newsics.com
ಪುಣೆ: ಈ ಟ್ರೈನಿ ಐಎಎಸ್ ಅಧಿಕಾರಿಯ ಬೇಡಿಕೆಗಳನ್ನು ಕೇಳಿ ಸರ್ಕಾರವೇ ಸುಸ್ತಾಗಿದೆ. ಅವರ ವರ್ತನೆಗೆ ಬೇಸತ್ತ ಸರ್ಕಾರ ಅವರನ್ನು ಎತ್ತಂಗಡಿ ಮಾಡಿದೆ.
ಐಎಎಸ್ ಅಧಿಕಾರಿ ಕೇವಲ ಸರ್ಕಾರಿ ನೌಕರನಷ್ಟೇ ಅಲ್ಲ, ಸಾರ್ವಜನಿಕರಿಗೆ ಜವಾಬ್ದಾರನಾಗಿರುತ್ತಾನೆ ಎಂಬುದನ್ನು ಮರೆತು ಈ ಟ್ರೈನಿ ಅಧಿಕಾರಿ ಹಲವು ಬೇಡಿಕೆಗಳನ್ನಿಟ್ಟು ವಿವಾದಕ್ಕೆ ಸಿಲುಕಿದ್ದಾರೆ.
ಪೂಜಾ ಖೇಡ್ಕರ್ ಎಂಬುವರು 2022ರ ಯುಪಿಎಸ್ಸಿ ಫಲಿತಾಂಶದಲ್ಲಿ 841ನೇ ಆಲ್ ಇಂಡಿಯಾ ರ್ಯಾಂಕ್ ಪಡೆದುಕೊಂಡಿದ್ದಾರೆ.
ಪುಣೆಯಲ್ಲಿ ಟ್ರೈನಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಅಧಿಕಾರ ದುರ್ಬಳಕೆ ಅತಿಯಾಗಿದೆ. ತರಬೇತಿ ಅವಧಿಯಲ್ಲಿಯೇ ವಿಶೇಷ ಸವಲತ್ತುಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಬರೆದಿದ್ದಾರೆ.
ವಿಐಪಿ ನಂಬರ್ ಪ್ಲೇಟ್ ಸಹ ಅಳವಡಿಸಿಕೊಂಡಿದ್ದಾರೆ. ಅದರ ಮೇಲೆ ಮಹಾರಾಷ್ಟ್ರ ಸರ್ಕಾರ ಎಂದು ಬೋರ್ಡ್ ಹಾಕಿಸಿದ್ದಾರೆ. ಕಾರಿನ ಮೇಲೆ ಬೀಕನ್ ಲೈಟ್ ಕೂಡ ಹಾಕಿಸಿಕೊಂಡಿದ್ದಾರೆ.
ಸರ್ಕಾರಿ ಕಾರು, ವಸತಿ, ಸಿಬ್ಬಂದಿ ಹಾಗೂ ಕಾನ್ಸ್ಟೆಬಲ್ ಸೇರಿದಂತೆ ಅಧಿಕೃತ ಚೇಂಬರ್ ಒದಗಿಸಬೇಕೆಂದು ಕೇಳಿದ್ದಾರೆ.
ಪುಣೆಯ ಹೆಚ್ಚುವರಿ ಜಿಲ್ಲಾಧಿಕಾರಿ ಅಜಯ್ ಮೋರೆ ಇಲ್ಲದ ಸಮಯದಲ್ಲಿ ಅವರ ಚೇಂಬರ್ ಒತ್ತುವರಿ ಮಾಡಿಕೊಂಡು ತನ್ನ ಹೆಸರಿನ ಬೋರ್ಡ್ ಹಾಕಿಕೊಂಡಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿಗಳ ಪೂರ್ವ ಅನುಮತಿ ಇಲ್ಲದೆ ಸೋಫಾ, ಕುರ್ಚಿ, ಟೇಬಲ್ ಸೇರಿದಂತೆ ಎಲ್ಲಾ ವಸ್ತುಗಳನ್ನು ತೆಗೆದಿದ್ದಾರೆ.
ಪೂಜಾ ಅವರ ತಂದೆ ನಿವೃತ್ತ ಆಡಳಿತಾಧಿಕಾರಿಯಾಗಿದ್ದು ಅವರೂ ಕೂಡ ಮಗಳ ಬೇಡಿಕೆ ಈಡೇರಿಸುವಂತೆ ಒತ್ತಡ ಹೇರಿದ್ದರು.
ಕೊನೆಗೆ ಆಕೆಯ ಬೇಡಿಕೆಯನ್ನು ಸ್ವೀಕರಿಸಲಾಗಿದೆ ಎಂದು ಕಲೆಕ್ಟರ್ ಸುಹಾಸ್ ದಿವಾಸೆ ಹೇಳಿದ್ದಾರೆ. ಅವರ ತರಬೇತಿ ಪೂರ್ಣಗೊಳ್ಳುವ ಮೊದಲೇ ವರ್ಗಾವಣೆ ಮಾಡಲಾಗಿದೆ.
ವಾಶಿಮ್ನ ಸೂಪರ್ನ್ಯೂಮರರಿ ಅಸಿಸ್ಟೆಂಟ್ ಕಲೆಕ್ಟರ್ ಹುದ್ದೆಗೆ ವರ್ಗಾಯಿಸಲಾಗಿದೆ. ನಿಯಮಗಳ ಪ್ರಕಾರ, ತರಬೇತಿ ಪಡೆಯುವವರಿಗೆ ಈ ಸೌಕರ್ಯಗಳನ್ನು ಒದಗಿಸಲಾಗುವುದಿಲ್ಲ ಮತ್ತು ಮೊದಲು ಗೆಜೆಟೆಡ್ ಅಧಿಕಾರಿಯಾಗಿ ನೇಮಕಗೊಳ್ಳಬೇಕಾಗುತ್ತದೆ.
ಎತ್ತಂಗಡಿಯಾಗಿರುವ ಜಾಗದಲ್ಲಿ ಎಲ್ಲ ಸೌಲಭ್ಯಗಳಿವೆ ಎಂಬುದನ್ನು ಖಾತರಿಪಡಿಸಿದ ನಂತರವೇ ಅಧಿಕಾರ ಸ್ವೀಕರಿಸುವುದಾಗಿ ಹೇಳಿ ಹೊಸ ವಿವಾದ ಸೃಷ್ಟಿಸಿದ್ದಾರೆ.
ಸಹ ಪ್ರಯಾಣಿಕನಿಂದ ಅನುಚಿತ ವರ್ತನೆ: ಗಾಬರಿಗೊಂಡು ರೈಲಿನಿಂದ ಜಿಗಿದ ಶಿಕ್ಷಕಿ, ಆಸ್ಪತ್ರೆಗೆ ದಾಖಲು
ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ, ಪ್ರವಾಹ ಸ್ಥಿತಿ, ನಾಳೆಯಿಂದ ರಾಜ್ಯದ ಹಲವೆಡೆ ಮಳೆ ಚುರುಕು