newsics.com
ಸ್ಯಾಂಡಲ್ವುಡ್ನಲ್ಲಿ ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಸುಗ್ಗಿ.ಇತ್ತೀಚಿನ ದಿನಗಳಲ್ಲಿ ಕನ್ನಡ ಮಾತ್ರವಲ್ಲದೇ, ಎಲ್ಲಾ ಸಿನಿಮಾರಂಗದಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಟ್ರೆಂಡ್ ಸೃಷ್ಟಿಯಾಗಿದೆ. ಸ್ಟಾರ್ ನಟರಿಂದ ಹೊಸ ನಟರವರೆಗೆ ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾಗಳ ಬೆನ್ನುಬಿದ್ದಿದ್ದಾರೆ.
ಆದರೆ ಇದರಿಂದ ಸ್ಯಾಂಡಲ್ವುಡ್ ಸಂಕಷ್ಟ ಎದುರಾಗಿದೆ. ಒಂದಿಲ್ಲೊಂದು ಸಮಸ್ಯೆಯಿಂದ ಕಂಗೆಟ್ಟಿದೆ. ಹೆಚ್ಚು ಸಂಭಾವನೆಗೆ ಆಸೆ ಬಿದ್ದು ಕನ್ನಡ ಚಿತ್ರರಂಗ ದ ಸ್ಟಾರ್ ನಟರು ಗಳು ಪ್ಯಾನ್ ಇಂಡಿಯಾ ಸಿನಿಮಾಗಳತ್ತ ಮುಖಮಾಡಿದ್ದಾರೆ. ಇದ್ದರಿಂದ ಚಿತ್ರಮಂದಿರಗಳಲ್ಲಿ ಪರಭಾಷಾ ಸಿನಿಮಾ ನೇಪಾಳಿ, ಪಂಜಾಬಿ, ಒರಿಯಾ ಭಾಷೆಯ ಸಿನಿಮಾಗಳು ಪ್ರದರ್ಶನ ಕಾಣುವಂತಾಗಿದೆ. ಅಷ್ಟು ಮಾತ್ರವಲ್ಲದೆ ಕನ್ನಡ ಸಿನಿಮಾಗಳಿಗೆ ಸಿಗದಷ್ಟು ಶೋಗಳು ಆ ಸಿನಿಮಾಗಳಿಗೆ ಸಿಗುತ್ತಿದೆ.
ಕನ್ನಡದ ಖ್ಯಾತ ಚಿತ್ರ ನಿರ್ಮಾಪಕರು ಈಗ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿಲ್ಲ. ಹೊಸಬರು ಬಂದು ಸಣ್ಣಪುಟ್ಟ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಮತ್ತೊಂದು ಕಡೆ ಸ್ಟಾರ್ ನಟರೆಲ್ಲಾ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಉತ್ಸಾಹದಲ್ಲಿದ್ದಾರೆ. ಕನ್ನಡ ಪ್ರೇಕ್ಷಕರನ್ನು ರಂಜಿಸುವ, ಕರ್ನಾಟಕದ ಚಿತ್ರಮಂದಿರಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಯಾರಿಗೂ ಇಲ್ಲ ಎನ್ನುವಂತಾಗಿದೆ. ಇದನ್ನೆಲ್ಲಾ ನೋಡಿಯೂ ನೋಡದಂತೆ ನಮ್ಮ ಸ್ಟಾರ್ಸ್ ವರ್ತಿಸುತ್ತಿದ್ದಾರೆ.
ಶಿವಣ್ಣ ಮಾತ್ರ ಹೆಚ್ಚು ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಇನ್ನುಳಿದಂತೆ ‘ರಿಚರ್ಡ್ ಆಂಟನಿ’ ಸಿನಿಮಾ ಮಾಡೋಕೆ ರಕ್ಷಿತ್ ಶೆಟ್ಟಿ ಮೀನಾಮೇಷ ಎಣಿಸುತ್ತಿದ್ದಾರೆ. ಯಶ್ ಮುಂದಿನ ವರ್ಷ ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.
ಶ್ರೀಮುರಳಿ ಹೊಸ ಸಿನಿಮಾ ಖಬರ್ ಇಲ್ಲ. ‘ಕೆಡಿ’ ಸಿನಿಮಾ ತೆರೆಗೆ ತರಲು ಪ್ರೇಮ್ ಹಾಗೂ ಧ್ರುವಗೆ ಇನ್ನೆಷ್ಟು ವರ್ಷ ಬೇಕೋ ಗೊತ್ತಿಲ್ಲ. ‘ಕಾಂತಾರ- 1’ ಬಳಿಕ ರಿಷಬ್ ಶೆಟ್ಟಿ ಕನ್ನಡ ಸಿನಿಮಾ ಯಾವಾಗ ಮಾಡ್ತಾರೆ? ಎನ್ನುವ ಮಾಹಿತಿ ಯಾರಿಗೂ ಇಲ್ಲ. ಒಟ್ಟಾರೆ ಕನ್ನಡ ಸ್ಟಾರ್ಸ್ ಎಲ್ಲಾ ಕನ್ನಡ ಚಿತ್ರರಂಗದಿಂದ ದೂರಾಗಿ ಯೋಚಿಸುತ್ತಿದ್ದಾರೆ. ಇದರಿಂದ ಕನ್ನಡ ಸಿನಿಮಾದ ಕಂಪು ಕಡಿಮೆಯಾದಂತೆ ಕಾಣುತ್ತಿದೆ.
ಕನ್ನಡ ಪ್ರತಿಭೆಗಳು ಈಗ ಪರಭಾಷೆಯ ಸಿನಿಮಾಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಪ್ರಶಾಂತ್ ನೀಲ್, ಎ. ಹರ್ಷ ಟಾಲಿವುಡ್, ಬಾಲಿವುಡ್ ಚಿತ್ರಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ ಸೇರಿದಂತೆ ಕೆಲ ನಟಿಯರು ಕೂಡ ಬೇರೆ ಇಂಡಸ್ಟ್ರಿಗಳಲ್ಲಿ ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಗಳು ಪರಭಾಷೆಯಲ್ಲಿ ನೂರಾರು ಕೋಟಿ ಸುರಿದು ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿವೆ. ಇದೆನ್ನೆಲ್ಲಾ ನೋಡಿ ಖುಷಿಪಡಬೇಕೋ, ಕನ್ನಡ ಚಿತ್ರರಂಗ ಬಡವಾಗುತ್ತಿದೆ ಎಂದು ಬೇಸರಗೊಳ್ಳಬೇಕೋ ಗೊತ್ತಿಲ್ಲ. ಇದೆಲ್ಲದರ ನಡುವೆ ಕನ್ನಡ ನಟರು ಪರಭಾಷಾ ಫಿಲ್ಮ್ ಮೇಕರ್ಸ್ಗೆ ಅವಕಾಶ ಕೊಡುತ್ತಿರುವುದು ವಿಪರ್ಯಾಸ.