Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನವದೆಹಲಿ: ಬದಲಾಗುತ್ತಿರುವ ಜಾಗತಿಕ ಹೊಂದಾಣಿಕೆಗಳ ನಡುವೆ ಆರ್ಥಿಕ ಮತ್ತು ಕಾರ್ಯತಂತ್ರದ ಸಹಕಾರದ ಮರುಹೊಂದಿಕೆ ಸೂಚಿಸುವ ಒಪ್ಪಂದಗಳ ಸಮಗ್ರ ಪ್ಯಾಕೇಜ್ಗೆ ಭಾರತ ಮತ್ತು ರಷ್ಯಾ ಶುಕ್ರವಾರ ಸಹಿ ಹಾಕಿವೆ.
ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ನಿಯೋಗ ಮಟ್ಟದ ಮಾತುಕತೆಯ ನಂತರ ಕಾರ್ಮಿಕ ಚಲನಶೀಲತೆ ಮತ್ತು ಆರೋಗ್ಯ ರಕ್ಷಣೆಯಿಂದ ಹಿಡಿದು ಮಾಧ್ಯಮ ಸಹಯೋಗದವರೆಗೆ ಎರಡೂ ಕಡೆಯಿಂದು ಸುಮಾರು 16 ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಜೆಎಸ್ಸಿ ಉರಲ್ಕೆಮ್ ಮತ್ತು ರಾಷ್ಟ್ರೀಯ ಕೆಮಿಕಲ್ಸ್, ಫರ್ಟಿಲೈಜರ್ಸ್ ಲಿಮಿಟೆಡ್ ಹಾಗೂ ನ್ಯಾಷನಲ್ ಫರ್ಟಿಲೈಜರ್ಸ್ ಲಿಮಿಟೆಡ್, ಇಂಡಿಯನ್ ಪೊಟ್ಯಾಶ್ ಲಿಮಿಟೆಡ್ ನಡುವಿನ ಒಪ್ಪಂದವು ಪೂರೈಕೆ ಸರಪಳಿಗಳನ್ನು ಸ್ಥಿರಗೊಳಿಸುವತ್ತ ಒಂದು ಐತಿಹಾಸಿಕ ಹೆಜ್ಜೆಯಾಗಿದೆ.
ಅಷ್ಟೇ ಅಲ್ಲ, ಜಾಗತಿಕ ರಸಗೊಬ್ಬರದ ಬೆಲೆ ಆಘಾತಗಳಿಂದ ಭಾರತವನ್ನು ಈ ಒಪ್ಪಂದ ರಕ್ಷಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಅಂಚೆ ಒಪ್ಪಂದವು ನೇರ ಇ-ವಾಣಿಜ್ಯ ಮಾರ್ಗಗಳನ್ನು ತೆರೆಯಬಹುದು. ವಿಶ್ವವಿದ್ಯಾಲಯಗಳ ನಡುವಿನ ಶೈಕ್ಷಣಿಕ ಒಪ್ಪಂದಗಳು ಹಾಗೂ ಪ್ರಸಾರ ಭಾರತಿಯೊಂದಿಗಿನ ಪ್ರಸಾರ ಒಪ್ಪಂದಗಳು, ಇಂಧನ ಮತ್ತು ರಕ್ಷಣೆಯನ್ನು ಮೀರಿ ಭಾರತ- ರಷ್ಯಾ ಬಾಂಧವ್ಯ ಮುಂದುವರಿಯಲಿದೆ ಎಂಬುದರ ದ್ಯೋತಕವಾಗಿದೆ.
23 ನೇ ಭಾರತ ರಷ್ಯಾ ವಾರ್ಷಿಕ ಶೃಂಗಸಭೆಯ ನಂತರ ಉಭಯ ನಾಯಕರು ಜಂಟಿ ಹೇಳಿಕೆ ನೀಡಿದರು. ಈ ಹೇಳಿಕೆಗಳ ಪ್ರಕಾರ, ಭಾರತ ಮತ್ತು ರಷ್ಯಾ 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 100 ಶತಕೋಟಿ ಡಾಲರ್ಗೆ ವಿಸ್ತರಿಸುವ ಮಹತ್ವಾಕಾಂಕ್ಷೆಯ ಗುರಿ ಇಟ್ಟುಕೊಂಡಿವೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತೀಯ ರಫ್ತುಗಳನ್ನು ಹೆಚ್ಚಿಸುವ ಮತ್ತು ಕೈಗಾರಿಕಾ ಮತ್ತು ತಾಂತ್ರಿಕ ಪಾಲುದಾರಿಕೆಗಳನ್ನು ಆಳಗೊಳಿಸುವ ಸಮತೋಲಿತ, ಸುಂಕ ರಹಿತ ವಿಧಾನಕ್ಕೆ ಬದ್ಧರಾಗಿರುವುದಾಗಿ ಘೋಷಿಸಿದರು.
ಇದೇ ಸಮಯದಲ್ಲಿ ಯುರೇಷಿಯನ್ ಆರ್ಥಿಕ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮತ್ತು ದ್ವಿಪಕ್ಷೀಯ ಹೂಡಿಕೆ ರಕ್ಷಣಾ ಒಪ್ಪಂದಕ್ಕಾಗಿ ಮಾತುಕತೆಗಳನ್ನು ಭಾರತ ಮುಂದುವರಿಸಿದೆ.
ಪ್ರಾಯೋಗಿಕ ಅಡೆತಡೆಗಳನ್ನು ಸರಿಪಡಿಸುವುದು, ಸುಂಕ ಮತ್ತು ಸುಂಕ ರಹಿತ ಅಡೆತಡೆಗಳನ್ನು ತೆಗೆದುಹಾಕುವುದು, ಲಾಜಿಸ್ಟಿಕ್ಸ್ ಮತ್ತು ಸಂಪರ್ಕವನ್ನು ಸುಧಾರಿಸುವುದು, ವಿಶ್ವಾಸಾರ್ಹ ಪಾವತಿ ವ್ಯವಸ್ಥೆಗಳನ್ನು ಭದ್ರಪಡಿಸುವುದು ಮತ್ತು ವಿಮೆ ಮತ್ತು ಮರುವಿಮಾ ಸವಾಲುಗಳನ್ನು ಪರಿಹರಿಸುವತ್ತ ಉಭಯ ರಾಷ್ಟ್ರಗಳು ಗಮನಹರಿಸಿವೆ.
ರಾಷ್ಟ್ರೀಯ ಕರೆನ್ಸಿಗಳಲ್ಲಿ ವ್ಯಾಪಾರ ವಹಿವಾಟು ಬಲಪಡಿಸಲು ಮತ್ತು ಹಣಕಾಸು ಸಂದೇಶ ಕಳುಹಿಸುವಿಕೆ ಮತ್ತು ಡಿಜಿಟಲ್ ಕರೆನ್ಸಿ ವೇದಿಕೆಗಳ ನಡುವಿನ ಪರಸ್ಪರ ಕಾರ್ಯಸಾಧ್ಯತೆಯನ್ನು ಅನ್ವೇಷಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ.
ರಸಗೊಬ್ಬರಗಳು, ಖನಿಜ ಸಂಪನ್ಮೂಲಗಳು, ಇಂಧನ, ಅಮೂಲ್ಯ ಲೋಹಗಳು ಮತ್ತು ನಿರ್ಣಾಯಕ ಕಚ್ಚಾ ವಸ್ತುಗಳು ಸೇರಿದಂತೆ ನಿರ್ಣಾಯಕ ಕ್ಷೇತ್ರಗಳಲ್ಲಿ ಸಹಕಾರ ಮುಂದುವರಿಯುತ್ತದೆ. ಜಂಟಿ ಉದ್ಯಮಗಳು ಚರ್ಚೆಯಲ್ಲಿವೆ.
ಎರಡೂ ಕಡೆಯವರು ಕೌಶಲ್ಯಪೂರ್ಣ ಕಾರ್ಮಿಕರ ನಿಕಟ ಚಲನಶೀಲತೆಯನ್ನು ಬೆಂಬಲಿಸಿದರು. 2025 ರಲ್ಲಿ ಪ್ರಮುಖ ಆರ್ಥಿಕ ವೇದಿಕೆಗಳಲ್ಲಿ ಸಕ್ರಿಯ ಭಾಗವಹಿಸುವಿಕೆಯನ್ನು ದೃಢಪಡಿಸಿದ್ದಾರೆ.
ಪರಮಾಣು ಮತ್ತು ಬಾಹ್ಯಾಕಾಶ ಸಂಬಂಧಗಳನ್ನು ಬಲಪಡಿಸಿ ಭಾರತ ಮತ್ತು ರಷ್ಯಾ ನಾಗರಿಕ ಪರಮಾಣು ಶಕ್ತಿಯಲ್ಲಿ ಸಹಯೋಗವನ್ನು ಮತ್ತಷ್ಟು ಗಾಢವಾಗಿಸಲು ಒಪ್ಪಿಕೊಂಡಿವೆ. ಇದು ಸಂಪೂರ್ಣ ಇಂಧನ ಚಕ್ರ, ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರಕ್ಕೆ (KKNPP) ಜೀವನ ಚಕ್ರ ಬೆಂಬಲ ಮತ್ತು ವಿದ್ಯುತ್ ಅಲ್ಲದ ಅನ್ವಯಿಕೆಗಳನ್ನು ಒಳಗೊಂಡಿದೆ.
2047 ರ ವೇಳೆಗೆ ತನ್ನ ಪರಮಾಣು ಸಾಮರ್ಥ್ಯವನ್ನು 100 GW ಗೆ ವಿಸ್ತರಿಸುವ ಭಾರತದ ಯೋಜನೆಯಲ್ಲಿ ಪರಮಾಣು ಸಹಕಾರದ ಕಾರ್ಯತಂತ್ರದ ಮಹತ್ವವನ್ನು ಎರಡೂ ಕಡೆಯವರು ಒತ್ತಿ ಹೇಳಿದರು.
ಬಾಹ್ಯಾಕಾಶದಲ್ಲಿ ಮಾನವ ಹಾರಾಟ, ಉಪಗ್ರಹ ಸಂಚರಣೆ, ಗ್ರಹಗಳ ಪರಿಶೋಧನೆ ಮತ್ತು ರಾಕೆಟ್ ಎಂಜಿನ್ ಅಭಿವೃದ್ಧಿ ಸೇರಿದಂತೆ ಶಾಂತಿಯುತ ಬಳಕೆಗಳ ಮೇಲೆ ಕೇಂದ್ರೀಕರಿಸಿ ಇಸ್ರೋ ಮತ್ತು ರೋಸ್ಕೋಸ್ಮೋಸ್ ನಡುವಿನ ಪಾಲುದಾರಿಕೆಯನ್ನು ಎತ್ತಿ ತೋರಿಸಲಾಯಿತು.
ಅಂತರಿಕ್ಷಯಾನ ವಲಯದಲ್ಲಿ ಜಂಟಿ ಯೋಜನೆಗಳು ಮತ್ತು ತಾಂತ್ರಿಕ ಸಹಯೋಗದ ನಿರಂತರ ಪ್ರಗತಿಯನ್ನು ಎರಡೂ ಕಡೆಯವರು ಗಮನಿಸಿದರು.
ನಿಯಮಿತ ಸಮರಾಭ್ಯಾಸ, ವಿಸ್ತೃತ ನಿಯೋಗ ವಿನಿಮಯದ ಜತೆ ಜಂಟಿ ಆರ್ & ಡಿ, ಸಹ-ಉತ್ಪಾದನೆ ಮತ್ತು ಮೇಕ್-ಇನ್-ಇಂಡಿಯಾ ರಕ್ಷಣಾ ಉಪಕ್ರಮಗಳ ಮೂಲಕ ಎರಡೂ ದೇಶಗಳ ಮಿಲಿಟರಿ ಸಂಬಂಧಗಳನ್ನು ಬಲಗೊಳಿಸಲು ಯೋಜಿಸಲಾಗಿದೆ.
ಭಾರತ ಮತ್ತು ರಷ್ಯಾ ತಮ್ಮ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಮಾರ್ಗಸೂಚಿಯ ಅಡಿ ಶೈಕ್ಷಣಿಕ ಮತ್ತು ವೈಜ್ಞಾನಿಕ ವಿನಿಮಯವನ್ನು ವಿಸ್ತರಿಸುವುದರ ಜೊತೆಗೆ ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಜಂಟಿ ಸಂಶೋಧನೆ, ಸ್ಟಾರ್ಟ್ – ಅಪ್ಗಳು ಮತ್ತು ಡಿಜಿಟಲ್ ಭದ್ರತೆಯಲ್ಲಿ ಸಹಯೋಗವನ್ನು ಹೆಚ್ಚಿಸಲು ಒಪ್ಪಿಕೊಂಡಿವೆ.
ಭಯೋತ್ಪಾದನೆ ನಿಗ್ರಹ:
ಇವುಗಳ ಜತೆಗೆ ಭಾರತ ಮತ್ತು ರಷ್ಯಾ ಭಯೋತ್ಪಾದನೆ, ಉಗ್ರವಾದ, ಅಂತಾರಾಷ್ಟ್ರೀಯ ಅಪರಾಧ, ಹಣ ವರ್ಗಾವಣೆ ಮತ್ತು ಅಕ್ರಮ ಹಣಕಾಸು ನಿಗ್ರಹದಲ್ಲಿ ನಿಕಟ ಸಹಕಾರಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದವು.
ಭಾರತ ಮತ್ತು ರಷ್ಯಾದಲ್ಲಿ ಇತ್ತೀಚಿನ ಭಯೋತ್ಪಾದಕ ದಾಳಿಗಳನ್ನು ಉಭಯ ನಾಯಕರು ಖಂಡಿಸಿದರು ಮತ್ತು ಯುಎನ್ ಪಟ್ಟಿ ಮಾಡಲಾದ ಭಯೋತ್ಪಾದಕ ಗುಂಪುಗಳು, ಸುರಕ್ಷಿತ ತಾಣಗಳು ಮತ್ತು ಭಯೋತ್ಪಾದಕರ ಗಡಿಯಾಚೆಗಿನ ಚಲನೆಯ ವಿರುದ್ಧ ಸಂಘಟಿತ ಕ್ರಮದ ಅಗತ್ಯವನ್ನು ಒತ್ತಿ ಹೇಳಿದರು.
ಶೃಂಗಸಭೆಯ ಕೊನೆಯಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನವದೆಹಲಿಯಲ್ಲಿ ತಮಗೆ ಮತ್ತು ತಮ್ಮ ನಿಯೋಗಕ್ಕೆ ನೀಡಿದ ಸೌಹಾರ್ದಯುತ ಆತಿಥ್ಯಕ್ಕಾಗಿ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದರು ಮತ್ತು 2026 ರಲ್ಲಿ 24 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗೆ ರಷ್ಯಾಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.