newsics.com
ಮಳೆಗಾಲ ಶುರುವಾಯಿತು ಅಂದ್ರೆ ಸಾಕು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಆತಂಕ ಶುರುವಾಗುತ್ತೆ. ವಿಶೇಷವಾಗಿ ನೆರೆಯ ಜೊತೆಗೆ ಭೂಕುಸಿತದ ಭೀತಿ ಎದುರಾಗುತ್ತದೆ. ಕೊಡಗು, ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಹೆಚ್ಚಾಗುತ್ತಿರುವ ಮಣ್ಣಿನ ಸವೆತ, ಧರೆ ಕುಸಿತ, ಗುಡ್ಡ ಕುಸಿತ ಇತ್ಯಾದಿಗಳು ವ್ಯಾಪಕವಾಗಿ ಆಗುತ್ತಿವೆ. ಪ್ರಸ್ತುತ ಉತ್ತರಕನ್ನಡದಲ್ಲಂತೂ ಸುತ್ತ ಕಡೆಯಿಂದ ಕಬಂಧಬಾಹುವಿನಂತೆ ವಿಸ್ತರಿಸಿದ ಬೆಟ್ಟಗಳು ದಿಗ್ಬಂಧನ ಹಾಕಿಬಿಟ್ಟಿವೆ.
ತಜ್ಞ ಡಾ. ಜಿ ಎಸ್ ಶ್ರೀನಿವಾಸ್ ರೆಡ್ಡಿ ಪ್ರಕಾರ ಶೇಕಡಾ 30ರಷ್ಟು ಮಾತ್ರ ಭೂಕುಸಿತಗಳು ನೈಸರ್ಗಿಕವಾಗಿ ನಡೆಯುತ್ತವೆ. ಉಳಿದಂತೆ 70% ರಷ್ಟು ಭೂಕುಸಿತಗಳು ನಡೆಯುವುದು ಮಾನವನ ಹಸ್ತಕ್ಷೇಪದಿಂದಾಗಿದೆ. ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಮಾಡುವ ಕೆಲವು ತಪ್ಪುಗಳು ಮಳೆಗಾಲದಲ್ಲಿ ಭೂಮಿ ಬಾಯಿಬಿಡುವಂತೆ ಮಾಡುತ್ತದೆ.
ಇಡೀ ಕರ್ನಾಟಕದ ಮಳೆ ಪ್ರಮಾಣ ಸರಾಸರಿ 1550 ಮಿಲಿಮೀಟರ್ ಆದರೆ ಪಶ್ಚಿಮ ಘಟ್ಟದ್ದು 2500-4000ಮಿಲಿಮೀಟರ್ ಮಳೆ ಬರುತ್ತದೆ. 6000-8000 ಮಿಲಿಮೀಟರ್ ನಷ್ಟು ಮಳೆ ಬೀಳುವ ಸೂಕ್ಷ್ಮ ಪ್ರದೇಶಗಳೂ ಇವೆ. ಹೀಗಾಗಿ ಇಷ್ಟು ಭಾರೀ ಮಳೆ ಬೀಳುವ ಪ್ರದೇಶಗಳಲ್ಲಿ ಭೂಕುಸಿತವಾಗಬಹುದು. ಇನ್ನೊಂದು ಕಾರಣ ನದಿಯ ಪಕ್ಕದಲ್ಲಿ ಅದರ ಹರಿವು ಹೆಚ್ಚಾದಾಗ ಕೊರೆತ ಉಂಟಾಗಿ ಭೂ ಕುಸಿತ ಉಂಟಾಗಬಹುದು. ಹೀಗೆ ಭೂಕುಸಿತಕ್ಕೆ ನೈಸರ್ಗಿಕ ಕಾರಣ 20-30% ರಷ್ಟು ಮಾತ್ರ! ಎಂದರೆ ನೀವು ನಂಬಲೇಬೇಕು.
ಅಭಿವೃದ್ಧಿ ಕಾರ್ಯಗಳಲ್ಲಿ ಇಳಿಜಾರನ್ನು ಸಮತಟ್ಟಾಗಿಸಲು 0-45% ರಷ್ಟು ʼಸ್ಲೋಪ್ ಕಟ್ʼ ಮಾಡಬಹುದು. ಆದರೆ 70, 80, 90% ಗುಡ್ಡ ಕಡಿದಾಗ, ಗುಡ್ಡಕ್ಕೆ ಆಧಾರವಾದ “Toe area” ನಷ್ಟವಾಗುತ್ತದೆ. ಹೆಚ್ಚು ರಸ್ತೆ ಅಗಲೀಕರಣ ಮಾಡಿದಷ್ಟು “toe area” ಎಂಬ ಬೆಟ್ಟದ ಆಧಾರ ನಷ್ಟವಾಗುತ್ತಾ ಹೋದಂತೆ ಸವಕಳಿ ಪ್ರಮಾಣ ಹೆಚ್ಚುತ್ತದೆ ಗುಡ್ಡಗಳು ಕುಸಿಯಲು ಇದೇ ಮುಖ್ಯಕಾರಣ. ಇನ್ನು ಇಳಿಜಾರು ಪ್ರದೇಶವನ್ನು ಮನೆ ಹಾಗೂ ಇನ್ನಿತರ ಕಟ್ಟಡ, ಸ್ಥಾವರ ನಿರ್ಮಾಣದ ಜಾಗಕ್ಕಾಗಿ ಕದಲಿಸುತ್ತಾ ಹೋದರೆ ಮೇಲುಗಡೆಯ ಮಣ್ಣಿನ ಭಾರ ತಡಿಯದೇ ಧರೆ ಕುಸಿಯುತ್ತದೆ. ಇವಿಷ್ಟೂ ಭೂ ಕುಸಿತದ ಕಾರಣಗಳು ಎಂದು ತಜ್ಞರು ಹೇಳಿದ್ದಾರೆ.
ಸರ್ಕಾರಿ ನೌಕರರೂ ಈಗ RSS ಸೇರಬಹುದು; ಇಂದಿರಾ ಗಾಂಧಿ ಹೇರಿದ್ದ ನಿಷೇಧ ರದ್ದು!