newsics.com
ತೆಲಂಗಾಣ: ಮೃತಪಟ್ಟ ತಾಯಿಯ ದೇಹವನ್ನು ತೆಗೆಯಲು ಕೈಯಲ್ಲಿ ದುಡ್ಡಿಲ್ಲದೆ ಕಂಗಾಲಾದ ಸಹೋದರಿಯರಿಬ್ಬರು ಖಿನ್ನತೆಗೆ ಒಳಗಾಗಿ ತಾಯಿಯ ಮೃತ ದೇಹದ ಜೊತೆ ಒಂಬತ್ತು ದಿನ ಕಳೆದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಲಲಿತಾ(45) ಮೃತ ಮಹಿಳೆ ಎಂದು ತಿಳಿದು ಬಂದಿದೆ.
ಏನಿದು ಪ್ರಕರಣ:
ರಾಜು ಮತ್ತು ಲಲಿತ ದಂಪತಿಗೆ ರವಳಿಕಾ (25) ಮತ್ತು ಅಶ್ವಿತಾ (22) ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು, ರಾಜು ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ರಾಜು ಅವರು ಯಾವುದೋ ವಿಚಾರಕ್ಕೆ ಕಳೆದ 2020ರಲ್ಲಿ ಹೆಂಡತಿ ಮಕ್ಕಳನ್ನು ಬಿಟ್ಟು ಬೇರೆ ಹೋಗಿದ್ದರು. ಇದಾದ ಬಳಿಕ ಲಲಿತಾ ಅವರು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.
ಇತ್ತೀಚಿಗೆ ಎರಡು ತಿಂಗಳಿನಿಂದ ಲಲಿತಾ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬುದ್ಧನಗರದಲ್ಲಿರುವ ಬಹುಮಹಡಿ ಕಟ್ಟಡದ 4ನೇ ಮಹಡಿಯಲ್ಲಿ ವಾಸವಾಗಿದ್ದರು. ರವಳಿಕಾ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ, ಆಶಿವತಾ ಕಾರ್ಯಕ್ರಮಗಳ ಆಯೋಜಕರಿಗಾಗಿ ಕೆಲಸ ಮಾಡುತ್ತಾಳೆ.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲಲಿತಾ ಇದೇ ತಿಂಗಳ 23ರಂದು ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇತ್ತ ತಾಯಿಯ ಮರಣದಿಂದ ಕಂಗೆಟ್ಟ ಮಕ್ಕಳು ಶವಸಂಸ್ಕಾರಕ್ಕೆ ಹಣವಿಲ್ಲದೆ, 9 ದಿನಗಳ ದಿನಗಳ ಕಾಲ ತಾಯಿಯ ಮೃತದೇಹವನ್ನು ಪಕ್ಕದಲ್ಲೇ ಇಟ್ಟುಕೊಂಡು ಅನ್ನ ನೀರು ಕುಡಿಯದೆ ಖಿನ್ನತೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಇತ್ತ ದೇಹ ದುರ್ವಾಸನೆ ಬರಲು ಶುರುವಾಗುತ್ತಿದ್ದಂತೆ ಗಾಬರಿಗೊಂಡ ಸಹೋದರಿಯರು ಶಾಸಕ ಪದ್ಮರಾವ್ ಅವರ ಕಚೇರಿಗೆ ತೆರಳಿ ವಿಚಾರ ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತ ಶಾಸಕರು ವಿಚಾರ ಪೊಲೀಸರಿಗೆ ತಿಳಿಸಿ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಲು ನೆರವಾಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.