Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮೈಸೂರು :ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಮೈಸೂರಿನಲ್ಲಿ ಜಂತರ್ ಮಂತರ್ ಮಾದರಿಯ ವೇದಶಾಲೆ ನಿರ್ಮಾಣವಾಗಲಿದೆ. ತಾಲೂಕಿನ ಉತ್ತನಹಳ್ಳಿ ಗ್ರಾಮದ ರಸ್ತೆಯಲ್ಲಿರುವ ಭಾರತಿಯೋಗಧಾಮ ಸಂಸ್ಥೆಯ ಆವರಣದಲ್ಲಿ ಜಂತರ್ ಮಂತರ್ ಮಾದರಿ ವೇಧಶಾಲೆಯು ನಿರ್ಮಾಣವಾಗುತ್ತಿದ್ದು, ಇದು 2027ರಲ್ಲಿ ಪೂರ್ಣಗೊಳ್ಳಲಿದೆ. ಇಲ್ಲಿಯವರೆಗೆ ನಾಲ್ಕೈದು ಕೋಟಿ ರೂ. ವೆಚ್ಚವಾಗಿದೆ. ಇದು ಪೂರ್ಣಗೊಳ್ಳಲು ಒಂದೂವರೆ ವರ್ಷ ಬೇಕಾಗಲಿದ್ದು, ಅದಕ್ಕಾಗಿ ಸುಮಾರು 35 ಕೋಟಿ ರೂ. ಖರ್ಚು ಆಗಲಿದೆ ಎಂದು ಅಂದಾಜಿಸಲಾಗಿದೆ.
ಈ ಕುರಿತು ಮಾತನಾಡಿದ ಭಾರತೀ ಯೋಗಧಾಮದ ಕಾರ್ಯದರ್ಶಿ ಯು. ಜೆ. ಆದರ್ಶ ಅವರು, ‘ ಭಾರತದಲ್ಲಿ ವೇಧಶಾಲೆ ಎಂಬುದು ಜಂತರ್ಮಂತರ್ ಎಂಬ ಹೆಸರಿನಿಂದ ಹೆಚ್ಚು ಪ್ರಸಿದ್ಧವಾಗಿದೆ. ಉತ್ತರ ಭಾರತದಲ್ಲಿ ಪ್ರಧಾನವಾಗಿ ಐದು ಜಾಗಗಳಲ್ಲಿ ಇದು ಇದೆ. ರಾಜ ಜಯಸಿಂಗ್ ಎಂಬುವರು ಐದು ಜಾಗಗಳಲ್ಲಿ ವೇಧಶಾಲೆಗಳನ್ನು ನಿರ್ಮಾಣ ಮಾಡಿದ್ದಾರೆ. ಉಜ್ಜಯನಿ, ಜೈಪುರ, ದೆಹಲಿ, ಮಥುರಾ ಹಾಗೂ ಕಾಶಿಯಲ್ಲಿ ಇವುಗಳನ್ನು ನಿರ್ಮಿಸಲಾಗಿದೆ. ದಕ್ಷಿಣ ಭಾರತದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಎಲ್ಲಿಯೂ ವೇಧಶಾಲೆ ಇಲ್ಲ. ಇಲ್ಲಿ ನಾವು ಪ್ರಥಮ ಬಾರಿಗೆ ಮೈಸೂರಿನಲ್ಲಿ ನಿರ್ಮಿಸುತ್ತಿದ್ದೇವೆ’ ಎಂದು ತಿಳಿಸಿದರು.
ಸಾಕಷ್ಟು ದಾನಿಗಳ ನೆರವಿನಿಂದಾಗಿ ನಮ್ಮ ಯೋಜನೆಯ ಮೊದಲ ಹಂತ ಪೂರ್ಣವಾಗುತ್ತಿದೆ. ಸುಮಾರು 4 ರಿಂದ 5 ಕೋಟಿಯಷ್ಟು ಹಣವನ್ನು ದಾನಿಗಳಿಂದ ಸಂಗ್ರಹ ಮಾಡಿದ್ದೇವೆ. ಈ ಕಾರ್ಯಕ್ಕೆ ಬೇಕಾದ ಪರಿಣಿತರನ್ನು ಕರೆತಂದು ಪ್ರಯತ್ನವನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ದಾನಿಗಳಿಂದ ಹೆಚ್ಚಿನ ಹಣ ಒದಗಿಬಂದಂತೆ ನಾವು ಈ ಕಾರ್ಯವನ್ನು ಮುಕ್ತಾಯ ಮಾಡುತ್ತೇವೆ. ಒಟ್ಟು ಐದು ಎಕರೆ ಜಾಗದಲ್ಲಿ ನಾವಿದನ್ನು ನಿರ್ಮಿಸುತ್ತಿದ್ದೇವೆ. ಇದರಲ್ಲಿ ಸುಮಾರು 16 ಯಂತ್ರಗಳು ಬರುತ್ತವೆ. ಒಂದು ಸಾಮ್ರಾಟ್ ಯಂತ್ರ, ಶಂಕು ಯಂತ್ರ, ನಾಡಿವಲಯ ಯಂತ್ರ, ಧ್ರುವ ದರ್ಶನ ಬಿತ್ತಿ, ರಾಮ ಯಂತ್ರ ಹಾಗೂ ದಕ್ಷಿಣೋತ್ತರ ಬಿತ್ತಿ ಯಂತ್ರವಿದೆ. ಇವುಗಳ ಸಹಾಯದಿಂದ ಸೂರ್ಯಾದಿ ನವಗ್ರಹಗಳ ನಿರ್ದಿಷ್ಟ ಸ್ಥಾನವನ್ನು ಹಾಗೂ ನಕ್ಷತ್ರಗಳ ಸ್ಥಾನ ಸೇರಿದಂತೆ ಖಗೋಳದ ವಿದ್ಯಮಾನವನ್ನು ಅರ್ಥಮಾಡಿಕೊಳ್ಳುವ ಸಾಧನವಾಗಿ ಕೆಲಸ ಮಾಡುತ್ತದೆ’ ಎಂದು ತಿಳಿಸಿದ್ದಾರೆ.
‘ಈ ಯೋಜನೆಯನ್ನು ಆರಂಭಿಸಲು ಸುಮಾರು ಎಂಟು ವರ್ಷಗಳಿಂದ ಅಧ್ಯಯನ ಮಾಡಿದ್ದೇವೆ. ಮುಂದಿನ ಎರಡು ವರ್ಷಗಳಲ್ಲಿ ಇದನ್ನು ಮುಗಿಸಬೇಕು ಎಂಬ ಯೋಚನೆಯಲ್ಲಿ ಇದ್ದೇವೆ. ಮುಂದಿನ ದಿನಗಳಲ್ಲಿ ದೇಶದ ಯಾವುದೇ ವ್ಯಕ್ತಿಗಳು ಇಲ್ಲಿಗೂ ಬಂದರೂ ಅವರಿಗೆ ಈ ಜಾಗದ ಬಗ್ಗೆ ಹಾಗೂ ಜ್ಯೋತಿಷ್ಯದ ಬಗ್ಗೆ ಪರಿಚಯ ಮಾಡಿಕೊಡುತ್ತೇವೆ. ಹಾಗೆಯೇ, ಶಾಲಾ ಮಕ್ಕಳಿಗೆ ದೇಶದಲ್ಲಿ ಜ್ಯೋತಿಷ್ಯ ವಿದ್ಯೆ ಹೇಗೆ ಬೆಳೆದು ಬಂತು ಎಂಬ ಬಗ್ಗೆ ತಿಳಿಸುತ್ತೇವೆ. ಈ ರೀತಿಯ ಚಿಂತನೆಗಳನ್ನು ನಾವು ಹೊಂದಿದ್ದೇವೆ’ ಎಂದು ಹೇಳಿದ್ದಾರೆ.
ಜ್ಯೋತಿಷ್ಯದ ಬಗ್ಗೆ ಪರಿಚಯ ಕೊಡುವ ದೃಷ್ಟಿಯಿಂದ ಅನೇಕ ಕ್ಯಾಂಪ್ ಹಾಗೂ ವರ್ಕ್ ಶಾಪ್ಗಳನ್ನು ಮಾಡುವ ಮನಸ್ಸಿದೆ. ಮುಂದಿನ ದಿನಗಳಲ್ಲಿ ಒಂದು, ಎರಡು, ಐದು ದಿನದ ಅನೇಕ ವರ್ಕ್ ಶಾಪ್ಗಳನ್ನು ಮಾಡುತ್ತಾ ಜ್ಯೋತಿಷ್ಯದ ಬೇಸಿಕ್ನ್ನು ಅರ್ಥ ಮಾಡಿಸುತ್ತೇವೆ ಎಂದು ಹೇಳಿದ್ದಾರೆ. ಇಂತಹ ಅಪರೂಪದ ವೇಧಶಾಲೆಯ ಮೊದಲ ಹಂತದ ಕಾರ್ಯವು ಡಿ. 7 ರಂದು ಮೈಸೂರಿನಲ್ಲಿಯೇ ಉದ್ಘಾಟನೆಗೊಳ್ಳುತ್ತಿದೆ.
ಯಾರು ಅತಿಥಿಗಳು? ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಅಭಿನವ ಶಂಕರಭಾರತೀ ಸ್ವಾಮೀಜಿ, ಶ್ರೀ ಪ್ರಕಾಶಾನಂದೇಂದ್ರ ಸರಸ್ವತಿ ಸ್ವಾಮೀಜಿ, ಮೂವರು ಯತಿಗಳು ಮತ್ತು ಅನೇಕ ವಿದ್ವಾಂಸರ ಉಪಸ್ಥಿತಿಯಲ್ಲಿ ಅನಾವರಣಗೊಳ್ಳಲಿದೆ. ಸಂಸ್ಥೆಯ ಸಂಸ್ಥಾಪಕರೂ ಆಗಿರುವ ಹಿರಿಯ ವಿದ್ವಾಂಸರಾದ ಡಾ. ಕೆ. ಎಲ್. ಶಂಕರನಾರಾಯಣ ಜೋಯಿಸರು ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.