https://youtube.com/shorts/Uyg7eLAiO4c?si=HGl_mdjplGhkcNCz
newsics.com
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಉದ್ವಿಗ್ನತೆಯಿಂದಾಗಿ ಎದುರಾಗಿದ್ದ ಅಡುಗೆ ಅನಿಲ ಪೂರೈಕೆ ವ್ಯತ್ಯಯದ ಆತಂಕಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು (ಎಲ್ಪಿಜಿ) ಹೊತ್ತ ‘ಶಿವಾಲಿಕ್’ ಹಡಗು ಯುದ್ಧ ಪೀಡಿತ ಹೊರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿ ಸೋಮವಾರ ಸಂಜೆ ಗುಜರಾತ್ನ ಮುಂದ್ರಾ ಬಂದರನ್ನು ತಲುಪಿದೆ. ಇದು ಕೇವಲ ಗುಜರಾತ್ಗೆ ಮಾತ್ರವಲ್ಲ, ಕರ್ನಾಟಕದ ಮಂಗಳೂರಿಗೂ ಹಾಗೂ ದಕ್ಷಿಣ ಭಾರತದ ಎಲ್ಪಿಜಿ ಬಳಕೆದಾರರಿಗೂ ದೊಡ್ಡ ಮಟ್ಟದ ನೆಮ್ಮದಿ ತಂದಿದೆ..
ಒಂದು ಹಡಗಿನಿಂದ 26,000 ಮೆಟ್ರಿಕ್ ಟನ್ ಎಲ್ಪಿಜಿ ಇಂದು ಮಂಗಳೂರಿನಲ್ಲಿ ಅನ್ಲೋಡ್ ಆಗಲಿದೆ. ಇದು ದೇಶದ ಎಲ್ಪಿಜಿ ಕೊರತೆ ಭೀತಿಯನ್ನು ತಾತ್ಕಾಲಿಕವಾಗಿ ನೀಗಿಸುವ ನಿರೀಕ್ಷೆ ಇದೆ.
ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು, ನೂರಾರು ತೈಲ ಮತ್ತು ಎಲ್ಪಿಜಿ (LPG) ಸಾಗಿಸುತ್ತಿದ್ದ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿದ್ದವು. ಆದರೆ ಭಾರತದ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ ಇರಾನ್ ಈಗಾಗಲೇ ನಾಲ್ಕು ಹಡಗುಗಳಿಗೆ ಅನುಮತಿ ನೀಡಿದ್ದು, ಅವುಗಳಲ್ಲಿ 2 ಹಡಗುಗಳು ಈಗಾಗಲೇ ಭಾರತ ತಲುಪಿವೆ.
ಮಾರ್ಚ್ 12ರಂದು ಕಚ್ಚಾ ತೈಲ ಹೊತ್ತ ಮೊದಲ ಹಡಗು ಮುಂಬೈ ತಲುಪಿತ್ತು. ನಂತರ ಮಾರ್ಚ್ 16ರಂದು ಎಲ್ಪಿಜಿ ಸಾಗಿಸುತ್ತಿದ್ದ ಶಿವಾಲಿಕ್ ಹಡಗು ಗುಜರಾತ್ನ ಮುಂದ್ರಾ ಬಂದರಿಗೆ ಆಗಮಿಸಿತು. ಈ ಹಡಗಿನಲ್ಲಿ ಒಟ್ಟು 46 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ ಇದ್ದು, ಅದರಲ್ಲಿ ಸುಮಾರು 20 ಸಾವಿರ ಮೆಟ್ರಿಕ್ ಟನ್ ಅನ್ನು ಮುಂದ್ರಾ ಬಂದರಿನಲ್ಲಿ ಅನ್ಲೋಡ್ ಮಾಡಲಾಗಿದೆ.
ಉಳಿದ 26 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿಯನ್ನು ಇಂದೇ ಮಂಗಳೂರು ಬಂದರಿಗೆ ತಂದು ಅನ್ಲೋಡ್ ಮಾಡುವ ಸಾಧ್ಯತೆ ಇದೆ. ಇದರಿಂದ ದೇಶದಲ್ಲಿ ಉಂಟಾಗಿದ್ದ ಎಲ್ಪಿಜಿ ಕೊರತೆ ಭೀತಿಗೆ ತಾತ್ಕಾಲಿಕ ರಿಲೀಫ್ ಸಿಗುವ ನಿರೀಕ್ಷೆಯಿದೆ.
ಇನ್ನು ನಂದಾದೇವಿ ಮತ್ತು ಜಗ್ ಲಾಡ್ಕಿ ಎಂಬ ಮತ್ತೆರಡು ಹಡಗುಗಳು ಇಂದು ಭಾರತ ತಲುಪುವ ಸಾಧ್ಯತೆ ಇದೆ. ನಂದಾದೇವಿ ಹಡಗಿನಲ್ಲಿ ಸುಮಾರು 40 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ ಇದ್ದು, ಜಗ್ ಲಾಡ್ಕಿ ಹಡಗು ಸುಮಾರು 81 ಸಾವಿರ ಟನ್ ಕಚ್ಚಾ ತೈಲವನ್ನು ಹೊತ್ತು ಬರುತ್ತಿದೆ.