o
ಬೆಂಗಳೂರು: ನಗರದ ಸ್ಪಾ ವೊಂದರಲ್ಲಿ ಕೆಲಸ ಬಿಟ್ಟು ಸ್ವಂತ ಸಲೂನ್ ಮಾಡಿದ್ದಕ್ಕೆ, ಲೇಡಿ ಗ್ಯಾಂಗ್ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ
ಸಂಜು (40) ಎಂಬುವವರು ಕೋಡಿಗೆಹಳ್ಳಿ ಬಳಿಯ ಸಾರಾ ಸ್ಪಾನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಸ್ಪಾದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದ ಕಾರಣಕ್ಕೆ ಸ್ಪಾ ಬಿಟ್ಟು ಸ್ವಂತವಾಗಿ ಸಲೂನ್ ತೆಗೆದು ಜೀವನ ನಡೆಸುತ್ತಿದ್ದರು. ಇದರಿಂದ ಕೋಪಗೊಂಡ ಸ್ಪಾ ಮಾಲಕಿ ನಿಶಾ ತನ್ನ ಗ್ಯಾಂಗ್ ಕಟ್ಟಿಕೊಂಡು ಬಂದು ಸಲೂನ್ ಮೇಲೆ ದಾಳಿ ನಡೆಸಿದ್ದು, ಸಂಜು ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ತನ್ನ ಕಾರಿನಲ್ಲಿ ಸಂಜುನನ್ನು ಎತ್ತಿಹಾಕಿಕೊಂಡು ಕಿಡ್ನ್ಯಾಪ್ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಾರಾ ಸ್ಪಾ ಮಾಲಕಿ ನಿಶಾ, ಸ್ನೇಹಿತೆ ಕಾವ್ಯಾ, ಮೊಹಮ್ಮದ್ ಎಂಬುವವರನ್ನು ಬಂಧಿಸಲಾಗಿದೆ. ಇನ್ನಿಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಸದ್ಯ ಸಂಜು ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೆಟ್ರೋಲ್ ಸುರಿದು ಸುಟ್ಟು ಹಾಕುವುದಾಗಿ ಬೆದರಿಕೆಯೊಡ್ದಿದ್ದಾಗಿಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.