newsics.com
70-80ರ ದಶಕ ಕನ್ನಡ ನಾಡಿನ ಸುವರ್ಣ ಯುಗ. ಕವಿಯ ಕವಿತೆಗಳು ಮನೆ ಮನೆಗೆ ತಲುಪಿದ ಸಮಯವದು. ಕುವೆಂಪು, ಬೇಂದ್ರೆ, ಅಡಿಗ, ನರಸಿಂಹ ಸ್ವಾಮಿ, ಶಿವರುದ್ರಪ್ಪ, ಪುತಿನ, ಲಕ್ಷ್ಮೀ ನಾರಾಯಣ ಭಟ್ಟ, ನಿಸಾರರ ಕಲ್ಪನೆಯ ಸಾಲುಗಳು ಹಾಡಾಗಿ ಕನ್ನಡಿಗರ ಎದೆಯ ಬಡಿದ ಕಾಲಮಾನ.
ಕವಿಯ ಭಾವನೆಗಳು ಹಾಡಾಗಿ ಕೇಳುಗನ ಎದೆಯಲ್ಲಿ ಗುನುಗಿ ನಾಲಿಗೆ ಮೇಲೆ ನಲಿದರೆ ಕವಿ- ಕೇಳುಗನಿಗದೇ ಧನ್ಯತೆ. ಬೇರೆಲ್ಲೂ ಅಷ್ಟಾಗಿ ಕಾಣಸಿಗದ ಸುಗಮ ಸಂಗೀತ ಪರಂಪರೆ ಕನ್ನಡ ನಾಡಿನಲ್ಲಿ ಬೆಳೆದು ಜನಪ್ರಿಯವಾದ ಪರಿ ಅಚ್ಚರಿ ಎನಿಸುವಷ್ಟು ದಟ್ಟ! ಅದೇ ಆ ಸುವರ್ಣ ಯುಗವನ್ನು ಇಂದಿಗೂ ಬೆಸೆಯುವ ಕೊಂಡಿಯಾಗಿದ್ದವರು ನಮ್ಮ ಪ್ರೀತಿಯ ಕವಿ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ (HSV)…
ಮನಕೆ ಎಟುಕದೆ ಹೋದ ಅದೆಷ್ಟೋ ಸಾಹಿತ್ಯದ ರಾಶಿಗಳಲಿ ಪ್ರೀತಿಯಿಂದ ಅಪ್ಪಿ ಎತ್ತಿಹಿಡಿವ ಸಾಹಿತ್ಯದ ಸಾಲಿನ ದೀಪ ಹಚ್ಚಿದವರು HSV.
ಸಾವಿರ ದಳ ಕಮಲಿನಿ ಓ ಭಾರತಿ… ಈ ಸಾಲುಗಳು ಎದೆಯಲ್ಲಿ ದೇಶಭಕ್ತಿಯ ಕಿಚ್ಚು ಹತ್ತಿಸುವುದಿಲ್ಲವೇ? ಇರಬೇಕು ಇರುವಂತೆ …. ತೊರೆದು ಸಾವಿರ ಚಿಂತೆ … ಮಳೆ ಸುರಿಸಿ ಹಗುರಾದ ಮುಗಿಲಿನಂತೆ… ಸಾಲು ಕೇಳಿದಾಕ್ಷಣ ಮನಸ್ಸು ಹಗುರವಾಗುವುದಿಲ್ಲವೆ?
ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ …. ಅರಿತೆವೇನು ನಾವು ನಮ್ಮ ಅಂತರಾಳವ?… ಎಂಬ ಸಾಲು ಕೇಳಿದಾಗ ಆಂತರ್ಯದ ಪೊಳ್ಳುತನಕ್ಕೊಂದು ಪ್ರಶ್ನೆ ಕಾಡುವುದಿಲ್ಲವೇ?
ಒಬ್ಬ ಸೃಜನಶೀಲ ಕವಿ ನೋವಿನ ಜಾಡನ್ನು ಅರಸುತ್ತಾ ಹೋದರೆ ಇಂತಹ ಮನೋಜ್ಞ ಸಾಲುಗಳು ಹುಟ್ಟುತ್ತಲೇ ಇರುತ್ತವೆ ಎಂಬುದಕ್ಕೆ HSV ಜೀವಂತ ನಿದರ್ಶನ.
ಕನ್ನಡ ಕಾವ್ಯ ಪರಂಪರೆಯಲ್ಲಿ ಕೃಷ್ಣ ಭಾವದಲ್ಲಿ ಮತ್ತೆ ಮತ್ತೆ ಮುಳುಗಿ ತೇಲುತ್ತಿರುವ ಕವಿ ಎಂದರೆ ನಿಸ್ಸಂಶಯವಾಗಿ ಅದು HSV.
ಕೃಷ್ಣನನ್ನು ದೇವನಾಗಿ ನೋಡದೆ ಪ್ರೀತಿಯ ಸಖನಾಗಿ, ವಿರಹದಿ ಕಾಡುವ ಪ್ರಿಯತಮನಾಗಿ, ದಾರಿ ತೋರಿದ ಗೆಳೆಯನಾಗಿ, ಬೆನ್ನಿಗೆ ನಿಂತ ಮಿತ್ರನಾಗಿ HSV ಭಾವಿಸಿ ತಮ್ಮ ಕವನಗಳಲ್ಲಿ ಕೃಷ್ಣನನ್ನು ಕಟ್ಟಿಕೊಟ್ಟ ರೀತಿ ಬಲು ಅನನ್ಯ . ಅಮ್ಮ ನಾನು ದೇವರಾಣೆ, “ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು, ಪ್ರೀತಿ ಕೊಟ್ಟ ರಾಧೆಗೆ ಮಾತು ಕೊಟ್ಟ ಮಾಧವ, ಲೋಕದ ಕಣ್ಣಿಗೆ ರಾಧೆಯು ಕೂಡ…, ಮಧುರೆಗೆ ಹೋದನು ಮಾಧವ… ಹೀಗೆ ಹತ್ತು ಹಲವು ಕೃಷ್ಣನ ಕುರಿತಾದ ಹಾಡುಗಳನ್ನು ಭಾವಗೀತೆಯನ್ನು ಪ್ರೀತಿಸುವ ಕನ್ನಡಿಗರಿಗೆ ಕೊರತೆ ಇದೆಯೇ?
ವೆಂಕಟೇಶ ಮೂರ್ತಿಯವರು ತಲೆ ಓಡಿಸಿ ಸಾಹಿತ್ಯ ಬರೆದವರಲ್ಲ. ಹೃದಯದ ಬೆಚ್ಚನೆಯ ಜೀವನ ಪ್ರೀತಿಯಲ್ಲಿ ಕವಿಯಾದರು. ಹಾಗಾಗಿ ಅವರ ಕವಿತೆಗಳು ಬರಿಯ ಪದಪುಂಜಗಳಲ್ಲ, ಅವು ಸಾಂತ್ವನದ ಸೆಲೆಗಳು!
HSVಯವರು ದೀರ್ಘ ಕಾಲದ ಅನಾರೋಗ್ಯದ ನರಳಾಟಕ್ಕೆ ಮುಕ್ತಾಯ ಬರೆದಿದ್ದಾರೆ. 80 ದಾಟಿದ ವ್ಯಕ್ತಿ ಮನಸ್ಸಿನಿಂದ ಮಾಗುವುದು ಒಬ್ಬ ಸೃಜನಶೀಲ ವ್ಯಕ್ತಿಯ ಸಹಜ ಗುಣ. ಅಂದು ಕೃಷ್ಣ ರಾಧೆಯ ಸರಸದ ಕಚಗುಳಿಯ ಕವಿತೆಯಿಂದ ಬುದ್ಧಚರಣದಂತಹ ವೈರಾಗ್ಯಮೂರ್ತಿಯ ಮಹಾಕಾವ್ಯ ಬರೆದು ನಿರಂತರ ಜೀವನ ಪ್ರೀತಿ ಮೆರೆದಿದ್ದಾರೆ.
ಅವರದೇ ಜನಪ್ರಿಯ ಸಾಲುಗಳು… ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ… ಬೇವಾಗಿವ ಸವಿಗಾನದ ಹಕ್ಕಿ ಹಾಡಿ ಹಾಡಿ ಮುಕ್ತ ಮುಕ್ತ…