newsics.com
ಹೈದರಾಬಾದ್: ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಗರ್ಭಿಣಿ ಪತ್ನಿಯನ್ನು ಕೊಂದ ಪತಿ ದೇಹವನ್ನು ಕುಕ್ಕರ್ನಲ್ಲಿ ಬೇಯಿಸಿದ ಭಯಾನಕ ಘಟನೆ ನಡೆದಿದೆ.
35 ವರ್ಷದ ಮಹಿಳೆಯನ್ನು ಆಕೆಯ ಪತಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದ್ದು, ಆಕೆಯ ದೇಹವನ್ನು ಕತ್ತರಿಸಿ ಪ್ರೆಶರ್ ಕುಕ್ಕರ್ನಲ್ಲಿ ಬೇಯಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ಗುರುಮೂರ್ತಿಯನ್ನು ವಶಕ್ಕೆ ಪಡೆಯಲಾಗಿದ್ದು, ಹೇಳಿಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಹದ ಭಾಗಗಳನ್ನು ಕುದಿಸಿ ನಂತರ ನದಿಗೆ ಎಸೆದಿರುವುದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ವಾರದ ಹಿಂದೆ ಮಹಿಳೆ ಕಾಣೆಯಾಗಿದ್ದು, ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಮಾಜಿ ಸೇನಾ ಸಿಬ್ಬಂದಿಯಾಗಿದ್ದು, ಪ್ರಸ್ತುತ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾನೆ.
ಪತ್ನಿಯೊಂದಿಗೆ ಜಗಳವಾಗಿದ್ದು, ನಂತರ ಗುರುಮೂರ್ತಿ ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದ್ದು, ತನಿಖೆಯ ಸಮಯದಲ್ಲಿ ವಿವರಗಳು ಬೆಳಕಿಗೆ ಬರಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್ನ ರಾಚಕೊಂಡ ಕಮಿಷನರೇಟ್ನ ಮೀರ್ಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪ್ರಕಾಶಂ ಜಿಲ್ಲೆಯ ಜೆಪಿ ಚೆರುವು ಮೂಲದ ಗುರುಮೂರ್ತಿ ಡಿಆರ್ಡಿಒದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ತನ್ನ ಪತ್ನಿ ವೆಂಕಟ ಮಾಧವಿ (35) ಅವರೊಂದಿಗೆ ಜಿಲ್ಲಾಗುಡದ ನ್ಯೂ ವೆಂಕಟೇಶ್ವರ ನಗರ ಕಾಲೋನಿಯಲ್ಲಿ ವಾಸಿಸುತ್ತಿದ್ದ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಮೇ 13ರಂದು ಮಾಧವಿ ಕಾಣೆಯಾಗಿದ್ದಾಳೆ ಎಂದು ಪೋಷಕರು ಮೀರ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸುವ ಸಮಯದಲ್ಲಿ ತನಗೆ ಏನೂ ತಿಳಿದಿಲ್ಲವೆಂಬಂತೆ ಗುರುಮೂರ್ತಿ ತನ್ನ ಅತ್ತೆ ಮಾವನೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಅರಮಭಿಸಿದಾಗ, ಗುರುಮೂರ್ತಿ ಶಂಕೆ ವ್ಯಕ್ತವಾಗಿದೆ. ಪೊಲೀಸರು ತಮ್ಮದೇ ಶೈಲಿಯಲ್ಲಿ ತನಿಖೆ ನಡೆಸಿದಾಗ ಈ ಅಪರಾಧ ಬೆಳಕಿಗೆ ಬಂದಿದೆ. ಗುರುಮೂರ್ತಿ ತನ್ನ ಹೆಂಡತಿಯನ್ನು ಎಷ್ಟು ಕ್ರೂರವಾಗಿ ಕೊಂದಿದ್ದಾನೆಂದು ತಿಳಿದು ಪೊಲೀಸರೇ ಆಘಾತಕ್ಕೊಳಗಾಗಿದ್ದಾರೆ.