newsics.com
ಇಟಾನಗರ (ಅರುಣಾಚಾಲ ಪ್ರದೇಶ): ಇಲ್ಲಿನ ದಟ್ಟ ಕಾಡಿನಲ್ಲಿ ಕಳೆದ ವಾರ ಆರಂಭಗೊಂಡಿದ್ದ ‘ಆಪರೇಷನ್ ಗಜ’ ಸಂಪೂರ್ಣವಾಗಿ ಯಶಸ್ವಿಯಾಗಿದ್ದು, ಕರ್ನಾಟಕ ಅರಣ್ಯ ಇಲಾಖೆಯ ತಂಡವು ಎರಡು ಮದ್ದಾನೆಗಳನ್ನು ಸೆರೆ ಹಿಡಿದಿದೆ.
ತಿರಪ್ ಜಿಲ್ಲೆಯ ಮಾಜಿ ಶಾಸಕ ಹಾಗೂ ಲೋಹಿತ್ ಜಿಲ್ಲೆಯ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹತ್ತಾರು ಜನರ ಪ್ರಾಣ ತೆಗೆದು ಜನರಿಗೆ ದುಃಸ್ವಪ್ನವಾಗಿ ಕಾಡಿ ತೀವ್ರ ಆತಂಕ ಮೂಡಿಸಿದ್ದ ಎರಡು ಗಂಡು ಮಕಾನಗಳನ್ನು (ದಂತವಿಲ್ಲದ ಗಂಡಾನೆ) ಸೋಮವಾರ ಸಂಜೆ ಸೆರೆಹಿಡಿಯವ ಮೂಲಕ ಆಪರೇಷನ್ ಯಶಸ್ವಿಯಾಗಿದೆ.
ಕಾಡಂಚಿನ ಗ್ರಾಮಗಳಲ್ಲಿ ಭೀತಿ ಮೂಡಿಸಿದ್ದ ಆನೆಗಳನ್ನು ಹಿಡಿಯಲು ಸಹಕಾರ ನೀಡುವಂತೆ ಅರುಣಾಚಲದ ಹುಲಿ ಮತ್ತು ಆನೆ ಯೋಜನೆಯ ಪ್ರಧಾನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕನ್ನಡಿಗ ಡಾ.ಎ.ಟಿ.ದಾಮೋದರ ಅವರು ಕರ್ನಾಟಕದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತು ಪಿಸಿಸಿಎಫ್ (ವನ್ಯಜೀವಿ) ಕುಮಾರ್ ಪುಷ್ಕರ್ ಅವರನ್ನು ಕೋರಿದ್ದರು. ಇದಕ್ಕೆ ಪೂರ್ಣ ಸಹಕಾರ ನೀಡಿರುವ ಕರ್ನಾಟಕವು ನಾಗರಹೊಳೆ ಹುಲಿ ಅಭಯಾರಣ್ಯದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಪಶುವೈದ್ಯಧಿಕಾರಿ ಮತ್ತು ಆನೆಗಳ ಪ್ರಭಾರಿ ಡಾ. ರಮೇಶ ಎಚ್. ಅವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರವು ಸುಮಾರು 15 ಸದಸ್ಯರ ತಜ್ಞರ ತಂಡವನ್ನು, ಎಐ ಸಕ್ರಿಯಗೊಳಿಸಿದ ಥರ್ಮಲ್ ಡ್ರೋಣ್ ಮತ್ತು ಇತರ ವಿಶೇಷ ಉಪಕರಣಗಳು ಸೇರಿದಂತೆ ವಿಶ್ವ ದರ್ಜೆಯ ಆನೆ ಟ್ರ್ಯಾಕಿಂಗ್ ಉಪಕರಣಗಳನ್ನು ಕಳುಹಿಸಿತ್ತು.
ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗೆ ಇಲ್ಲಿಯ ತಿರಪ್ ಜಿಲ್ಲೆಯ ದೇವಮಾಲಿ ಅರಣ್ಯ ವಿಭಾಗ ಮತ್ತು ಲೋಹಿತ್ ಜಿಲ್ಲೆಯ ಲೋಹಿತ್ ಅರಣ್ಯ ವಿಭಾಗದ ಸುನ್ಪುರ ಅರಣ್ಯ ವ್ಯಾಪ್ತಿಯಲ್ಲಿ ನವದೆಹಲಿಯ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಧಿಕಾರ, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಮತ್ತು ಡೆಹ್ರಾಡೂನ್ನ ಭಾರತೀಯ ವನ್ಯಜೀವಿ ಸಂಸ್ಥೆಗಳ ಮಾರ್ಗದರ್ಶನದಲ್ಲಿ ನಡೆದ ಬೃಹತ್ ಜಂಟಿ ಕಾರ್ಯಾಚರಣೆಯಲ್ಲಿ ಎರಡೂ ಆನೆಗಳನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.
ಕಷ್ಟ ಕಾಲದಲ್ಲಿ ಸಕಾಲಕ್ಕೆ ನೆರವು ನೀಡಿ ಮಕಾನಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದ ಕರ್ನಾಟಕದ ತಂಡಕ್ಕೆ ಮುಖ್ಯಮಂತ್ರಿ ಪೇಮಾ ಖಂಡು ಧನ್ಯವಾದ ತಿಳಿಸಿದ್ದಾರೆ.
https://www.facebook.com/share/v/1KbtXVBdcc/
https://www.facebook.com/share/v/1KbtXVBdcc/