newsics.com/ನ್ಯೂಸಿಕ್ಸ್
ದಾಂಡೇಲಿ : ಸ್ಥಳೀಯವಾಗಿರುವ ಸಾರ್ವಜನಿಕ ಶೌಚಾಲಯ ಹದಗೆಟ್ಟಿರುವ ಹಿನ್ನಲೆಯಲ್ಲಿ ನಿತ್ಯಕರ್ಮಕ್ಕಾಗಿ ನದಿಗಳಿದಿದ್ದ ವ್ಯಕ್ತಿಯೋರ್ವನ ಮೇಲೆ ಮೊಸಳೆಯೊಂದು ದಾಳಿ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ಭಾನುವಾರ ಬೆಳಿಗ್ಗೆ ನಗರದ ಕುಳಗಿ ರಸ್ತೆಯ ಹತ್ತಿರ ಕಾಳಿ ನದಿಯಲ್ಲಿ ನಡೆದಿದೆ.
ಸ್ಥಳೀಯ ಕುಳಗಿ ರಸ್ತೆಯ ನಿವಾಸಿ ಆನಂದ ಲಲ್ಲೂಜಿ ಮಣ್ಣವಡ್ಡರ (ವ.42) ಎಂಬವರೇ ಮೊಸಳೆಯ ದಾಳಿಗಳಿಗಾಗಿ ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಇವರು ಅಲ್ಲೆ ಹತ್ತಿರದಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆಂದು ಹೋಗಿದ್ದರು. ಆದರೆ ಸಾರ್ವಜನಿಕ ಶೌಚಾಲಯ ಹದಗೆಟ್ಟಿರುವ ಹಿನ್ನಲೆಯಲ್ಲಿ ನಿತ್ಯಕರ್ಮಕ್ಕಾಗಿ ಕಾಳಿ ನದಿಗೆ ಇಳಿದಿದ್ದರು.ಈ ಸಂದರ್ಭದಲ್ಲಿ ನದಿಯಲ್ಲಿ ಮೊಸಳೆಯೊಂದು ಏಕಾಏಕಿ ದಾಳಿ ನಡೆಸಿ, ಹೊತ್ತೊಯ್ಯಲು ಮುಂದಾಗಿದೆ.
ಮೊಸಳೆಯ ದಾಳಿಯಿಂದ ಗಾಯಗೊಂಡ ಆನಂದ ಲಲ್ಲೂಜಿ ಮಣ್ಣವಡ್ಡರ ಅವರು ಕಿರುಚಾಡುವುದನ್ನು ಕೇಳಿಸಿಕೊಂಡ ಸ್ಥಳೀಯರು ತಕ್ಷಣವೇ ಬೊಬ್ಬೆ ಹಾಕಿ ಮೊಸಳೆಯನ್ನು ಓಡಿಸಿದ್ದಾರೆ. ಕಾಲಿಗೆ ಹಾಗೂ ಇನ್ನಿತರ ಭಾಗಗಳಿಗೆ ಗಾಯಗೊಂಡ ಆನಂದ ಲಲ್ಲೂಜಿ ಮಣ್ಣವಡ್ಡರ ಅವರನ್ನು ತಕ್ಷಣವೇ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ರವಾನಿಸಲಾಗಿದೆ.
ಸ್ಥಳಕ್ಕೆ ಸಿಪಿಐ ಶಿವಾನಂದ ಅಂಬಿಗೇರ, ಪಿಎಸ್ಐ ಅಮೀನ್ ಅತ್ತಾರ ಹಾಗೂ ಪೊಲೀಸ್ ಸಿಬ್ಬಂದಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ನದಿಯ ಹತ್ತಿರದ ಪ್ರದೇಶದಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.
https://www.newsics.com/2026/05/03/three-killed-in-collision-between-sand-laden-lorry-and-car/