Subscribe ನ್ಯೂಸಿಕ್ಸ್ ಕನ್ನಡ
newsics.com
ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ತುಮಕೂರು ಮೂಲದ 22 ವರ್ಷದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಸ್ಥಳೀಯ ಪೊಲೀಸರು ಅವರ ಮೃತದೇಹವನ್ನು ಪತ್ತೆ ಮಾಡಿದ್ದಾರೆ ಎಂದು ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ರಾಯಭಾರಿ ಕಚೇರಿ ಘೋಷಿಸಿದೆ.
ಕಳೆದ 6 ದಿನಗಳ ಹಿಂದೆ ನಾಪತ್ತೆಯಾಗಿದ್ದ ಸಾಕೇತ್ ಶ್ರೀನಿವಾಸಯ್ಯ ಶವವಾಗಿ ಪತ್ತೆಯಾಗಿದ್ದು, ಇದೀಗ ಈ ಸಾವಿನ ಬಗ್ಗೆ ಹಲವು ಅನುಮಾನ ಮೂಡಿದೆ.
ಸಾಕೇತ್ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದರು. ಫೆಬ್ರವರಿ 9ರಿಂದ ಅವರು ಕಾಣೆಯಾಗಿದ್ದರು. ಆದರೆ ಇದೀಗ ಶವವಾಗಿ ಪತ್ತೆಯಾಗಿದ್ದು, ರೂಮ್ ಮೇಟ್ ಸಾಕೇತ್ ಬಗ್ಗೆ ಹಲವು ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.
ಸಾಕೇತ್ ಕೊನೆಯ ಬಾರಿಗೆ ಟಿಲ್ಡೆನ್ ರೀಜನಲ್ ಪಾರ್ಕ್ನ ಸರೋವರದ ಬಳಿ ಕಂಡುಬಂದಿದ್ದರು ಎಂದು ಮಾಹಿತಿ ಇದೆ. ಅವರ ತಂದೆ ಶ್ರೀನಿವಾಸಯ್ಯ ಅವರು ಫೆಬ್ರವರಿ 9ರಂದು ಕೊನೆಯ ಬಾರಿಗೆ ಮಗನೊಂದಿಗೆ ಮಾತನಾಡಿದ್ದಾಗಿ ಹೇಳಿದ್ದರು. ಕುಟುಂಬದವರು ತಮ್ಮ ಮಗನನ್ನು ಹುಡುಕಲು ರೂಮ್ಮೇಟ್ಗಳು ಮತ್ತು ಇತರರೊಂದಿಗೆ ಸಂಪರ್ಕದಲ್ಲಿದ್ದರು. ಸರ್ಕಾರಕ್ಕೆ ಪತ್ರ ಬರೆದು ಸಹಾಯ ಕೋರಿದ್ದರು. ಫೆಬ್ರವರಿ 13ರಂದು ಕರ್ನಾಟಕ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು ಸಹಾಯ ಕೋರಿದ್ದರು. ಬರ್ಕ್ಲಿ ಪೊಲೀಸ್ ಇಲಾಖೆಗೆ ಔಪಚಾರಿಕ ದೂರು ದಾಖಲಿಸಲಾಗಿತ್ತು.
ಸಾಕೇತ್ ನಾಪತ್ತೆಯಾಗಿದ್ದಾಗಿನಿಂದ ಕುಟುಂಬದವರು ತೀವ್ರ ಆತಂಕದಲ್ಲಿದ್ದರು. ಅನಿವಾಸಿ ಭಾರತೀಯ ಸಮುದಾಯದವರು ಸಹಾಯಕ್ಕೆ ಮುಂದಾಗಿದ್ದರು. ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ರಾಯಭಾರಿ ಕಚೇರಿ ಸ್ಥಳೀಯ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಕುಟುಂಬಕ್ಕೆ ಬೆಂಬಲ ನೀಡುತ್ತಿತ್ತು. ಆದರೆ ಕಾಣೆಯಾದ ಭಾರತೀಯ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಅವರ ಮೃತದೇಹ ಪತ್ತೆಯಾಗಿರುವುದನ್ನು ಸ್ಥಳೀಯ ಪೊಲೀಸರು ದೃಢಪಡಿಸಿದ್ದಾರೆ ಎಂದು ತಿಳಿಸಲು ಕಾನ್ಸುಲೇಟ್ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ. ಈ ತೀವ್ರ ಸಂಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಎಂದು ರಾಯಭಾರಿ ಕಚೇರಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಇದೀಗ ಸಾಕೇತ್ ಅವರ ರೂಮ್ಮೇಟ್ ಬನೀಟ್ ಸಿಂಗ್ ಅವರು ಭಾವುಕ ಪೋಸ್ಟ್ ಮಾಡಿದ್ದಾರೆ. ಸಾಕೇತ್ ನನ್ನ ಜೊತೆ ಬದುಕುತ್ತಿದ್ದ, ಊಟ ಮಾಡುತ್ತಿದ್ದ, ಪ್ರಯಾಣಿಸುತ್ತಿದ್ದ, ನಗುತ್ತಿದ್ದ ಮತ್ತು ತಮಾಷೆ ಮಾಡುತ್ತಿದ್ದ. ಇಂತಹ ನನ್ನ ಸ್ನೇಹಿತನಿಂದ ನಾನು ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಬರೆದಿದ್ದಾರೆ. ಜನವರಿ 21ರಂದು ಸಾಕೇತ್ ಅನ್ಝಾ ಕೆರೆಯತ್ತ ಹೋಗೋಣ ಎಂದಿದ್ದರು. ಆದರೆ ಅಂದು ಹೋಗಿರಲಿಲ್ಲ. ಕೆಲವು ದಿನಗಳಲ್ಲಿ ಅದೇ ಕೆರೆಯ ಬಳಿ ಅವರ ಜೀವನ ಮುಗಿಯುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ಬನೀಟ್ ಸಿಂಗ್ ಭಾವುಕರಾಗಿ ಬರೆದಿದ್ದಾರೆ.
ಇನ್ನೂ ಸಾಕೇತ್ ಬಗ್ಗೆ ಮಾತನಾಡಿದ ರೂಮ್ಮೇಟ್ ಬನೀಟ್ ಸಿಂಗ್, ಕಳೆದ ಕೆಲವು ದಿನಗಳ ಹಿಂದೆ ಇಂದ ದುಃಖದಲ್ಲಿ ಇದ್ದ. ಕಳೆದ 2 ವಾರದಿಂದ ಸಾಕೇತ್ ಏನೂ ತಿನ್ನುತ್ತಿರಲಿಲ್ಲ ಎಂದು ಹೇಳಿದ್ದಾರೆ. ಚಿಪ್ಸ್ ಮಾತ್ರ ತಿನ್ನುತ್ತಿದ್ದರು. ಜನರ ಜೊತೆಗಿನ ಮಾತುಕತೆ ಕಡಿಮೆಯಾಗಿತ್ತು. ನನ್ನ ಬಗ್ಗೆ ಯಾರು ಯೋಚಿಸುತ್ತಾರೆ ಅಂತ ಅನಿಸಿಲ್ಲ. ನಾನು ಕಾಳಜಿ ವಹಿಸುವುದು ಬಿಟ್ಟಿದ್ದೇನೆ. ಯಾವುದರ ಬಗ್ಗೆ ಯೋಚನೆ ಮಾಡಲ್ಲ ಎಂದು ಉತ್ತರ ನೀಡುತ್ತಿದ್ದರು ಎಂದು ತಿಳಿದುಬಂದಿದೆ.
ಸಾಕೇತ್ ಅವರ ನಿಧನದ ಸುದ್ದಿಯೊಂದಿಗೆ ಕುಟುಂಬ ಮತ್ತು ಸ್ನೇಹಿತರು ತೀವ್ರ ದುಃಖದಲ್ಲಿದ್ದಾರೆ. ಭಾರತೀಯ ರಾಯಭಾರಿ ಕಚೇರಿ ಪಾರ್ಥಿವ ಶರೀರವನ್ನು ಭಾರತಕ್ಕೆ ಕಳುಹಿಸಲು ಸಹಾಯ ಮಾಡುತ್ತಿದೆ. ಸಾಕೇತ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.