https://youtube.com/shorts/2Z4I0oFUbOQ?si=E_8G5fLxr2N6s9QC
Subscribe ನ್ಯೂಸಿಕ್ಸ್ ಕನ್ನಡ
newsics.com
ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamta Banerjee) ಅವರು ರಾಜ್ಯದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅನ್ನು ಪ್ರಶ್ನಿಸಿ ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ವೇಳೆ ಬುಧವಾರ ಸುಪ್ರೀಂ ಕೋರ್ಟ್ನಲ್ಲಿ (Supreme Court) ನಾಟಕೀಯ ಘಟನೆಗಳು ನಡೆದವು.
ಇದೇ ಮೊದಲ ಬಾರಿಗೆ ಹಾಲಿ ಮುಖ್ಯಮಂತ್ರಿಯೊಬ್ಬರು ಸುಪ್ರೀಂ ಕೋರ್ಟ್ ಮುಂದೆ ಖುದ್ದಾಗಿ ಹಾಜರಾಗಿ ಮೌಖಿಕ ವಾದ ಮಂಡಿಸಿದ ಘಟನೆ ನಡೆಯಿತು. ಈ ವೇಳೆ ಒಂದು ಹಙತದಲ್ಲಿ ಮಮತಾ ಬ್ಯಾನರ್ಜಿಯವರ ವರ್ತನೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿಯನ್ನು ಪ್ರತಿನಿಧಿಸಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಪಂಚೋಲಿ ಅವರನ್ನೊಳಗೊಂಡ ಪೀಠದ ಮುಂದೆ ಕಾನೂನು ವಿಷಯಗಳ ಕುರಿತು ವಾದ ಮಂಡಿಸಿದರೂ, ಮಮತಾ ಬ್ಯಾನರ್ಜಿ ಕೂಡ ಸಂಕ್ಷಿಪ್ತವಾಗಿ ತಮ್ಮ ವಾದ ಮಂಡಿಸಿದರು.
SIR ಪ್ರಕ್ರಿಯೆಯು ‘ಸೇರ್ಪಡೆಗಾಗಿ ಅಲ್ಲ, ಅಳಿಸುವಿಕೆಗಾಗಿ’ ಎಂದು ಮಮತಾ ಬ್ಯಾನರ್ಜಿ ಹೇಳಿದರು. ಮದುವೆಯ ನಂತರ ತಮ್ಮ ಗಂಡನ ಉಪನಾಮಗಳನ್ನು ತೆಗೆದುಕೊಂಡು ತಮ್ಮ ಅತ್ತೆಯ ಮನೆಗಳಿಗೆ ಸ್ಥಳಾಂತರಗೊಂಡ ಮಹಿಳೆಯರನ್ನು ಹೊಂದಾಣಿಕೆಯಾಗದ ಕಾರಣ ಅಳಿಸಲಾಗುತ್ತದೆ ಎಂದು ಅವರು ಹೇಳಿದರು.
ನ್ಯಾಯದಾನ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಹೇಳಿದ ಮಮತಾ ಬ್ಯಾನರ್ಜಿ, ‘ಸಮಸ್ಯೆ ಏನೆಂದರೆ, ನಮ್ಮ ವಕೀಲರು ಯಾವಾಗಲೂ ಪ್ರಕರಣಕ್ಕಾಗಿ ಹೋರಾಡುತ್ತಾರೆ, ನಾವು ಆರಂಭಯಿಂದಲೂ ಹೋರಾಡುತ್ತಿದ್ದೇವೆ. ಆದರೆ ಎಲ್ಲ ಮುಗಿದ ಮೇಲೆಯೂ ನ್ಯಾಯ ಸಿಗದಿದ್ದರೆ, ನ್ಯಾಯ ಬಾಗಿಲ ಹಿಂದೆ ಅಳುತ್ತಿರುವಂತೆ ಭಾಸವಾಗುತ್ತಿದೆ, ಆಗ ಎಲ್ಲಿಯೂ ನ್ಯಾಯ ಇಲ್ಲ ಅಂತಾ ಅನಿಸಿತು. ಚುನಾವಣಾ ಆಯೋಗಕ್ಕೆ ಎಲ್ಲ ವಿವರಗಳೊಂದಿಗೆ ಪತ್ರ ಬರೆದರೂ ಉತ್ತರ ಬಂದಿಲ್ಲ. ನಾನು ಬಂಧಿತ ಕಾರ್ಮಿಕಳಂತೆ, ಸಾಮಾನ್ಯ ಕುಟುಂಬದಿಂದ ಬಂದವಳು. ನಾನು ಪಕ್ಷಕ್ಕಾಗಿ ಹೋರಾಡುತ್ತಿಲ್ಲ, ಜನರಿಗಾಗಿ ಹೋರಾಡುತ್ತಿದ್ದೇನೆ’ ಎಂದು ಹೇಳಿದರು.
ಆಗ, ಪಶ್ಚಿಮ ಬಂಗಾಳದ ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿವಿಧ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಸಿಜೆಐ ಸೂರ್ಯಕಾಂತ್ ಅವರು ಮಮತಾ ಬ್ಯಾನರ್ಜಿಯವರಿಗೆ ತಿಳಿಸಿದರು, ಇದರಲ್ಲಿ ನ್ಯಾಯಾಲಯವು ವಿವಿಧ ಪ್ರಖ್ಯಾತ ವಕೀಲರ ವಾದಗಳನ್ನು ವಿಸ್ತಾರವಾಗಿ ಆಲಿಸಿತು. ಹಿರಿಯ ವಕೀಲ ಕಪಿಲ್ ಸಿಬಲ್ ಕೆಲವು ಸಮಸ್ಯೆಗಳನ್ನು ಎತ್ತಿ ತೋರಿಸಿದ ನಂತರ, ತಾರ್ಕಿಕ ವ್ಯತ್ಯಾಸಗಳ ಪಟ್ಟಿಯ ಪಾರದರ್ಶಕ ಪರಿಶೀಲನೆಗಾಗಿ ಜನವರಿ 19 ರಂದು ನ್ಯಾಯಾಲಯವು ವಿವಿಧ ನಿರ್ದೇಶನಗಳನ್ನು ನೀಡಿದೆ ಎಂದು ಸಿಜೆಐ ಹೇಳಿದರು.
ಪಶ್ಚಿಮ ಬಂಗಾಳದ ಚುನಾವಣೆಗೆ ಮುನ್ನ ಈ ಪ್ರಕ್ರಿಯೆಯನ್ನು ಗುರಿಯಾಗಿಸಿಕೊಂಡು ಮಾತ್ರ ಮಾಡಲಾಗುತ್ತಿದೆ ಎಂದು ಬ್ಯಾನರ್ಜಿ ಆರೋಪಿಸಿದರು. ಇತರ ರಾಜ್ಯಗಳಲ್ಲಿ ಆಧಾರ್ ಕಾರ್ಡ್ ಸ್ವೀಕರಿಸುತ್ತಿದ್ದರೂ, ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ನ ನಿರ್ದೇಶನವನ್ನು ಪಾಲಿಸುತ್ತಿಲ್ಲ ಎಂದು ಅವರು ವಾದಿಸಿದರು.
ಇದು ಕೇವಲ ಬಂಗಾಳವನ್ನು ಚುನಾವಣೆಗೆ ಮುಂಚೆ ಟಾರ್ಗೆಟ್ ಮಾಡಲು ಮಾಡುತ್ತಿದ್ದಾರೆ ಎಂದು ಆರೋಪಿಸಿದ ದೀದಿ, ಕೇವಲ ಬಂಗಾಳವನ್ನು ಚುನಾವಣೆಯ ಸಮಯದಲ್ಲಿ ಗುರಿಯಾಗಿಸಿದ್ದಾರೆ ಏಕೆ? 24 ವರ್ಷಗಳ ನಂತರ ಈಗ ಏನು ಅವಸರ? ಎರಡು ವರ್ಷಗಳ ಕೆಲಸವನ್ನು ಎರಡು ತಿಂಗಳಲ್ಲಿ ಮಾಡುವ ಅವಸರ ಏಕೆ? ಹಬ್ಬ-ಬೆಳೆ ಕೊಯ್ಲು ಸಮಯದಲ್ಲಿ ಜನರು ನಗರದಲ್ಲಿ ಇರಲು ಇಷ್ಟಪಡದಿದ್ದರೂ ನೋಟಿಸ್ ಕಳುಹಿಸಿ ತೊಂದರೆ ಕೊಡುತ್ತಿದ್ದಾರೆ. 100ಕ್ಕೂ ಹೆಚ್ಚು ಜನ ಸತ್ತಿದ್ದಾರೆ. BLOಗಳು ಪತ್ರ ಬರೆಯುತ್ತಾ ಸತ್ತಿದ್ದಾರೆ, ECIಯ ತೊಂದರೆಯಿಂದಾಗಿ. ಬಹಳಷ್ಟು ಆಸ್ಪತ್ರೆಯಲ್ಲಿದ್ದಾರೆ. ಬಂಗಾಳವನ್ನು ಟಾರ್ಗೆಟ್ ಮಾಡಿದ್ದಾರೆ. ಹೇಳಿ, ಅಸ್ಸಾಂನಲ್ಲಿ ಏಕೆ ಮಾಡುತ್ತಿಲ್ಲ? ಈಶಾನ್ಯ ರಾಜ್ಯಗಳು ಏಕೆ ಮಾಡುತ್ತಿಲ್ಲ?’ ಎಂದು ಕಟುವಾಗಿ ಪ್ರಶ್ನಿಸಿದರು.
‘ಬಿಎಲ್ಒಗಳ ಅಧಿಕಾರವನ್ನು ಮೀರಿ ಹೆಸರುಗಳನ್ನು ಅಳಿಸಲು ಬಿಜೆಪಿಯಿಂದ 8000 ‘ಸೂಕ್ಷ್ಮ ವೀಕ್ಷಕರನ್ನು’ ನೇಮಿಸಲಾಗಿದೆ ಎಂದು ಹೇಳಿದ ಮಮತಾ ಬ್ಯಾನರ್ಜಿ, 58 ಲಕ್ಷ ಜನರ ಹೆಸರನ್ನು ಅಳಿಸಲಾಗಿದೆ. ಜೀವಂತ ಜನರನ್ನು ಸತ್ತರೆಂದು ಘೋಷಿಸಲಾಗಿದೆ. ಅವರು ಬಂಗಾಳವನ್ನು ಗುರಿಯಾಗಿಸಿಕೊಂಡಿದ್ದಾರೆ, ಬಂಗಾಳಕ್ಕೆ ಮಾತ್ರ ಅವರು ಸೂಕ್ಷ್ಮ ವೀಕ್ಷಕರನ್ನು ನೇಮಿಸಿದ್ದಾರೆ. ಅವರು ಬಂಗಾಳದ ಜನರನ್ನು ಬುಲ್ಡೋಜರ್ ಮಾಡಲು ಬಯಸುತ್ತಾರೆ ಎಂದು ಹೇಳಿದರು.
ಚುನಾವಣಾ ಆಯೋಗವು ವಾಟ್ಸ್ಯಾಪ್ ಮೂಲಕ ಅನೌಪಚಾರಿಕ ಸೂಚನೆಗಳನ್ನು ನೀಡುತ್ತಿದೆ ಎಂದು ಹೇಳಿದ ಅವರು, ಚುನಾವಣಾ ಆಯೋಗವನ್ನು ‘ವಾಟ್ಸ್ಯಾಪ್ ಆಯೋಗ’ ಎಂದು ಕರೆದರು. ಈ ವೇಳೆ ಎಲ್ಲಾ ಆದೇಶಗಳನ್ನು ಬಿಎಲ್ಒಗಳು ಅಧಿಕೃತಗೊಳಿಸಬೇಕೆಂದು ನ್ಯಾಯಾಲಯ ನಿರ್ದೇಶಿಸುತ್ತದೆ ಎಂದು ಸಿಜೆಐ ಹೇಳಿದರು.
ಇಸಿಐ ಪರ ಹಿರಿಯ ವಕೀಲ ರಾಕೇಶ್ ದ್ವಿವೇದಿ, ಇಸಿಐ ಹಲವಾರು ಬಾರಿ ಜ್ಞಾಪನೆಗಳನ್ನು ಕಳುಹಿಸಿದ್ದರೂ ರಾಜ್ಯ ಸರ್ಕಾರವು ಎಸ್ಐಆರ್ ಕೆಲಸಕ್ಕಾಗಿ ಸಾಕಷ್ಟು ಗ್ರೂಪ್ ಬಿ ಅಧಿಕಾರಿಗಳನ್ನು ಬಿಡದ ಕಾರಣ ಇಸಿಐ ಸೂಕ್ಷ್ಮ ವೀಕ್ಷಕರನ್ನು ನೇಮಿಸಬೇಕಾಯಿತು ಎಂದು ವಾದಿಸಿದರು. ಸೂಕ್ಷ್ಮ ವೀಕ್ಷಕರನ್ನು ಆರ್ಪಿ ಕಾಯ್ದೆಯ ಪ್ರಕಾರ ಮಾನ್ಯವಾಗಿ ನೇಮಿಸಲಾಗಿದೆ ಮತ್ತು ರಾಜ್ಯವು ಅಸಹಕಾರ ತೋರಿದ್ದರಿಂದ ಅವರನ್ನು ನೇಮಿಸಬೇಕಾಯಿತು ಎಂದು ಅವರು ಪ್ರತಿಪಾದಿಸಿದರು. ಇಸಿಐ ಪರ ಹಿರಿಯ ವಕೀಲ ದಾಮ ಶೇಷಾದ್ರಿ ನಾಯ್ಡು , ರಾಜ್ಯವು ಅಸಹಕಾರ ತೋರಿದೆ ಎಂಬ ದ್ವಿವೇದಿ ಅವರ ವಾದವನ್ನು ಸಮರ್ಥಿಸಿದರು.
ವಿಚಾರಣೆಯ ಕೊನೆಯಲ್ಲಿ, ಮಮತಾ ಬ್ಯಾನರ್ಜಿ ಅವರ ಮನವಿಯ ಮೇರೆಗೆ ಭಾರತೀಯ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದ ಪೀಠ, ಮುಂದಿನ ಸೋಮವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿತು. ಸೂಕ್ಷ್ಮ ವೀಕ್ಷಕರ ಸಮಸ್ಯೆಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರವು SIR ಕರ್ತವ್ಯಗಳಿಗೆ ಬಿಡಬಹುದಾದ ಗ್ರೂಪ್ ಬಿ ಅಧಿಕಾರಿಗಳ ಪಟ್ಟಿಯನ್ನು ನೀಡಿದರೆ, ಸೂಕ್ಷ್ಮ ವೀಕ್ಷಕರಿಗೆ ನಿರಾಳತೆ ಸಿಗಬಹುದು ಎಂದು ಪೀಠ ಹೇಳಿತು.