newsics.com
ನವದಂಪತಿಗಳ ಪಾಲಿಗೆ ಮೊದಲ ರಾತ್ರಿಯೆಂಬುದು ಜೀವನಪೂರ್ತಿ ನೆನಪಿರುವ ಒಂದು ಮಧುರವಾದ ಕ್ಷಣ. ಆದರೆ, ಆ ಮೊದಲ ರಾತ್ರಿಯೇ ಉತ್ತರ ಪ್ರದೇಶದ ದಂಪತಿಯ ಪಾಲಿಗೆ ಕರಾಳ ರಾತ್ರಿಯಾಗಿತ್ತು. ಹೆಂಡತಿಯೊಂದಿಗೆ ಹೊಸ ಜೀವನವನ್ನು ಆರಂಭಿಸಲು ಸಜ್ಜಾಗಿದ್ದ ಗಂಡನಿಗೆ ಶಾಕ್ ಕಾದಿತ್ತು. ಮದುವೆಯ ಮೊದಲ ರಾತ್ರಿಯನ್ನೇ ನೆನಪಿನಲ್ಲಿಡುವಂತೆ ಮಾಡಬೇಕಿದ್ದ ವಧು, ಅದನ್ನು ಜೀವಮಾನವಿಡೀ ಮರೆಯಲಾಗದ ಘಟನೆಯನ್ನಾಗಿ ಮಾಡಿಬಿಟ್ಟಿದ್ದಾಳೆ
ಮದುವೆಯ ನಂತರ ವರನು ತನ್ನ ಪತ್ನಿಯೊಂದಿಗೆ ಮೊದಲ ರಾತ್ರಿಯನ್ನು ಆಚರಿಸಲು ಉತ್ಸಾಹದಿಂದ ಕೋಣೆಗೆ ತೆರಳಿದ್ದಾನೆ. ವರನು ಕೋಣೆಗೆ ಪ್ರವೇಶಿಸುತ್ತಿದ್ದಂತೆಯೇ, ವಧು, “ನನಗೆ ಸ್ವಲ್ಪ ಕೆಲಸ ನೆನಪಾಯಿತು, ಅದನ್ನು ಮುಗಿಸಿಕೊಂಡು ತಕ್ಷಣ ಹಿಂತಿರುಗುತ್ತೇನೆ” ಎಂದು ಹೇಳಿ ಹೊರಗೆ ಹೋಗಿದ್ದಾಳೆ. ಅದರೆ ಎಷ್ಟು ಹೊತ್ತು ಕಾದರು ವಧು ಮಾತ್ರ ಹಿಂದಿರುಗಿ ಬರಲೇ ಇಲ್ಲ. ಆಗ ಆತಂಕಗೊಂಡ ವರನ ಕುಟುಂಬದವರು ಆಕೆಯ ಹುಡುಕಾಟ ಆರಂಭಿಸಿದ್ದಾರೆ.
.
ನವವಿವಾಹಿತ ವಧು ಮದುವೆಯಾದ ಕೆಲವೇ ಗಂಟೆಗಳಲ್ಲಿ ತನ್ನ ಪ್ರಿಯಕರನೊಂದಿಗೆ ಬೈಕ್ನಲ್ಲಿ ಪರಾರಿಯಾಗಿದ್ದಳು. ಈ ಘಟನೆ ಉತ್ತರ ಪ್ರದೇಶದ ಸೋನ್ಭದ್ರಾದ ಭಭಾನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ವಿಷಯ ತಿಳಿದು ಎರಡು ಕುಟಂಬದ ನಡುವೆ ಗಲಾಟೆ ನಡೆಯಿತು. ಇದೇ ವೇಳೆ, ವಧು ಮತ್ತು ಆಕೆಯ ಗೆಳೆಯನಿಗೆ ಈ ಗಲಾಟೆಯ ಬಗ್ಗೆ ತಿಳಿದಾಗ, ಆಕೆಯ ಗೆಳೆಯ ಆಕೆಯನ್ನು ಆಕೆಯ ಪೋಷಕರ ಮನೆಗೆ ವಾಪಸ್ ಕಳುಹಿಸಿದ್ದಾನೆ. ಆದರೆ, ಇದಾದ ನಂತರ ಹುಡುಗಿ ತನ್ನ ಗೆಳೆಯನೊಂದಿಗೆ ತನ್ನ ಹೆತ್ತವರ ಮನೆಯಲ್ಲಿ ವಾಸಿಸಲು ಒತ್ತಾಯಿಸಲು ಪ್ರಾರಂಭಿಸಿದ್ದಾಳೆ.
ಈ ವಿಚಾರವಾಗಿ ಮೂರು ಗ್ರಾಮಗಳ ಮುಖಂಡರು, ಗ್ರಾಮಸ್ಥರು ಮತ್ತು ಎರಡೂ ಪಕ್ಷಗಳ ಸಮ್ಮುಖದಲ್ಲಿ ಪಂಚಾಯತ್ ನಡೆಯಿತು. ಪಂಚಾಯತ್ನಲ್ಲಿ ಒಂದು ಪ್ರಸ್ತಾಪವನ್ನು ಮುಂದಿಡಲಾಯಿತು: ಹುಡುಗಿಯ ಗೆಳೆಯ ಸುಮಾರು ಮೂರು ಲಕ್ಷ ರೂಪಾಯಿಗಳ ಮದುವೆಯ ವೆಚ್ಚವನ್ನು ಭರಿಸಬೇಕು, ಆಗ ಮಾತ್ರ ಅವನು ಹುಡುಗಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಬಹುದು. ಇದಲ್ಲದೆ, ವರನ ಕಡೆಯಿಂದ ಪಡೆದ ವಸ್ತುಗಳನ್ನು ಸಹ ಪ್ರೇಮಿಗೆ ಹಸ್ತಾಂತರಿಸಬೇಕು ಎಂದು ತೀರ್ಮಾನಿಸಲಾಯಿತು
ಆದರೆ, ಗೆಳೆಯ ಮತ್ತು ಆತನ ಕುಟುಂಬದವರು ಈ ದೊಡ್ಡ ಮೊತ್ತವನ್ನು ನೀಡಲು ನಿರಾಕರಿಸಿದರು. “ಇಷ್ಟು ದೊಡ್ಡ ವೆಚ್ಚವನ್ನು ಭರಿಸಲು ನಮ್ಮಿಂದ ಸಾಧ್ಯವಿಲ್ಲ” ಎಂದು ಅವರು ಹೇಳಿದರು. ಯಾವುದೇ ಒಮ್ಮತಕ್ಕೆ ಬಾರದಿದ್ದಾಗ, ವರನ ಕಡೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.