newsics.com
ಹಿಂದೂ ಧರ್ಮದ ಎಲ್ಲಾ ಧಾರ್ಮಿಕ ಕಾರ್ಯಗಳು, ಸಂಪ್ರದಾಯ ಮತ್ತು ಪದ್ಧತಿಗಳಲ್ಲಿ ತೆಂಗಿನಕಾಯಿಗೆ ಬಲು ಮಹತ್ವದ ಸ್ಥಾನ ಇದೆ. ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಅಗತ್ಯವಾಗಿರುವ ವಸ್ತುಗಳಲ್ಲಿ ತೆಂಗಿನಕಾಯಿ ಕೂಡಾ ಒಂದು. ಇದನ್ನು ಶ್ರೀಫಲ ಎಂದೂ ಕರೆಯಲಾಗುತ್ತದೆ. ಶ್ರೀಫಲ ಎಂದರೆ ದೈವಿಕವಾದ ಫಲ ಅಥವಾ ದೇವರ ಫಲ ಎಂದು ಅರ್ಥ. ಹಿಂದೂ ಧಾರ್ಮಿಕ ಪದ್ಧತಿ, ಸಂಪ್ರದಾಯದ ಬಹುಮುಖ್ಯ ಭಾಗ ತೆಂಗಿನಕಾಯಿ ಎಂದರೂ ತಪ್ಪಲ್ಲ.
ದೇವರಿಗೆ ತೆಂಗಿನಕಾಯಿಯನ್ನು ಅರ್ಪಿಸಲಾಗುತ್ತದೆ. ದೇವಸ್ಥಾನ, ಪೂಜಾ ಕಾರ್ಯ ಅಥವಾ ಯಾವುದೇ ಮಂಗಳಕಾರ್ಯಗಳ ಸಂದರ್ಭದಲ್ಲಿ ತೆಂಗಿನಕಾಯಿಯನ್ನು ಒಡೆಯಲಾಗುತ್ತದೆ. ಈ ತೆಂಗಿನಕಾಯಿ ಒಡೆಯುವ ಪದ್ಧತಿಯ ಪ್ರತಿಯೊಂದು ಹೆಜ್ಜೆಗೂ ಅದರದ್ದೇ ಆದ ಮಹತ್ವದ ಮತ್ತು ಆಳವಾದ ಅರ್ಥವಿದೆ. ಮೊದಲು ತೆಂಗಿನಕಾಯಿಯ ಸಿಪ್ಪೆಯನ್ನು ತೆಗೆಯಲಾಗುತ್ತದೆ. ಅಂದರೆ, ಇದು ನಾವು ತ್ಯಜಿಸಬೇಕಾದ ಆಂತರಿಕ ಮತ್ತು ಭೌತಿಕ ಆಸೆಗಳ ಸಂಕೇತ. ಹೀಗೆ ಸಿಪ್ಪೆ ಸುಲಿದ ತೆಂಗಿನಕಾಯಿಯನ್ನು ದೇವರೆದು ಅಥವಾ ನೆಲಕ್ಕೆ ಬಡಿದು ಒಡೆಯಲಾಗುತ್ತದೆ. ಇದು ನಮ್ಮ ಅಹಂಕಾರದ ಸಂಕೇತ. ಅಂದರೆ, ದೇವರೇ ಎಲ್ಲಾ ನಾವು ಬರೀ ಶೂನ್ಯ ಎಂಬರ್ಥ ಇಲ್ಲಿನದ್ದು. ದೇವರರಿಗೆ ಸಂಪೂರ್ಣ ಶರಣಾಗುವ ಸಂಕೇತವಿದು. ತೆಂಗಿನಕಾಯಿ ಒಡೆದ ನಂತರ ತೆಂಗಿನ ನೀರು ಅದರಿಂದ ಹರಿಯುತ್ತದೆ. ಇದು ನಮ್ಮೊಳಗಿನ ಎಲ್ಲಾ ನಕಾರಾತ್ಮಕತೆಯ ಸಂಕೇತ. ಅಂದರೆ, ನಮ್ಮ ಮನಸ್ಸು, ಆಂತರ್ಯದಲ್ಲಿರುವ ಎಲ್ಲಾ ನಕಾರಾತ್ಮಕತೆಯನ್ನು ತೊಡೆದು ಸ್ವಚ್ಚವಾದ ಜೀವನ ನಡೆಸಬೇಕು ಎಂಬುದನ್ನೂ ಇದು ಸಂಕೇತಿಸುತ್ತದೆ. ತೆಂಗಿನಕಾಯಿಯ ಮೃದುವಾದ ಒಳಭಾಗವು ಶಾಂತಿಯನ್ನು ಸಂಕೇತಿಸುತ್ತದೆ. ದೇವರ ಪೂಜೆಯ ಬಳಿಕ ಈ ಒಡೆದ ತೆಂಗಿನಕಾಯಿಯನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ.
ತೆಂಗಿನಕಾಯಿಯಲ್ಲಿ ವಿವಿಧ ದೇವರ ಸಾನಿಥ್ಯ ಇರುವ ನಂಬಿಕೆ ಕೂಡಾ ಇದೆ. ಏಕಾಕ್ಷಿ ತೆಂಗಿನಕಾಯಿಯನ್ನು ದೇವಿ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ಇನ್ನು ತೆಂಗಿನಕಾಯಿಯಲ್ಲಿರುವ ಮೂರು ಕಣ್ಣಿಗಳು ಶಿವ ದೇವರ ತ್ರಿನೇತ್ರಗಳನ್ನು ಸಂಕೇತಿಸುತ್ತದೆ. ಇನ್ನೊಂದು ನಂಬಿಕೆಯ ಪ್ರಕಾರ ತೆಂಗಿನಕಾಯಿಯ ಒಳಗೆ ಇರುವ ಬಿಳಿ ಪದರ ಪಾರ್ವತಿ ದೇವಿಯ ಸಂಕೇತ. ತೆಂಗಿನಕಾಯಿಯೊಳಗಿರುವ ನೀರು ಗಂಗೆಯನ್ನು ಸೂಚಿಸುತ್ತದರೆ, ಕಂದು ಬಣ್ಣದ ಚಿಪ್ಪು ಕಾರ್ತಿಕೇಯನನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆ ಕೂಡಾ ಇದೆ. ಈ ಕಾರಣದಿಂದಲೂ ತೆಂಗಿನಕಾಯಿಗೆ ಬಲು ಪ್ರಾಮುಖ್ಯತೆ ಇದೆ.
https://www.newsics.com/2025/04/13/the-culprit-who-kidnapped-and-murdered-a-five-year-old-girl/