newsics.com
ಸೋಶಿಯಲ್ ಮೀಡಿಯಾದಲ್ಲಿನ ಫೋಟೋ ನೋಡಿ ಪ್ರೀತಿ ಮಾಡಿ ಮೋಸ ಹೋದ ಹಲವರಿದ್ದಾರೆ. ಇದೀಗ ಇದೇ ರೀತಿ ಇನ್ಸ್ಟಾಗ್ರಾಂ ಫೋಟೋ ನೋಡಿ ಪ್ರೀತಿ ಹುಟ್ಟಿ ಕೊಲೆಯಲ್ಲಿ ಅಂತ್ಯವಾಗಿದೆ.
ಇನ್ಸ್ಟಾಗ್ರಾಂ ಫಿಲ್ಟರ್ ಬಳಸಿ 52ರ ಮಹಿಳೆ ಫೋಟೋ ಪೋಸ್ಟ್ ಮಾಡಿದ್ದಾಳೆ. ಈ ಫೋಟೋ ನೋಡಿ 26ರ ಯುವಕನಿಗೆ ಪ್ರೀತಿ ಶುರುವಾಗಿದೆ. ಮೆಸೇಜ್ ಬಳಿಕ ಫೋನ್ ಮೂಲಕ ಚಾಟಿಂಗ್ ಶುರುವಾಗಿದೆ. ಆದರೆ ಈ ಪ್ರೀತಿ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಪ್ರದೇಶದ ಮೈನ್ಪುರದಲ್ಲಿ ನಡೆದಿದೆ.
26ರ ಹರೆಯದ ಅರುಣ್ ರಜಪೂತ್ ಹೆಚ್ಚು ಸಮಯ ಸೋಶಿಯಲ್ ಮೀಡಿಯಾದಲ್ಲೇ ಇರುತ್ತಿದ್ದ. ಸುಂದರ ಹುಡುಗಿಯರ ಫೋಟೋ ಇರುವ ಪ್ರೊಫೈಲ್ ಇದ್ದರೆ ಸಾಕು ಮೆಸೇಜ್ ಮಾಡುತ್ತಿದ್ದ. ಹೀಗೆ ಪಿಯುಸಿ ಹುಡುಗಿಯಂತೆ ಕಾಣುತ್ತಿದ್ದ 52ರ ಹರೆಯದ ರಾಣಿಗೂ ಮೆಸೇಜ್ ಹಾಕಿದ್ದಾನೆ. ಕೆಲ ದಿನಗಳ ಬಳಿಕ ರಾಣಿಯಿಂದ ಪ್ರತಿಕ್ರಿಯೆ ಬಂದಿದೆ. ಅರುಣ್ ರಜಪೂತ್ಗೆ ಖುಷಿಗೆ ಪಾರವೇ ಇರಲಿಲ್ಲ. ಈತನೂ ಮೆಸೇಜ್ ಮಾಡಿದ್ದ. ಅಲ್ಲಿಗೆ ಅರುಣ್ ರಜಪೂತ್ ಹಾಗೂ ರಾಣಿ ನಡುವೆ ಸ್ನೇಹ ಆರಂಭಗೊಂಡಿತ್ತು.
ಫಿಲ್ಟರ್ ಬಳಸಿ ಫೋಟೋ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದ ಕಾರಣ 52ರ ಹರೆಯದ ರಾಣಿ ಹುಡುಗಿಯಂತೆ ಕಾಣುತ್ತಿದ್ದಳು. ಬಳಿಕ ಇವರಿಬ್ಬರ ಸ್ನೇಹ ಗಾಢವಾಗಿದೆ. ಫೋನ್ ನಂಬರ್ ವಿನಿಮಯ ಮಾಡಿದ್ದಾರೆ. ಫೋನ್ ಮೂಲಕ ಮಾತುಕತೆ ಶುರುವಾಗಿದೆ. ಆಕೆಯೂ ತನ್ನ ವಯಸ್ಸು ಹೇಳಲಿಲ್ಲ. ಈತ ಕೂಡ ಕೇಳಲಿಲ್ಲ. ಮಾತುಗಳು ಕೊನೆಗೆ ರೋಮ್ಯಾಂಟಿಕ್ ಮೂಡ್ಗೆ ತಲುಪಿದೆ. ಇದರ ನಡುವೆ ಯುವಕನ ಆರ್ಥಿಕ ಸಂಕಷ್ಟಕ್ಕೂ ಆಕೆ ನೆರವು ನೀಡಿದ್ದಾಳೆ. ಒಂದಿಷ್ಟು ಹಣ ನೀಡುತ್ತಾ ಬಂದಿದ್ದಾಳೆ.
ಯುವಕ ಕೂಡ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದಾನೆ. ಬಳಿಕ ಇವರಿಬ್ಬರು ಭೇಟಿಯಾಗಲು ನಿರ್ಧರಿಸಿದ್ದಾರೆ. ಟಿಪ್ ಟಾಪ್ ಆಗಿ ರೆಡಿಯಾಗಿ ತನ್ನ ಲವರ್ ಭೇಟಿಯಾಗಲು ಅರುಣ್ ರಜಪೂತ್ ತೆರಳಿದ್ದಾನೆ. ತನ್ನ ಆಪ್ತ ಗೆಳೆಯರ ಬಳಿ ಗೆಳತಿ ಭೇಟಿಯಾಗುತ್ತಿರುವ ಸಂತೋಷವನ್ನು ಹಂಚಿಕೊಂಡಿದ್ದ. ಎಲ್ಲಾ ತಯಾರಿಯೊಂದಿಗೆ ಲವರ್ ಭೇಟಿಯಾದ ಅರುಣ್ ರಜಪೂತ್ಗೆ ಭಾರೀ ನಿರಾಸೆಯಾಗಿದೆ. ಆಕೆ ಹುಡುಗಿ, ಯವತಿ ಅಲ್ಲ ಮುದುಕಿ ಎಂದು ಆಕ್ರೋಶಗೊಂಡಿದ್ದಾನೆ.
1 ರಿಂದ 1.5 ಲಕ್ಷ ರೂಪಾಯಿ ಆಕೆಯಿಂದ ಅರುಣ್ ರಜಪೂತ್ ಪಡೆದುಕೊಂಡಿದ್ದ. ಮದುವೆಯಾಗುವುದಾಗಿ ಮಾತು ಕೊಟ್ಟಿದ್ದ. ಇದರ ಜತೆಗೆ ರೊಮ್ಯಾಂಟಿಕ್ ಮಾತುಕತೆಗಳು ನಡೆದಿವೆ. ಮೊದಲ ಭೇಟಿಯಲ್ಲೇ ರಾಣಿ ತನ್ನ ಮದುವೆಯಾಗುವಂತೆ ಅರುಣ್ ರಜಪೂತ್ಗೆ ಒತ್ತಾಯ ಮಾಡಿದ್ದಾಳೆ. ಆದರೆ ಇದನ್ನು ಯುವಕ ನಿರಾಕರಿಸಿದ್ದಾನೆ. ಫಿಲ್ಟರ್ ಫೋಟೋ ನೋಡಿ ಇಷ್ಚಪಟ್ಟೆ. ಆದರೆ ವಯಸ್ಸು ಇಷ್ಟಾಗಿದೆ. ಹೇಗೆ ಮದುವೆಯಾಗಲಿ, ಸಾಧ್ಯವಿಲ್ಲ ಎಂದಿದ್ದಾನೆ. ಅಲ್ಲಿಗೆ ಇಬ್ಬರಿಗೂ ಜಗಳ ಶುರುವಾಗಿದೆ. ತನ್ನಿಂದ ಪಡೆದುಕೊಂಡಿರವ ಹಣ ವಾಪಸ್ ನೀಡುವಂತೆ ಸೂಚಿಸಿದ್ದಾಳೆ. ಇಷ್ಟೇ ಅಲ್ಲ, ಪ್ರೀತಿಸಿ ವಂಚಿಸಿದ ಅರುಣ್ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾಳೆ.
ಮದುವೆಯಾಗುವಂತೆ ಒತ್ತಾಯ, ಹಣ ವಾಪಸ್ ನೀಡುವಂತೆ ಎಚ್ಚರಿಕೆಯಿಂದ ಅರುಣ್ ರಜಪೂತ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ. ಈ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳೋಣ ಎಂದು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಬಳಿಕ ಆಕೆಯ ದುಪ್ಪಟದಿಂದ ಬಿಗಿದು ಲವರ್ ಹತ್ಯೆ ಮಾಡಿದ್ದಾನೆ. ನಿರ್ಜನ ಪ್ರದೇಶದಲ್ಲೇ ಆಕೆಯ ಮೃತದೇಹ ಎಸೆದು ಪರಾರಿಯಾಗಿದ್ದಾನೆ. ತನಿಖೆ ನಡೆಸಿದ ಪೊಲೀಸರು ಅರುಣ್ ರಜಪೂತ್ ಬಂಧಿಸಿ ವಿಚಾರಣೆ ನಡೆಸಿದಾಗ ನಡೆ ಘಟನೆ ಬಯಲಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಗೆ ನುಗ್ಗಿದ ಅಪರಿಚಿತ ವ್ಯಕ್ತಿ.!