newsics.com
ಕೋಲಾರ : ಅಂಗನವಾಡಿ ಕಟ್ಟಡದ ಛಾವಣಿಯ ಸಿಮೆಂಟ್ ಕುಸಿದ ಪರಿಣಾಮ ನಾಲ್ವರು ಮಕ್ಕಳು ಗಾಯಗೊಂಡ ಘಟನೆ ತಾಲೂಕಿನ ಡಿಕೆಹಳ್ಳಿ ಗ್ರಾಪಂ ವ್ಯಾಪ್ತಿಯ ದಾಸರಹೊಸಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಲಾಸ್ಯ, ಲಿಖಿತ, ಪ್ರಣಿತ ಹಾಗೂ ಚಾನ್ವಿ ಎಂಬ ಮಕ್ಕಳಿಗೆ ತಲೆ ಹಾಗೂ ಕಾಲುಗಳಿಗೆ ಗಾಯಗಳಾಗಿವೆ. ಈ ಪೈಕಿ ಇಬ್ಬರು ಮಕ್ಕಳಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಂಗನವಾಡಿ ಕೇಂದ್ರದಲ್ಲಿ ಒಟ್ಟು ೧೨ ಮಕ್ಕಳಿದ್ದು ಶನಿವಾರ ಬರೀ ನಾಲ್ಕು ಮಕ್ಕಳು ಮಾತ್ರ ಹಾಜರಿದ್ದು, ಉಳಿದವರು ಗೈರಾಗಿದ್ದರು ಎನ್ನಲಾಗಿದೆ.
ಕೇವಲ 8 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ಅಂಗನವಾಡಿ ಕಟ್ಟಡದ ಛಾವಣಿ ಬಿರುಕು ಬಿಟ್ಟು ಮಳೆ ಬಂದರೆ ನೀರು ಸೋರುತ್ತಿತ್ತು. ಈ ಬಗ್ಗೆ ಹಲವು ಬಾರಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.