newsics.com
ಅಪ್ಪಟ ಕನ್ನಡ ಮಾತನಾಡುವ ನಿರೂಪಕಿ ಅಪರ್ಣಾ ನಿಧನರಾಗಿ ಒಂದು ವರ್ಷ ಆಗಿದೆ. ಈ ಬಗ್ಗೆ ಅವರ ಪತಿ ನಾಗರಾಜ್ ವಸ್ತಾರೆ ಅವರು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.
ಅಪರ್ಣಾ ಮೃತಪಟ್ಟು ಒಂದು ವರ್ಷ ಆದ ಹಿನ್ನೆಲೆಯಲ್ಲಿ ಅವರ ಪತಿ ನಾಗರಾಜ್ ವಸ್ತಾರೆ ತಮ್ಮ ಫೇಸ್ಬುಕ್ನಲ್ಲಿ ಒಂದು ಪೋಸ್ಟ್ ಹಾಕಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಪತ್ನಿ ಅಪರ್ಣಾ ಅವರು ಕಾಯಿಲೆಯಿಂದ ಅನುಭವಿಸಿದ ನೋವು, ಅವರನ್ನ ಕಳೆದುಕೊಂಡು ತಾವು ಅನುಭವಿಸುತ್ತಿರುವ ಸಂಕಟದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅದರಲ್ಲೂ ಅವರು ಬರೆದಿರುವ ಒಂದು ಸಾಲು ಮಾತ್ರ ಕರುಳು ಕಿವುಚುವಂಥಿದೆ. ಅಪರ್ಣಾ ಆಡಿದ್ದ ಆ ಮಾತುಗಳನ್ನ ಕೇಳಿದ್ರೆ ಭಯವಾಗುತ್ತದೆ.
ಅಪರ್ಣಾ ಅವರಿಗೆ ಕೊನೇ ಒಂದೆರಡು ತಿಂಗಳು ತುಂಬ ಯಾತನಾಮಯವಾಗಿತ್ತು. ವಿಪರೀತ ನೋವು ಬರುತ್ತಿತ್ತು. ಕಳೆದ ವರ್ಷ ಜುಲೈನಲ್ಲಿ ಅವರ ಆರೋಗ್ಯ ಬಿಗಡಾಯಿಸಿತ್ತು. ನೋವು ತಡೆಯಲಾಗದೆ ಪತಿ ನಾಗರಾಜ್ ಬಳಿ.. ‘ನನ್ನನ್ನು ಪಾರು ಮಾಡಿ, ವಸ್ತಾರೆ…’ ಎಂದು ಯಾಚಿಸುತ್ತಿದ್ದರಂತೆ. ಈ ಬಗ್ಗೆ ನಾಗರಾಜ್ ವಸ್ತಾರೆ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಅಪರ್ಣಾರಿಗೆ ತಾವು ಹಾಸಿಗೆ ಹಿಡಿಯೋದು ಇಷ್ಟವರಿಲ್ಲ. ಎಲ್ಲಾದರೂ ಹಾಸಿಗೆಗೆ ಅಂಟಿಕೊಂಡು ವರ್ಷಾನುಗಟ್ಟಲೆ ಕಳೆಯಬೇಕಾದ ಸ್ಥಿತಿ ಬಂದರೆ ಏನು ಮಾಡುವುದು ಎಂಬ ಆತಂಕ ಅವರದ್ದಾಗಿತ್ತು.
ಹಾಗೇ, ಜುಲೈ9 ರಂದು ಅಂದರೆ ಸಾಯಲು ಎರಡು ದಿನ ಮೊದಲು ಬೆಳಗ್ಗೆಯೇ ಅಪರ್ಣಾ ಅವರು ಪತಿ ಎದುರು ಒಂದು ಬೇಡಿಕೆ ಇಟ್ಟಿದ್ದರು.
‘ನಾನೊಂದು ಹೇಳುತೀನಿ. ನಡೆಸಿಕೊಡುತೀರಾ?’ ಎಂದು ನಾಗರಾಜ್ ವಸ್ತಾರೆ ಬಳಿ ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ನಾಗರಾಜ್ ವಸ್ತಾರೆ ʼ’ಈವಾಗ ಬೇಡ, ಕಂದ… ಆಮೇಲೆ ಮಾತಾಡೋಣ’ ಎಂದು ಮಾತು ಹಾರಿಸಿದ್ದರಂತೆ. ಆದರೆ ಪಟ್ಟುಬಿಡದೆ ಮಾತು ಮುಂದುವರಿಸಿದ್ದಳು. ‘ಏನು ಗೊತ್ತಾ, ನಾನೇನಾದರೂ ಹಾಸಿಗೆ ಹಿಡಿದುಬಿಟ್ಟರೆ ಯಾರಿಗೂ ಹೇಳದೆ ಮುಗಿಸಿಬಿಡಿ, ವಸ್ತಾರೆ… ಏನೂ ತಪ್ಪಿಲ್ಲ. ನಿಮ್ಮ ಮೇಲೆ ನಾನಿನ್ನು ಹೊರೆಯಾಗಿರಲಾರೆ’ ಎಂದು ಅಂಗಲಾಚಿದ್ದರಂತೆ. ಅಂದೇ ಸಂಜೆ ಅಪರ್ಣಾ ಆಸ್ಪತ್ರೆ ಸೇರಿದ್ದರು. ಐಸಿಯುಗೆ ದಾಖಲಾಗಿದ್ದರು. ಜುಲೈ 11ರಂದು ನಿಧನರಾದರು. ಆದರೆ ಅಪರ್ಣಾರಿಗೆ ತಾವು ಹಾಸಿಗೆ ಹಿಡಿದರೆ ಎಂಬ ಭಯ ಎಷ್ಟಿತ್ತು ಎಂಬುದು ಅವರ ಬೇಡಿಕೆಯಿಂದಲೇ ಅರ್ಥವಾಗುತ್ತದೆ. ಅವರು ತಮ್ಮ ಪತಿಯ ಎದುರು ಇಟ್ಟ ಈ ಬೇಡಿಕೆ ನಮಗೇ ಭಯ ಹುಟ್ಟಿಸುವಂತಿದೆ.