ಮೇ 4 ರಂದು ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ (BJP) ಭಾರೀ ಜಯ ಸಾಧಿಸಿ 207 ಸ್ಥಾನಗಳನ್ನು ಗೆದ್ದಿದೆ. ಈ ಜಯದ ನಂತರ, ರಾಜ್ಯದ ನೂತನ ಸಿಎಂ ಯಾರು ಎಂಬ ಕುತೂಹಲ ಹೆಚ್ಚಾಗಿದೆ. ಇದೀಗ ಕೊನೆಗೂ ನೂತನ ಮುಖ್ಯಮಂತ್ರಿಯ ಹೆಸರು ಅಂತಿಮಗೊಂಡಿದೆ.
ಬಿಜೆಪಿ ವಲಯದಿಂದ ಬಂದ ಮಾಹಿತಿಯ ಪ್ರಕಾರ, ತೃಣಮೂಲ ಕಾಂಗ್ರೆಸ್ನಿಂದ ಬಿಜೆಪಿ ಸೇರಿ, ಈಗ ವಿರೋಧ ಪಕ್ಷದ ನಾಯಕರಾಗಿರುವ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚು ಇದೆ. ಪಕ್ಷದ ಶ್ರೇಷ್ಟ ನಾಯಕತ್ವವೂ ಅವರ ಹೆಸರನ್ನು ಒಪ್ಪಿಕೊಂಡಿದೆ ಎಂದು ಹೇಳಲಾಗುತ್ತಿದೆ. ಕೇಂದ್ರ `ಗೃಹ ಸಚಿವ ಅಮಿತ್ ಶಾ ಮೇ 6 ರಂದು ಕೋಲ್ಕತ್ತಾಗೆ ಬರುವ ನಿರೀಕ್ಷೆಯಿದೆ. ಅವರು ಹೊಸದಾಗಿ ಆಯ್ಕೆಯಾದ ಶಾಸಕರ ಜೊತೆ ಸಭೆ ನಡೆಸಿ, ನಂತರ ಸುವೇಂದು ಅಧಿಕಾರಿ ಅವರನ್ನು ಅಧಿಕೃತವಾಗಿ ಸಿಎಂ ಅಭ್ಯರ್ಥಿ ಘೋಷಿಸುವ ಸಾಧ್ಯತೆ ಇದೆ.
ಚುನಾವಣಾ ಫಲಿತಾಂಶಗಳ ನಂತರ ಅಮಿತ್ ಶಾ ಅವರನ್ನು ಕೇಂದ್ರ ವೀಕ್ಷಕರಾಗಿ ಹಾಗೂ ಒಡಿಶಾ ಮುಖ್ಯಮಂತ್ರಿ ಮೋಹನ್ ಮಾಂಝಿ ಅವರನ್ನು ಸಹ ವೀಕ್ಷಕರಾಗಿ ನೇಮಿಸಲಾಗಿದೆ. ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರ ಪ್ರಕಾರ, ಮೇ 9 ರಂದು, ಅಂದರೆ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮ ದಿನದಂದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಹೊಸ ಸರ್ಕಾರವನ್ನು ರಚಿಸಲು ಯೋಜಿಸಿದೆ.
ಸುವೇಂದು ಅಧಿಕಾರಿ ಯಾಕೆ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮುಖ ಅಭ್ಯರ್ಥಿಯಾಗಿದ್ದಾರೆ ಎಂಬುದನ್ನು ನೋಡಿದರೆ, ಅವರು ಬಹಳ ಕಾಲ ತೃಣಮೂಲ ಕಾಂಗ್ರೆಸ್ನಲ್ಲಿ ಇದ್ದರು ಮತ್ತು ಮಮತಾ ಬ್ಯಾನರ್ಜಿ ಅವರ ಆಪ್ತರಲ್ಲಿ ಒಬ್ಬರಾಗಿದ್ದರು. ಆದರೆ 2021 ರ ವಿಧಾನಸಭಾ ಚುನಾವಣೆಗೆ ಮುನ್ನ ಅವರು ಮಮತಾ ಬ್ಯಾನರ್ಜಿ ಬಗ್ಗೆ ಅಸಮಾಧಾನಗೊಂಡು ಬಿಜೆಪಿ ಸೇರಿದರು. ನಂತರದಿಂದ ಅವರು ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ ವಿರುದ್ಧ ತೀವ್ರ ಪ್ರಚಾರ ನಡೆಸಿದರು. 2021 ರಲ್ಲಿ ನಂದಿಗ್ರಾಮ್ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ ದೊಡ್ಡ ಸುದ್ದಿಯಾಗಿದ್ದರು. ಈ ಬಾರಿ ಮಮತಾ ಬ್ಯಾನರ್ಜಿ ಭವಾನಿಪುರದಿಂದ ಸ್ಪರ್ಧಿಸಿದಾಗ, ಸುವೇಂದು ಅಧಿಕಾರಿ 15000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ
ಮಮತಾ ಬ್ಯಾನರ್ಜಿ ಅವರ ಸರ್ಕಾರದಲ್ಲಿ ಸುವೇಂದು ಅಧಿಕಾರಿ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಈಗ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿರುವುದರಿಂದ ಆಡಳಿತ ಮತ್ತು ವಿಧಾನಸಭಾ ಕಾರ್ಯಪದ್ಧತಿ ಎರಡರಲ್ಲಿಯೂ ಅವರಿಗೆ ಅನುಭವ ಇದೆ. ಈ ಹಿನ್ನೆಲೆಯಲ್ಲಿ, ಬಂಗಾಳದಲ್ಲಿ ಬಿಜೆಪಿ ಸರ್ಕಾರವನ್ನು ಮುನ್ನಡೆಸಲು ಸೂಕ್ತ ವ್ಯಕ್ತಿ ಎಂದು ಅವರನ್ನು ಪರಿಗಣಿಸಲಾಗುತ್ತಿದೆ.
ಮತ್ತೊಂದೆಡೆ, ತೃಣಮೂಲ ಕಾಂಗ್ರೆಸ್ ಈ ಚುನಾವಣೆಯಲ್ಲಿ ಕೇವಲ 80 ಸ್ಥಾನಗಳಿಗೆ ಕುಸಿದಿದ್ದರೂ, ಮಮತಾ ಬ್ಯಾನರ್ಜಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನಾನು ಯಾಕೆ ರಾಜೀನಾಮೆ ಕೊಡಬೇಕು? ನಾವು ಸೋತಿಲ್ಲ. ಜನಾದೇಶವನ್ನು ಕದ್ದಿದ್ದಾರೆ. ನಮ್ಮ ಸೋಲು ಜನರ ತೀರ್ಪಿನಿಂದಲ್ಲ, ಪಿತೂರಿಯಿಂದಾಗಿದೆ. ನಾನು ಸೋತಿಲ್ಲ, ಲೋಕಭವನಕ್ಕೆ ಹೋಗುವುದಿಲ್ಲ’ ಎಂದು ಹೇಳಿದ್ದಾರೆ.
ಮತ ಎಣಿಕೆಯ ವೇಳೆ ದೊಡ್ಡ ಮಟ್ಟದಲ್ಲಿ ಅಕ್ರಮ ನಡೆದಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಸುಮಾರು 100 ಸ್ಥಾನಗಳಲ್ಲಿ ಅಕ್ರಮ ನಡೆದಿದ್ದು, ತಮ್ಮ ಪಕ್ಷದ ಶಕ್ತಿಯನ್ನು ಕುಗ್ಗಿಸಲು ಉದ್ದೇಶಪೂರ್ವಕವಾಗಿ ಮತ ಎಣಿಕೆಯನ್ನು ನಿಧಾನಗೊಳಿಸಲಾಯಿತು ಎಂದು ಅವರು ಹೇಳಿದ್ದಾರೆ. ‘ನಾವು ಬಿಜೆಪಿ ವಿರುದ್ಧವಲ್ಲ, ಬಿಜೆಪಿ ಪರ ಕೆಲಸ ಮಾಡುತ್ತಿದ್ದ ಚುನಾವಣಾ ಆಯೋಗದ ವಿರುದ್ಧ ಹೋರಾಡುತ್ತಿದ್ದೆವು. ನನ್ನ ರಾಜಕೀಯ ಜೀವನದಲ್ಲಿ ಇಂತಹ ಚುನಾವಣೆಯನ್ನು ನಾನು ನೋಡಿಲ್ಲ’ ಎಂದು ಅವರು ಹೇಳಿದ್ದಾರೆ. ತಜ್ಞರ ಅಭಿಪ್ರಾಯದ ಪ್ರಕಾರ, ಈ ರೀತಿಯ ನಿಲುವು ಸಂವಿಧಾನದ ವ್ಯಾಪ್ತಿಗೆ ವಿರುದ್ಧವಾಗಿದೆಯೆಂಬ ಪ್ರಶ್ನೆ ಮೂಡಿದೆ ಮತ್ತು ಅಗತ್ಯವಿದ್ದರೆ ರಾಜ್ಯಪಾಲರು ಅವರನ್ನು ವಜಾಗೊಳಿಸುವ ಸಾಧ್ಯತೆಗಳೂ ಇವೆ.