newsics.com
ಬೆಂಗಳೂರು: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಬೆನ್ನಲ್ಲೇ ಜನಪ್ರತಿನಿಧಿ ಕಾಯ್ದೆಯ ಪ್ರಕಾರ ಶಾಸಕ ಸ್ಥಾನದಿಂದ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಅನರ್ಹರಾಗಿದ್ದಾರೆ. ನ್ಯಾಯಾಲಯದ ತೀರ್ಪಿನ ಪ್ರತಿ ಬಂದ ಕೂಡಲೇ ವಿಧಾನಸಭೆ ಕಾರ್ಯದರ್ಶಿ ನಿಯಮದಂತೆ ಅನರ್ಹತೆಯ ಆದೇಶ ಹೊರಡಿಸಲಿದ್ದಾರೆ.
ಈ ಮೂಲಕ ಎರಡು ಬಾರಿ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಮತ್ತು ಒಂದು ಬಾರಿ ಸಚಿವರಾಗಿದ್ದ ವಿನಯ್ ಕುಲಕರ್ಣಿ ರಾಜಕೀಯ ಭವಿಷ್ಯಕ್ಕೆ ಕಾರ್ಮೋಡ ಕವಿದಿದೆ.
ಜನಪ್ರತಿನಿಧಿಗಳ ಕಾಯ್ದೆ-1951, ಸೆಕ್ಷನ್ 8(3)ರಂತೆ ಅಪರಾಧ ಪ್ರಕರಣದಲ್ಲಿ ಜನಪ್ರತಿನಿಧಿಗಳು ಕನಿಷ್ಠ ಎರಡು ವರ್ಷ ಶಿಕ್ಷೆಗೆ ಒಳಗಾದರೆ ಅವರು ಶಾಸಕತ್ವದಿಂದ ಅನರ್ಹರಾಗಲಿದ್ದಾರೆ. ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಜನಪ್ರತಿನಿಧಿ ನ್ಯಾಯಾಲಯದ ತೀರ್ಪಿನ ಪ್ರತಿ ಲಭಿಸುತ್ತಿದ್ದ ಹಾಗೆಯೇ ವಿಧಾನಸಭೆ ಕಾರ್ಯದರ್ಶಿಗಳು ವಿನಯ್ ಕುಲಕರ್ಣಿ ಅನರ್ಹತೆಯ ಆದೇಶ ಹೊರಡಿಸಲಿದ್ದಾರೆ. ಶಿಕ್ಷೆ ಪ್ರಕಟಿಸಿದ ದಿನಾಂಕದಿಂದ ಅನರ್ಹ ಆದೇಶ ಜಾರಿಗೆ ಬರಲಿದೆ ಎಂದು ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕಾಯ್ದೆಯಂತೆ ಈ ಅನರ್ಹತೆಯು ಶಿಕ್ಷೆಯ ಅವಧಿ ಮುಕ್ತಾಯದವರೆಗೆ ಮತ್ತು ಶಿಕ್ಷೆ ಅವಧಿ ಮುಗಿದ ಬಳಿಕ ಆರು ವರ್ಷಗಳವರೆಗೆ ಮುಂದುವರಿಯಲಿದೆ. ಅಲ್ಲಿಯವರೆಗೆ ವಿನಯ್ ಕುಲಕರ್ಣಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ವಿನಯ್ ಕುಲಕರ್ಣಿ ಈ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೊರೆ ಹೋಗಬಹುದು. ಒಂದು ವೇಳೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಶಿಕ್ಷೆಗೆ ತಡೆಯಾಜ್ಞೆ ನೀಡಿದರೆ, ವಿನಯ್ ಕುಲಕರ್ಣಿ ಅನರ್ಹತೆ ರದ್ದಾಗಲಿದೆ.
ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಕೇವಲ ದೋಷಿ ಎಂಬ ತೀರ್ಪಿಗೆ ತಡೆಯಾಜ್ಞೆ ನೀಡಿದರೆ ಅನರ್ಹತೆ ರದ್ದಾಗುವುದಿಲ್ಲ. ಶಿಕ್ಷೆಗೆ ತಡೆಯಾಜ್ಞೆ ನೀಡಿದರೆ ಮಾತ್ರ ಅನರ್ಹತೆ ರದ್ದಾಗಲಿದೆ.
ಕಾರವಾರ ಶಾಸಕ ಸತೀಶ್ ಸೈಲ್ ವಿಚಾರದಲ್ಲಿ ಹೈಕೋರ್ಟ್, ಸೈಲ್ ಅವರ ವಿರುದ್ಧದ ಶಿಕ್ಷೆ ಹಾಗೂ ಏಳು ವರ್ಷದ ಜೈಲು ಶಿಕ್ಷೆ ತೀರ್ಪನ್ನು ಅಮಾನತು ಮಾಡಿತ್ತು. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ವಿರುದ್ಧದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಿಕ್ಷೆ ತೀರ್ಪಿನ ಹಿನ್ನೆಲೆಯಲ್ಲಿ ಅವರನ್ನು ಅನರ್ಹಗೊಳಿಸಲಾಗಿತ್ತು. ಬಳಿಕ ತೆಲಂಗಾಣ ಹೈಕೋರ್ಟ್ ಶಿಕ್ಷೆ ತೀರ್ಪನ್ನು ಅಮಾನತು ಮಾಡಿದ ಕಾರಣ ಅವರ ಅನರ್ಹತೆ ಆದೇಶವನ್ನು ಹಿಂಪಡೆಯಲಾಗಿತ್ತು. ವಿನಯ್ ಕುಲಕರ್ಣಿ ವಿಚಾರದಲ್ಲೂ ಹೈಕೋರ್ಟ್ ಶಿಕ್ಷೆಯನ್ನು ಅಮಾನತಿನಲ್ಲಿಟ್ಟರೆ ರಿಲೀಫ್ ಸಿಗಲಿದೆ.
ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಅಪರಾಧಿಗಳಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಇತರೆ 16 ಮಂದಿ ತಪ್ಪಿತಸ್ಥರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ (ಏ.17) ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
Young woman insulted the soldiers ಸೈನಿಕರ ಅವಹೇಳನ ಮಾಡಿದ ಯುವತಿ ಹೇಳಿದ್ದೇನು? ವಿಡಿಯೋ ನೋಡಿ
ಸೋಪ್ ಕಂಪನಿ ಜಾಹೀರಾತು ಪ್ರಕರಣದಲ್ಲಿ ಕೋರ್ಟ್ಗೆ ಹೋದ ತಮನ್ನಾಗೆ ಹಿನ್ನಡೆ