newsics.com
ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ. ರಾಜ್ಯ ಸರ್ಕಾರ ಇದೀಗ ತನ್ನ ಸಂಪುಟದ ಸಚಿವನ ಅಳಿಯನಿಗಾಗಿಯೇ ನಿಯಮ ಬಾಹಿರವಾಗಿ ಹುದ್ದೆ ಸೃಷ್ಟಿ ಮಾಡಿದೆ ಎಂಬ ಆರೋಪ ಕೇಳಿ ಬಂದಿದ್ದು, ಸರ್ಕಾರದ ಈ ಉದ್ಧಟತನದ ತಿರ್ಮಾನದ ವಿರುದ್ಧ ವಿಧಾನಸಭಾ ಸಚಿವಾಲಯದ ಅಧಿಕಾರಿಗಳೇ ಹೋರಾಟಕ್ಕೆ ಇಳಿದಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಭಾವಿ ಸಚಿವ, ಕೆಎಚ್ ಮುನಿಯಪ್ಪ ಅವರ ಅಳಿಯ ಕೆಸಿ ಶಶಿಧರ್ಗೆ ಕಾನೂನು ಬಾಹಿರವಾಗಿ ಕಾರ್ಯದರ್ಶಿ ಹುದ್ದೆ 2 ಅನ್ನು ಸೃಷ್ಟಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಸದ್ಯ ವಿಧಾನಸಭಾ ಸಚಿವಾಲಯದಲ್ಲಿ ಗಣಕ ವಿಭಾಗದ ನಿರ್ದೇಶಕರಾಗಿರುವ ಸಚಿವ ಮುನಿಯಪ್ಪ ಅಳಿಯ ಕೆ.ಸಿ.ಶಶಿಧರ್ ಅನ್ನು ನಿರ್ದೇಶಕ ಹುದ್ದೆಯಿಂದ ಕಾರ್ಯದರ್ಶಿ ೨ ಹುದ್ದೆಗೆ ನಿಯೋಜನೆ ಮಾಡಲು ಮನವಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಅಂದಹಾಗೆ ಕೆ.ಸಿ ಶಶಿಧರ್ ಮನವಿಗೆ ಸ್ವಂತ ಮಾವ ಆಗಿರುವ ಸಚಿವ ಮುನಿಯಪ್ಪ ಅವರಿಂದಲೂ ಶಿಫಾರಸ್ಸು ಮಾಡಲಾಗಿದ್ದು, ಶಶಿಧರ್ ಪರವಾಗಿ ಪತ್ನಿಯಾಗಿರುವ ಶಾಸಕಿ ರೂಪಾಕಲಾ ಅವರಿಂದಲೂ ಲಾಭಿ ನಡೆಸಲಾಗಿದೆ. ಆ ಮೂಲಕ ಇಡೀ ಮುನಿಯಪ್ಪ ಕುಟುಂಬವೇ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಪಾಳಯದ ಲಾಬಿಗೆ ಡಿಪಿಎಆರ್ ಅಧಿಕಾರಿಗಳು ಸಹ ಮಣಿದಿದ್ದು, ನಿರ್ದೇಶಕ ಹುದ್ದೆಯಿಂದ ಕಾರ್ಯದರ್ಶಿ ೨ ಹುದ್ದೆಗೆ ಮೇಲ್ದರ್ಜೆಗೆ ಏರಿಸಲು ಕಡತ ಕೂಡ ಸಿದ್ಧವಾಗಿದೆ ಎಂದು ತಿಳಿದು ಬಂದಿದೆ.
ಡಿಪಿಎಆರ್ ಅಧಿಕಾರಿಗಳು ಸಿದ್ಧಗೊಳಿಸಿರುವ ಕಡತಕ್ಕೆ ವಿಧಾನಸಭಾ ಸಚಿವಾಲಯದಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿರುವ ಸಾಧ್ಯತೆ ಇದ್ದು, ಸಚಿವಾಲಯದ ನಿರ್ಧಾರದಿಂದ ಕಂಗೆಟ್ಟ ವಿಧಾನಸಭೆಯ ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ಹೋರಾಟ ಮಾಡುವ ಮೂಲಕ ಸರಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗಣಕ ವಿಭಾಗದ ಅಧಿಕಾರಿಯನ್ನು ಸಚಿವಾಲಯದಲ್ಲಿ ಪರಿಗಣಿಸಬಾರದು ಎಂದು ಆಗ್ರಹಿಸಿದ್ದಾರೆ. ಸಚಿವಾಲಯದ ವಿಭಾಗದ ವೃಂದಗಳಲ್ಲೇ ಹುದ್ದೆ ಸೃಷ್ಟಿಸಿ ನೀಡಬೇಕು ಅಂತ ಒತ್ತಾಯ ಮಾಡಲಾಗಿದ್ದು, ಸಚಿವನ ಅಳಿಯನಿಗಾಗಿ ಹುದ್ದೆ ಸೃಷ್ಟಿ ಮಾಡುವ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.