newsics.com
ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದ ವಿಭಜನೆಗೆ ರಾಜ್ಯ ಸರ್ಕಾರ ಅಸ್ತು ಎಂದಿದ್ದು, ಶೀಘ್ರದಲ್ಲೇ ಜೈಲು ಮೂರು ಭಾಗಗಳಾಗಿ ವಿಂಗಡಣೆಯಾಗಲಿದೆ. ಈ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ತರುವ ಜೊತೆಗೆ ಅಕ್ರಮ ಚಟುವಟಿಕೆಗೆ ಶಾಶ್ವತ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.
ಸುಮಾರು 40 ಎಕರೆ ಪ್ರದೇಶವನ್ನು ಒಳಗೊಂಡಿರುವ ಸೆಂಟ್ರಲ್ ಜೈಲಿನಲ್ಲಿ 1,068 ಸಜಾಬಂಧಿ, 3,926 ವಿಚಾರಣಾಧೀನ ಹಾಗೂ 205 ಮಹಿಳಾ ಬಂಧಿ ಸೇರಿ ಒಟ್ಟು 4,994 ಮಂದಿ ಕೈದಿಗಳಿದ್ದಾರೆ. ಭಯೋತ್ಪಾದನೆ ಸೇರಿದಂತೆ ಘೋರ ಅಪರಾಧ ಕೃತ್ಯ ಎಸಗಿರುವವರಿಗಾಗಿ ಪ್ರತ್ಯೇಕ ಹೈ ಸೆಕ್ಯೂರಿಟಿ ಕಾರಾಗೃಹವನ್ನು ಸೆಂಟ್ರಲ್ ಜೈಲಿನ ಪಕ್ಕದಲ್ಲಿ ನಿರ್ಮಿಸಲಾಗುತ್ತಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಸುವ ಸಾಮರ್ಥ್ಯ – 4,146
ಒಟ್ಟು ಇರುವ ಕೈದಿಗಳು – 4,994
ವಿಚಾರಣಾಧೀನ ಕೈದಿಗಳು – 3,926
ಶಿಕ್ಷಾಬಂಧಿಗಳು – 1,068
ಮಹಿಳಾ ಬಂಧಿಗಳು – 205
ಜೈಲು ವಿಭಜನೆಯಿಂದಾಗುವ ಅನುಕೂಲಗಳು:
ಭದ್ರತೆ ಹಾಗೂ ಅಕ್ರಮಕ್ಕೆ ಕಡಿವಾಣಕ್ಕೆ ನೆರವು ಜೈಲಿನ ಆಡಳಿತದಲ್ಲಿ ಪಾರದರ್ಶಕತೆಯಲ್ಲಿ ಸುಧಾರಣೆ
ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲಿನ ಜವಾಬ್ದಾರಿ ಹೊರೆ ಕಡಿಮ
ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಾರಣಗಳಿಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಡಳಿತಾತ್ಮಕವಾಗಿ ಜೈಲನ್ನು ಮೂರು ಭಾಗವಾಗಿ ವಿಭಜಿಸಬೇಕೆಂದು ಕಾರಾಗೃಹ ಹಾಗೂ ಸುಧಾರಣೆ ಸೇವೆ ಇಲಾಖೆಯು ಪ್ರಸ್ತಾವನೆ ಸಲ್ಲಿಸಿತ್ತು. ಅದಕ್ಕೆ ಸರ್ಕಾರ ಅಸ್ತು ಎಂದಿದ್ದು, ಶೀಘ್ರದಲ್ಲಿ ಜೈಲು ಮೂರು ಭಾಗಗಳಾಗಿ ವಿಭಜನೆಯಾಗಲಿದೆ.
ಮೂರು ಹೋಳಾಗಿ ವಿಭಜನೆ ಆಗುವುದರಿಂದ ಅಧಿಕಾರಿ ಹಾಗೂ ಸಿಬ್ಬಂದಿಯೂ ಸಹ ಪ್ರತ್ಯೇಕವಾಗಲಿದ್ದಾರೆ. ಇದು ಜೈಲಿನ ಭದ್ರತೆ ಜೊತೆಗೆ ಪಾರದರ್ಶಕತೆಗೆ ಮುನ್ನುಡಿಯಾಗಲಿದೆ. ಹಣ ನೀಡಿದರೆ ಬೇಕಾದ ವಸ್ತುಗಳು ಹಾಗೂ ಐಷಾರಾಮಿ ಸೌಲಭ್ಯಗಳು ಸಿಗಲಿವೆ ಎಂಬ ಆರೋಪಗಳೂ ಕೇಳಿಬಂದಿದ್ದವು.
ಇತ್ತೀಚೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಫೋಟೋವೊಂದು ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಸದ್ಯ ಶಿಕ್ಷಾಬಂಧಿ, ವಿಚಾರಣಾಧೀನ ಕೈದಿಗಳನ್ನು ಪ್ರತ್ಯೇಕ ಬ್ಯಾರಕ್ನಲ್ಲಿ ಇರಿಸಲಾಗಿದ್ದರೂ ಊಟ, ಅಡುಗೆ ಮನೆ ಹಾಗೂ ಆಸ್ಪತ್ರೆ ಕಾರಣಕ್ಕಾಗಿ ಹೊರಗೆ ಬರಲೇಬೇಕಿದೆ. ಈ ವೇಳೆ ಸಜಾಬಂಧಿಗಳು ಹಾಗೂ ವಿಚಾರಣಾ ಕೈದಿಗಳು ಪರಸ್ಪರ ಎದುರಾಗಲಿದ್ದಾರೆ. ಇದರಿಂದ ಅಪರಾಧ ಸಂಚು ರೂಪಿಸುವ ಸಾಧ್ಯತೆಯಿದೆ. ಹೀಗಾಗಿ, ಪ್ರತ್ಯೇಕ ಮೂರು ವಿಭಾಗವಾದರೆ ವಿಚಾರಣಾಧೀನ ಕೈದಿಗಳ ವಿಭಾಗಕ್ಕೆ ಮುಖ್ಯ ಅಧೀಕ್ಷಕ, ಕೈದಿ ಹಾಗೂ ಮಹಿಳಾ ಕೈದಿ ವಿಭಾಗಗಳಿಗೆ ಎಸ್ಪಿ ದರ್ಜೆ ಅಧೀಕ್ಷರು ಮುಖ್ಯಸ್ಥರಾಗಲಿದ್ದಾರೆ. ಈ ಮೂರು ವಿಭಾಗಗಳ ಉಸ್ತುವಾರಿಯನ್ನು ಡಿಐಜಿ ವಹಿಸಲಿದ್ಧಾರೆ ಎಂದು ಮೂಲಗಳು ತಿಳಿಸಿವೆ.