https://youtube.com/shorts/fD6pvkz7g8c?si=uKQ1N3BMJTvK6QIw
newsics.com
55 ವರ್ಷದ ವ್ಯಕ್ತಿಯೊಬ್ಬ ಏಳನೇ ಬಾರಿಗೆ ಮದುವೆಯಾಗಲು ಸಿದ್ಧನಾಗಿದ್ದು, ಇದನ್ನು ತಡೆಯಲು ಆತನ ಅಪ್ರಾಪ್ತ ಮಗನೇ ಪೊಲೀಸ್ ಠಾಣೆಯ ಮೆಟ್ಟಿಲೇರುವ ಘಟನೆ ಉತ್ತರ ಪ್ರದೇಶದ ಆಜಂಗಢದಲ್ಲಿ ನಡೆದಿದೆ.
ಇಲ್ಲಿ 12ನೇ ಕ್ಲಾಸ್ ವಿದ್ಯಾರ್ಥಿ, ಸರ್ ನಮ್ಮಪ್ಪನ ಮದುವೆ ನಿಲ್ಲಿಸಿ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ಇಲ್ಲಾಂದ್ರೆ ನಮ್ಮಪ್ಪ ಮದುವೆ ಮಾಡಿಕೊಳ್ಳುವುದನ್ನು ಮುಂದೆಯೂ ನಿಲ್ಲಿಸಲ್ಲ ಎಂದು ಮಗ ಮನವಿ ಮಾಡಿಕೊಂಡಿದ್ದಾನೆ.
ಅಮರ್ಜಿತ್ ಮೌರ್ಯ ಎಂಬಾತ ತನ್ನ 55ನೇ ವಯಸ್ಸಿನಲ್ಲಿ ಏಳನೇ ಬಾರಿ ಹಸೆಮಣೆ ಏರಲು ಸಿದ್ಧನಾಗಿದ್ದನು. ಆದ್ರೆ ಈ ಮದುವೆಗೆ ಅಮರ್ಜಿತ್ ಮೌರ್ಯನ ಮೂರನೇ ಹೆಂಡತಿಯ ಆಪ್ರಾಪ್ತ ಮಗ ಶನಿ ಮೌರ್ಯ ಅಡ್ಡಿಯಾಗಿದ್ದಾನೆ. ನನ್ನ ತಂದೆ ಒಟ್ಟು ಆರು ಮದುವೆಯಾಗಿದ್ದಾನೆ. ಕೌಟುಂಬಿಕ ಕಲಹದಿಂದ ಪತ್ನಿಯರಿಂದ ತಂದೆ ದೂರವಾಗಿದ್ದಾನೆ. ಇದೀಗ ಏಳನೇ ಮದುವೆಗೆ ಸಿದ್ದತೆ ನಡೆಸ್ತಿದ್ದಾನೆ. ಈ ಮದುವೆ ನಿಲ್ಲಿಸಲು ನನಗೆ ಸಹಾಯ ಮಾಡಿ ಎಂದು ಶನಿ ಮೌರ್ಯ ಹೇಳಿದ್ದಾನೆ.
2024ರಲ್ಲಿ ಅಮರ್ಜಿತ್ ಮೌರ್ಯ ಆರನೇ ಮದುವೆಯಾಗಿದ್ದನು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಆರನೇ ಪತ್ನಿ ಒಡವೆ ಮತ್ತು ಜಮೀನಿನಲ್ಲಿ ಭಾಗ ಕೇಳಲು ಶುರು ಮಾಡಿದ್ದಾಳೆ. ನಂತರ ಆರನೇ ಪತ್ನಿಯೂ ಅಮರ್ಜಿತ್ ಮೌರ್ಯನಿಂದ ದೂರವಾಗಿದ್ದಾಳೆ. ಈ ಘಟನೆ ಬಳಿಕ ಅರ್ಮಜಿತ್ ಮತ್ತೆ ಮದುವೆಯಾಗಲ್ಲ ಎಂದು ಕುಟುಂಬಸ್ಥರೆಲ್ಲರೂ ಭಾವಿಸಿದ್ದರು. ಆದ್ರೆ ಅಮರ್ಜಿತ್ ಮತ್ತೆ ಮದುವೆಯಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ.
ತಂದೆಯ ಮದುವೆಗಳು ಕುಟುಂಬದ ಆರ್ಥಿಕಸ್ಥಿತಿ ಮೇಲೆ ಪರಿಣಾಮ ಬೀರುತ್ತಿದೆ. ಏಳನೇ ಮದುವೆಯ ಖರ್ಚಿಗಾಗಿ ತಂದೆ ಪೂರ್ವಜರ ಜಮೀನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಶನಿ ಮೌರ್ಯ ಹೇಳಿದ್ದಾನೆ. ಪೂರ್ವಜರಿಂದ ಬಂದಿರುವ ಜಮೀನು ಮಾರಾಟ ಸಂಬಂಧ ತಂದೆ ಮುಂಗಡವಾಗಿ 50 ಸಾವಿರ ರೂಪಾಯಿ ಹಣ ಪಡೆದುಕೊಂಡಿದ್ದಾರೆ. ಕುಟುಂಬದ ಅರ್ಧದಷ್ಟು ಜಮೀನು ಈಗಾಗಲೇ ಅಡಮಾನದಲ್ಲಿದ್ದು, ಅದರ ಸಾಲವನ್ನು ಮಕ್ಕಳೇ ಪಾವತಿಸುತ್ತಿದ್ದಾರೆ. ಈ ಜಮೀನು ಮಾರಾಟವಾದರೆ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂದು ಶನಿ ಮೌರ್ಯ ಪೊಲೀಸರಿಗೆ ವಿವರಿಸಿದ್ದಾನೆ.
ಶನಿ ಮೌರ್ಯ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಗ್ರಾಮಾಂತರ ಎಸ್ಪಿ ಚಿರಾಗ್ ಜೈನ್, ಪ್ರಾಥಮಿಕ ತನಿಖೆಯಲ್ಲಿ ಇದು ಕೇವಲ ಮದುವೆಗಳ ಪ್ರಕರಣದಂತೆ ಕಾಣುತ್ತಿಲ್ಲ. ಇದರಲ್ಲಿ ಜಮೀನು ಮತ್ತು ಆಸ್ತಿ ವಿವಾದದ ಆಯಾಮವೂ ಇದೆ ಎಂದು ಹೇಳಿದ್ದಾರೆ. ಪೊಲೀಸರು ಕುಟುಂಬಸ್ಥರ ಸದಸ್ಯರು ಮತ್ತು ಅರ್ಮಿಜಿತ್ ಮೌರ್ಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.