newsics.com
ಕೇರಳದಲ್ಲಿ ನಿಫಾ ವೈರಸ್ ಪತ್ತೆಯಾಗಿದ್ದು ಮಾತ್ರವಲ್ಲ, 24ರ ಹರೆಯದ ಯುವಕನೋರ್ವ ಬಲಿಯಾಗಿರವುದು ದೃಢಪಟ್ಟಿದೆ.
ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ಮಾಹಿತಿ ನೀಡಿದ್ದು, ನಿಫಾ ವೈರಸ್ನಿಂದ ಯುವಕ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಆದರೆ ಜ್ವರದಿಂದ ಬಳಲುತ್ತಿದ್ದ ಈ ಯುವಕ ಬೆಂಗಳೂರಿನಿಂದ ಕೇರಳದ ಮಲಪ್ಪುರಂಗೆ ತೆರಳಿದ್ದ. ಅಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಇದೀಗ ನಿಫಾ ವೈರಸ್ನಿಂದ ಮೃತಪಟ್ಟಿದ್ದಾನೆ.
ನಿಫಾ ವೈರಸ್ ಖಚಿತಗೊಳ್ಳುತ್ತಿದ್ದಂತೆ ಇದೀಗ ಕೇರಳ ಮಾತ್ರವಲ್ಲ ಬೆಂಗಳೂರಿನಲ್ಲೂ ಆತಂಕ ಸೃಷ್ಟಿಯಾಗಿದೆ.
ಕೇರಳದ ಮಲಪ್ಪುರಂ ನಿವಾಸಿಯಾಗಿರುವ ಈ ಯುವಕ ಆರೋಗ್ಯದ ಕಾರಣದಿಂದ ತವರಿಗೆ ಮರಳಿದ್ದ. ಆಸ್ಪತ್ರೆಗೆ ದಾಖಲಾಗಿದ್ದ ಯುವಕನ ಮಾದರಿಗಳನ್ನು ಸಂಗ್ರಹಿಸಿ ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಸೆಪ್ಟೆಂಬರ್ 9 ರಂದು ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಯುವಕನ ಸಾವು ಪ್ರಕರಣ ವೈದ್ಯರ ತಂಡಕ್ಕೆ ಅನುಮಾನ ಮೂಡಿಸಿತ್ತು. ಈ ವೇಳೆ ಮತ್ತೊಮ್ಮೆ ಈತನ ಮಾದರಿ ಸಂಗ್ರಹಿಸಿ ಪುಣೆಯ ಲ್ಯಾಬ್ಗೆ ಕಳುಹಿಸಲಾಗಿತ್ತು.
ಈಗ ಪ್ರಯೋಗಾಲಯದಿಂದ ವರದಿ ಬಂದಿದ್ದು, ಯುವಕನಿಗೆ ನಿಫಾ ವೈರಸ್ ಪಾಸಿಟಿವ್ ಇತ್ತೆಂಬುದು ದೃಢಪಟ್ಟಿದೆ. ಈ ಮಾಹಿತಿ ಬಯಲಾಗುತ್ತಿದ್ದಂತೆ ಕೇರಳದಲ್ಲಿ ಆತಂಕ ಸೃಷ್ಟಿಯಾಗಿದೆ. ಕೇರಳದಲ್ಲಿ ನಿಫಾ ವೈರಸ್ಗೆ ಯುವಕ ಬಲಿಯಾಗಿರುವುದು ಜನರ ಆತಂಕ ಹೆಚ್ಚಿಸಿದೆ.
ನಿಫಾ ವೈರಸ್ ಖಚಿತವಾಗುತ್ತಿದ್ದಂತೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ತುರ್ತು ಸಭೆ ಕರೆದು ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ. ನಿಫಾ ವೈರ್ ಪ್ರಕರಣದ ಕುರಿತು 16 ಸದಸ್ಯರ ಸಮಿತಿ ರಚಿಸಲಾಗಿದೆ.
ಈ ಸಮಿತಿ ಹಾಗೂ ಅಧಿಕಾರಿಗಳು ಯುವಕನ ನೇರ ಸಂಪರ್ಕಿತರನ್ನು ಪತ್ತೆ ಹಚ್ಚಿದೆ. ಬೆಂಗಳೂರಿನಿಂದ ಕೇರಳದವರೆಗೆ 151 ಮಂದಿ ನೇರ ಸಂಪರ್ಕಿತರನ್ನು ಗುರುತಿಸಲಾಗಿದೆ. ಇದೀಗ ಅವರ ಮಾದರಿ ಸಂಗ್ರಹಿಸಲಾಗುತ್ತಿದೆ. ಇಷ್ಟೇ ಅಲ್ಲ ವರದಿ ಬರುವವರೆಗೂ ಎಲ್ಲರನ್ನೂ ಐಸೋಲೇಶನ್ ಮಾಡಲಾಗುತ್ತದೆ ಎಂದು ವೀಣಾ ಜಾರ್ಜ್ ಹೇಳಿದ್ದಾರೆ. ಹಲವರನ್ನು ಈಗಾಗಲೇ ಐಸೋಲೇಶನ್ ಮಾಡಲಾಗಿದೆ. ಈ ಪೈಕಿ ಐವರಲ್ಲಿ ಸಣ್ಣ ಪ್ರಮಾಣದಲ್ಲಿ ಜ್ವರ, ಮೈ ಕೈ ನೋವು, ಶೀತ ಕಾಣಿಸಿಕೊಂಡಿದೆ.
ಈ ವರ್ಷ ಕೇರಳದಲ್ಲಿ ನಿಫಾ ವೈರಸ್ಗೆ ಬಲಿಯಾಗುತ್ತಿರುವ 2ನೇ ಪ್ರಕರಣ ಇದಾಗಿದೆ. ಇದಕ್ಕೂ ಮೊದಲು ಚಿಕಿತ್ಸೆ ಪಡೆಯುತ್ತಿದ್ದ ಬಾಲಕನೊಬ್ಬ ಜುಲೈ 21ರಂದು ನಿಫಾ ವೈರಸ್ಗೆ ಬಲಿಯಾಗಿದ್ದ.
ದರ್ಶನ್ ಸೆಲ್ ಗೆ ಟಿವಿ ಬರೋದ್ಯಾವಾಗ?; ಹೊರ ಜಗತ್ತಿನ ಮಾಹಿತಿ ತಿಳಿಯಲು ಕಾತುರ!