವಧಿ ಮುಗಿದ ನಂತರ, ಅಥವಾ ಬಹುಮತ ಕಳೆದುಕೊಂಡ ನಂತರ, ರಾಜ್ಯಪಾಲರಿಗೆ ಅವರನ್ನು ವಜಾಗೊಳಿಸುವ ಅಧಿಕಾರ ಇದೆ.
ಮಮತಾ ಹಠ ಯಾಕೆ?
ಮಮತಾ ಅವರ ಈ ಹಠಮಾರಿ ನಿಲುವಿನ ಹಿಂದೆ ರಾಜಕೀಯ ಸಂದೇಶವೂ ಇದೆ. ಚುನಾವಣಾ ಆಯೋಗ ಮತ್ತು BJP ಮೇಲೆ ಅವರು ಅಕ್ರಮಗಳ ಆರೋಪ ಮಾಡಿದ್ದು, ಚುನಾವಣೆಗಳು ಪಾರದರ್ಶಕವಾಗಿಲ್ಲವೆಂದು ವಾದಿಸಿದ್ದಾರೆ. ತಮ್ಮ ರಾಜೀನಾಮೆ ನೀಡದೇ ಇರುವುದು ಒಂದು ರೀತಿಯ ಪ್ರತಿಭಟನೆಯ ರೂಪ ಎಂದು TMC ನಾಯಕರು ಹೇಳುತ್ತಿದ್ದಾರೆ. ‘ನಾನು ಹೋರಾಟಕ್ಕೆ ಸಿದ್ಧ’ ಎಂಬ ಸಂದೇಶವನ್ನು ಮಮತಾ ತಮ್ಮ ಬೆಂಬಲಿಗರಿಗೆ ಮತ್ತು ದೇಶದ ರಾಜಕೀಯ ವಲಯಕ್ಕೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆಡಳಿತಾತ್ಮಕವಾಗಿ ಇದು ದೊಡ್ಡ ತೊಂದರೆ. ಮುಖ್ಯಮಂತ್ರಿಯ ರಾಜೀನಾಮೆ ಇಲ್ಲದೆ ಹೊಸ ಸರ್ಕಾರ ರಚಿಸುವಲ್ಲಿ ಹಲವು ತಾಂತ್ರಿಕ ಅಡಚಣೆಗಳು ಎದುರಾಗುತ್ತಿವೆ.
ಒಂದು ದಿನದ ರಾಷ್ಟ್ರಪತಿ ಆಳ್ವಿಕೆ ಜಾರಿ?
ಇಂತಹ ಸಂದರ್ಭದಲ್ಲಿ, ಒಂದು ದಿನದ ರಾಷ್ಟ್ರಪತಿ ಆಳ್ವಿಕೆಯ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾನೂನು ತಜ್ಞರ ಪ್ರಕಾರ, ಮುಖ್ಯಮಂತ್ರಿಯಾಗಿ ಮುಂದುವರಿಯಲು ಅಥವಾ ‘ಹಂಗಾಮಿ’ ಮುಖ್ಯಮಂತ್ರಿಯಾಗಲು, ಮೊದಲು ಅವರು ರಾಜೀನಾಮೆ ಸಲ್ಲಿಸಬೇಕು. ರಾಜೀನಾಮೆ ಸ್ವೀಕರಿಸದೇ ಇದ್ದರೆ, ಅವರನ್ನು ಹಂಗಾಮಿ ಮುಖ್ಯಮಂತ್ರಿಯಾಗಿ ನೇಮಿಸುವ ಅವಕಾಶವಿಲ್ಲ. ಹಿರಿಯ ವಕೀಲ ಹರೀಶ್ ಸಾಳ್ವೆ ಅವರ ಅಭಿಪ್ರಾಯದಂತೆ, ಇಂದು ರಾತ್ರಿ ಒಳಗೆ ಮಮತಾ ಅವರ ರಾಜೀನಾಮೆ ಸ್ವೀಕರಿಸದಿದ್ದರೆ, ರಾಜ್ಯಪಾಲರು ಬಂಗಾಳದಲ್ಲಿ ಅಲ್ಪಾವಧಿಗೆ ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸು ಮಾಡಬಹುದು. ಇದು ಸುಮಾರು 24 ಗಂಟೆಗಳಷ್ಟೇ ಇರಬಹುದು. ಕಾರಣ, BJP ತನ್ನ ಸರ್ಕಾರದ ಪ್ರಮಾಣವಚನನ್ನು May 9ರಂದು ನಡೆಸಲು ತೀರ್ಮಾನಿಸಿದೆ. May 8ರಂದು ರಾಜ್ಯದಲ್ಲಿ ‘ಯಾರೂ ಸರ್ಕಾರದಲ್ಲಿಲ್ಲ’ ಎಂಬ ಸ್ಥಿತಿ ಬಾರದಂತೆ ಈ ಅವಧಿಯನ್ನು ರಾಷ್ಟ್ರಪತಿ ಆಳ್ವಿಕೆಯ ಅಡಿಯಲ್ಲಿ ಕಾನೂನುಬದ್ಧವಾಗಿ ಮುಚ್ಚಿಕೊಳಲಾಗಬಹುದು.
ಇದನ್ನೊಟ್ಟಿಗೆ, BJP ಸರ್ಕಾರ ರಚಿಸುವ ಪ್ರಕ್ರಿಯೆ ಕೂಡ ಶುರುವಾಗುತ್ತಿದೆ. ರಾಜ್ಯದ ಮುಖ್ಯ ಚುನಾವಣಾಧಿಕಾರಿ ಹೊಸದಾಗಿ ಆಯ್ಕೆಯಾದ ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಿದ್ದಾರೆ. BJP 207 ಸ್ಥಾನಗಳನ್ನು ಗೆದ್ದು ಬಹುಮತ ಪಡೆದಿದೆ. ಸಂವಿಧಾನದ ನಿಯಮದಂತೆ, ಬಹುಮತದ ಪಕ್ಷದ ನಾಯಕನನ್ನು ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನಿಸುತ್ತಾರೆ. ಹಳೆಯ ಸರ್ಕಾರ ರಾಜೀನಾಮೆ ನೀಡದಿದ್ದರೆ, ರಾಜ್ಯಪಾಲರು ಅದನ್ನು ವಜಾಗೊಳಿಸಬಹುದು. ನಂತರ BJP ನಾಯಕ ಮತ್ತು ಸಚಿವ ಸಂಪುಟ ಶನಿವಾರ ಬೆಳಿಗ್ಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆ ಕ್ಷಣದಿಂದ ಹಳೆಯ ಸರ್ಕಾರದ ಕಾನೂನುಬದ್ಧ ಅಸ್ತಿತ್ವ ಅಂತ್ಯಗೊಳ್ಳುತ್ತದೆ.
ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಪ್ರಕರಣದ ಪರಿಣಾಮ
ಮಮತಾ ಅವರ ಈ ನಡೆ ಹಿಂದೆ ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಪ್ರಕರಣದ ಪರಿಣಾಮವೂ ಇದೆ ಎಂದು ರಾಜಕೀಯ ವಲಯಗಳಲ್ಲಿ ಮಾತನಾಡಲಾಗುತ್ತಿದೆ. ಅಲ್ಲಿ ಉದ್ಧವ್ ಸ್ವತಃ ರಾಜೀನಾಮೆ ನೀಡಿದ್ದರಿಂದ, ನಂತರ ಅವರ ಸರ್ಕಾರವನ್ನು ಮರುಸ್ಥಾಪಿಸಲು ಕಾನೂನುಬದ್ಧ ಅವಕಾಶ ಇರಲಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆ ಅನುಭವದಿಂದ ಮಮತಾ ‘ನನ್ನನ್ನು ರಾಜೀನಾಮೆ ನೀಡಿದವಳಾಗಿ ಅಲ್ಲ, ವಜಾಗೊಳಿಸಲ್ಪಟ್ಟವಳಾಗಿ ಇತಿಹಾಸ ದಾಖಲಿಸಲಿ’ ಎಂಬ ರಾಜಕೀಯ ಲೆಕ್ಕಾಚಾರದಲ್ಲಿ ಇದ್ದಾರೆ ಎಂದು ವಿಶ್ಲೇಷಕರು ಹೇಳುತ್ತಾರೆ. ಇದರಿಂದ ಭವಿಷ್ಯದಲ್ಲಿ ಕಾನೂನು ಹೋರಾಟ ಮತ್ತು ರಾಜಕೀಯ ಪ್ರಚಾರದಲ್ಲಿ ‘ನನ್ನನ್ನು ಬಲವಂತವಾಗಿ ಹೊರಹಾಕಿದರು’ ಎಂಬ ಭಾವಚಿತ್ರವನ್ನು ತಯಾರಿಸಿಕೊಳ್ಳಬಹುದು.
ರಾಜಭವನದಲ್ಲಿ ಈಗ ತೀವ್ರ ಚಟುವಟಿಕೆಗಳು ನಡೆಯುತ್ತಿವೆ. ರಾಜ್ಯಪಾಲರು ತಮ್ಮ ಕಾನೂನು ಸಲಹೆಗಾರರ ಜೊತೆ ನಿರಂತರ ಸಭೆ ನಡೆಸುತ್ತಿದ್ದಾರೆ. ಮಮತಾ ಅವರ ಪತ್ರ ಮಧ್ಯರಾತ್ರಿಯೊಳಗೆ ತಲುಪುತ್ತದೆಯೇ, ಇಲ್ಲವೇ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಪೊಲೀಸ್ ಮತ್ತು ಆಡಳಿತ ವ್ಯವಸ್ಥೆಯನ್ನು ಎಚ್ಚರದಲ್ಲಿರಿಸಲಾಗಿದೆ. ಮೇ 7ರ ಮಧ್ಯರಾತ್ರಿ ಬಂಗಾಳ ರಾಜಕೀಯ ಇತಿಹಾಸದಲ್ಲಿ ಮಹತ್ವದ ಘಟ್ಟವಾಗಲಿದೆ. ಮಮತಾ ಕೊನೆಯ ಕ್ಷಣದಲ್ಲಿ ತೀರ್ಮಾನ ಬದಲಾಯಿಸುತ್ತಾರೆಯೇ, ಅಥವಾ ಬಂಗಾಳವು 24 ಗಂಟೆಗಳ ರಾಷ್ಟ್ರಪತಿ ಆಳ್ವಿಕೆಯನ್ನು ಕಾಣುತ್ತದೆಯೇ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಯಾವ ದಿಕ್ಕಿನಲ್ಲಿ ಬೆಳವಣಿಗೆ ನಡೆದರೂ, ಈ ಘಟನೆ ಭಾರತೀಯ ಸಾಂವಿಧಾನಿಕ ಇತಿಹಾಸದಲ್ಲಿ ಒಂದು ವಿಶೇಷ ಉದಾಹರಣೆಯಾಗಿ ಉಳಿಯುವುದು ಖಚಿತ.
ಸಿಎಂ ಅಭ್ಯರ್ಥಿ ಸುವೇಂದು ಪಿಎ ಹತ್ಯೆ ಕೇಸ್ ನಲ್ಲಿ, ಪ್ರಮುಖ ಸುಳಿವು ಪತ್ತೆ!