Subscribe ನ್ಯೂಸಿಕ್ಸ್ ಕನ್ನಡ
newsics.com
ಇತ್ತೀಚೆಗೆ ಉದ್ಯಮಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಾಕಿರೋ ಪೋಸ್ಟ್ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಜನ ಬರೀ ‘ಕೆಲಸಗಾರರಾಗಿ’ ಉಳಿದಿದ್ದಾರೆ, ಇಲ್ಲಿನವರಿಗೆ ಕೆಲಸ ಬಿಟ್ಟು ಬೇರೇನೂ ಗೊತ್ತಿಲ್ಲ ಅಂತ ಇವರು ಕಿಡಿಕಾರಿದ್ದಾರೆ. ಇದಕ್ಕೆ ಅವರು ‘ಬೆಂಗಳೂರು ವೈರಸ್’ ಅಂತ ಹೆಸರಿಟ್ಟಿದ್ದಾರೆ. ಈ ವೈರಸ್ನಿಂದ ತಪ್ಪಿಸಿಕೊಳ್ಳೋಕೆ ಅವರು ಸಿಟಿಯನ್ನೇ ಬಿಟ್ಟು ಗೋವಾಕ್ಕೆ ಹೋಗಿದ್ದಾರೆ.
ಅಲ್ಲಿನ ಶಾಂತಿಯುತ ಜೀವನದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅಂಕಿತಾ ವೆಂಗುರ್ಲೇಕರ್ ಅನ್ನೋ ಉದ್ಯಮಿ ಈ ಚರ್ಚೆಯನ್ನ ಶುರು ಮಾಡಿದವರು. ಇವರು ಇತ್ತೀಚೆಗೆ ಬೆಂಗಳೂರಿನ ಕೈವಾರ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗಿದ್ರು.
ಬೆಟ್ಟದ ತುದಿಯಲ್ಲಿ ನಿಂತು ತಂಪಾದ ಗಾಳಿ ಮತ್ತು ಮಂಜಿನ ಸೌಂದರ್ಯ ಸವಿಯೋ ಬದಲು, ಅಲ್ಲಿ ಇಬ್ಬರು ಸಾಫ್ಟ್ವೇರ್ ಇಂಜಿನಿಯರ್ಗಳು ಮಾತಾಡ್ತಿರೋದು ಇವರ ಕಿವಿಗೆ ಬಿತ್ತು.
ಅವರಿಬ್ಬರು ಒಬ್ಬರಿಗೊಬ್ಬರು “ನೀವೇನು ಮಾಡ್ತೀರಿ?” ಅಂತ ಕೇಳ್ತಿದ್ರು. ಅಲ್ಲಿಂದ ಶುರುವಾದ ಮಾತು ಸಂಬಳ, ಕೆಲಸದ ಅವಕಾಶ ಮತ್ತು ಕಂಪನಿಗಳ ಮೇಲೆ ನಿಂತುಬಿಡ್ತು.
ಈ ಘಟನೆ ಅಂಕಿತಾ ಅವರಿಗೆ ತುಂಬಾ ಬೇಸರ ತರಿಸಿತು. ಸುಂದರವಾದ ಪ್ರಕೃತಿಯ ನಡುವೆಯೂ ಜನರಿಗೆ ಕೆಲಸದ ಚಿಂತೆಯೇ ಕಾಡ್ತಿದೆ ಅಂದ್ರೆ ಇದು ಒಂದು ರೀತಿಯ ‘ವೈರಸ್’ ಅಲ್ವಾ ಅಂತ ಅವರು ಪ್ರಶ್ನಿಸಿದ್ದಾರೆ.
ಅಂಕಿತಾ ಅವರ ಪ್ರಕಾರ, ಬೆಂಗಳೂರಿನಲ್ಲಿ ನೀವು ಎಲ್ಲೇ ಹೋಗಿ ಅದು ಆಟದ ಮೈದಾನವಾಗಿರಲಿ, ಬೆಳಗಿನ ವಾಕಿಂಗ್ ಆಗಿರಲಿ ಅಥವಾ ಯಾರದ್ದೋ ಜೊತೆ ಡಿನ್ನರ್ ಪಾರ್ಟಿಗೆ ಹೋಗಿರಲಿ ಜನರು ಮೊದಲು ಕೇಳೋದು “ನೀವು ಏನು ಕೆಲಸ ಮಾಡ್ತೀರಿ?” ಅನ್ನೋ ಪ್ರಶ್ನೆಯನ್ನೇ.
ಅಷ್ಟೇ ಯಾಕೆ, ಯಾರದ್ದಾದ್ರೂ ಸಾವಿನ ಮನೆಯಲ್ಲಿ ಅಥವಾ ಹುಟ್ಟುಹಬ್ಬದ ಸಂಭ್ರಮದಲ್ಲೂ ಜನ ಕೆಲಸದ ಬಗ್ಗೆಯೇ ಮಾತಾಡ್ತಾರೆ.
ಮನುಷ್ಯರು ತಮ್ಮನ್ನು ತಾವು ಕೇವಲ ‘ಕೆಲಸಗಾರರು’ ಅಂತ ಅನ್ಕೊಂಡಿದ್ದಾರೆ. ಇದರಿಂದ ಸಂಬಂಧಗಳು, ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಹಾಳಾಗ್ತಿದೆ ಅಂತ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಕೆಲಸದ ಹುಚ್ಚನ್ನೇ ಅವರು “ಬೆಂಗಳೂರು ವೈರಸ್” ಅಂತ ಕರೆದಿದ್ದಾರೆ.
ಈ ಕೆಲಸದ ಒತ್ತಡದ ಜೀವನದಿಂದ ಬೇಸತ್ತ ಅಂಕಿತಾ ಅವರು ಬೆಂಗಳೂರು ಬಿಟ್ಟು ಗೋವಾಕ್ಕೆ ಶಿಫ್ಟ್ ಆಗಿದ್ದಾರೆ. ಅಲ್ಲಿನ ಜೀವನದ ವೇಗ ನಿಧಾನವಾಗಿದೆ ಮತ್ತು ನೆಮ್ಮದಿಯಾಗಿದೆ ಅನ್ನೋದು ಅವರ ಅಭಿಪ್ರಾಯ.
ಗೋವಾದಲ್ಲಿ ಜನ ಕೆಲಸವನ್ನೇ ಬದುಕು ಅನ್ಕೊಂಡಿಲ್ಲ, ಬದಲಿಗೆ ಜೀವನವನ್ನ ಎಂಜಾಯ್ ಮಾಡೋದಕ್ಕೆ ಆದ್ಯತೆ ನೀಡ್ತಾರೆ.
ಬೆಂಗಳೂರಿನಲ್ಲಿ ನಾವು ಬರೀ ಗಡಿಯಾರದ ಮುಳ್ಳಿನಂತೆ ಓಡ್ತಾ ಇರ್ತೀವಿ, ಆದ್ರೆ ಗೋವಾದಲ್ಲಿ ನಮಗಾಗಿ ನಾವು ಸಮಯ ಮೀಸಲಿಡಬಹುದು ಅಂತ ಅವರು ಹೇಳಿದ್ದಾರೆ. ಕೆಲಸದ ನಡುವೆ ಸಮತೋಲನ ಇರಬೇಕು ಅನ್ನೋದು ಅವರ ಮುಖ್ಯ ಉದ್ದೇಶ. ಅಂಕಿತಾ ವೆಂಗುರ್ಲೇಕರ್ ಅವರ ಈ ಮಾತುಗಳು ಲಿಂಕ್ಡ್ಇನ್ನಲ್ಲಿ ಸಖತ್ ವೈರಲ್ ಆಗ್ತಿವೆ. ಬಹಳಷ್ಟು ಜನ ಅವರ ಮಾತನ್ನು ಒಪ್ಪಿದ್ದಾರೆ, “ಹೌದು, ಬೆಂಗಳೂರಿನಲ್ಲಿ ನಾವು ನಮ್ಮ ಅಸ್ತಿತ್ವವನ್ನೇ ಮರೆತು ಓಡ್ತಿದ್ದೇವೆ” ಅಂತ ಕಮೆಂಟ್ ಮಾಡ್ತಿದ್ದಾರೆ.