newsics.com
ಬೆಂಗಳೂರು: ಮೈಸೂರು ಹಾಗೂ ಹಾಸನ ಜಿಲ್ಲೆಯಲ್ಲಿ ಡೆಂಗ್ಯೂಗೆ ತಲಾ ಒಬ್ಬರು ಬಲಿಯಾಗಿದ್ದಾರೆ.
ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಡಾಟಾ ಎಂಟ್ರಿ ಆಪರೇಟರ್ ಲಲಿತಾ ಮೃತಪಟ್ಟವರು. ಮೂರು ದಿನಗಳ ಹಿಂದೆ ಹುಣಸೂರು ಸಮುದಾಯ ಆರೋಗ್ಯಾಧಿಕಾರಿ ಮೃತಪಟ್ಟ ಬೆನ್ನಲ್ಲೇ ಇದೀಗ ಮತ್ತೊಬ್ಬರು ಡೆಂಗ್ಯೂ ಜ್ವರದಿಂದ ಸಾವಿಗೀಡಾಗಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. 3 ದಿನಗಳ ಹಿಂದೆ ಮೈಸೂರು ಜಿಲ್ಲೆಯಲ್ಲಿ ಡೆಂಗ್ಯೂಗೆ ಮೊದಲ ಬಲಿಯಾಗಿತ್ತು. ಹುಣಸೂರು ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮುದಾಯ ಆರೋಗ್ಯಾಧಿಕಾರಿ ನಾಗೇಂದ್ರ (32) ಮೃತ ಮೃತಪಟ್ಟಿದ್ದರು.
ಶಂಕಿತ ಡೆಂಗ್ಯೂಗೆ 26 ವರ್ಷದ ಯುವತಿ ಬಲಿಯಾಗಿರುವ ಘಟನೆ ಹಾಸನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಜಿಲ್ಲೆಯ ಅರಸೀಕೆರೆ ತಾಲೂಕಿನ ಮುದುಡಿ ತಾಂಡ್ಯ ಗ್ರಾಮದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಜೂಲೂನಾಯ್ಕ-ಸುಮಿತ್ರಾದೇವಿ ಎಂಬುವರ ಪುತ್ರಿ ಸುಪ್ರೀತಾ (26) ಮೃತ ಯುವತಿ. ನಾಲ್ಕು ದಿನಗಳ ಹಿಂದೆ ತೀವ್ರ ಜ್ವರದಿಂದ ಬಳಲುತ್ತಿದ್ದ ಯುವತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿರುವಾಗಲೇ ಸುಪ್ರೀತಾಗೆ ಬಹುಅಂಗಾಂಗ ವೈಫಲ್ಯವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಪ್ರೀತಾ ಮೃತಪಟ್ಟಿದ್ದಾಳೆ. ಇದರಿಂದ ಹಾಸನ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂ ಜ್ವರದಿಂದ ಸಾವಿನ ಸಂಖ್ಯೆ ಏಳಕ್ಕೆ ಏರಿದೆ.
ಹಾವೇರಿಯಲ್ಲಿ ಬಾಲಕನಿಗೆ ಇಲಿ ಜ್ವರ!
ಡೆಂಗ್ಯೂ ರುದ್ರ ನರ್ತನದ ನಡುವೆ ಜಿಲ್ಲೆಯಲ್ಲಿ ಇಲಿ ಜ್ವರ (Rat fever) ಪತ್ತೆಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಹಾವೇರಿ ತಾಲೂಕಿನ ಗ್ರಾಮವೊಂದರ 12 ವರ್ಷದ ಬಾಲಕನಿಗೆ ಇಲಿ ಜ್ವರ ದೃಢಪಟ್ಟಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದೊಂದು ವಾರದಿಂದ ಬಾಲಕ ಜ್ವರದಿಂದ ಬಳಲುತ್ತಿದ್ದ. ದಿನ ಬಿಟ್ಟು ದಿನ ಜ್ವರ ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಬಾಲಕನಿಗೆ ಇಲಿ ಜ್ವರ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸದ್ಯ ಬಾಲಕನ ಆರೋಗ್ಯ ಸ್ಥಿರವಾಗಿದೆ.
ಈ ಬಗ್ಗೆ ಜಿಲ್ಲಾಸ್ಪತ್ರೆಯ ಡಾ.ಭಾಗ್ಯ ಪ್ರತಿಕ್ರಿಯಿಸಿ, ಬಾಲಕನಿಗೆ ಇಲಿ ಜ್ವರ ಬಂದಿರುವುದು ನೆನ್ನೆ ಗೊತ್ತಾಗಿದೆ. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಬಾಲಕನ ಆರೋಗ್ಯ ಸ್ಥಿರವಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ. ಡೆಂಗ್ಯೂ ಜ್ವರದ ಲಕ್ಷಣಗಳೇ ಇಲಿ ಜ್ವರ ಕಾಣಿಸಿಕೊಂಡವರಲ್ಲೂ ಕಂಡುಬರುತ್ತವೆ ಎಂದು ತಿಳಿಸಿದರು.
ಏನಿದು ಇಲಿ ಜ್ವರ, ಹೇಗೆ ಹರಡುತ್ತದೆ?
ವೈಜ್ಞಾನಿಕವಾಗಿ ಲೆಪ್ಟೊಸ್ಪಿರೋಸಿಸ್ ಎಂದು ಕರೆಯಲ್ಪಡುವ ಇಲಿ ಜ್ವರ, ಲೆಪ್ಟೊಸ್ಪೈರಾ ಎಂಬ ಬ್ಯಾಕ್ಟೀರಿಯಗಳ ಮೂಲಕ ಪ್ರಾಣಿಗಳಿಂದ ಮಾನವರಿಗೆ ಹರಡುವ ರೋಗವಾಗಿದೆ. ಮುಖ್ಯವಾಗಿ ಇಲಿ, ಹೆಗ್ಗಣಗಳಿಂದ ಈ ರೋಗಾಣುಗಳು ಹರಡುವುದರಿಂದ ಇದಕ್ಕೆ ಇಲಿ ಜ್ವರವೆಂದು ಹೆಸರು. ಈ ರೋಗ ಕೇವಲ ಮನುಷ್ಯರನ್ನಷ್ಟೇ ಅಲ್ಲ, ದನ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಬೆಕ್ಕು, ವನ್ಯಮೃಗಗಳು ಹೀಗೆ ಬಹುತೇಕ ಪ್ರಾಣಿಗಳನ್ನು ಬಾಧಿಸುತ್ತದೆ.
ಹೆಚ್ಚಾಗಿ ಇಲಿ, ಹೆಗ್ಗಣಗಳ ಮೂಲಕ ಈ ರೋಗ ಹರಡುತ್ತದೆ. ರೋಗಪೀಡಿತ ಇಲಿಗಳು ಹಾಗೂ ಪ್ರಾಣಿಗಳ ಮೂತ್ರದ ಮೂಲಕ ಈ ಕಾಯಿಲೆ ಹರಡುತ್ತದೆ.
ಆದರೆ ಮನುಷ್ಯನಿಂದ ಮನುಷ್ಯನಿಗೆ ಇದು ಹರಡುವುದಿಲ್ಲ. ಮಣ್ಣಿನಲ್ಲಿ ಈ ರೋಗಾಣುಗಳು ಸುಮಾರು 6 ಗಂಟೆವರೆಗೆ ಜೀವಂತವಿದ್ದರೆ, ನೀರಿನಲ್ಲಿ ಆರು ತಿಂಗಳವರೆಗೆ ಬದುಕಬಲ್ಲವು. ಹಾಗಾಗಿ ಮಳೆಗಾಲದಲ್ಲಿ ಈ ರೋಗದ ಹಾವಳಿ ಜಾಸ್ತಿ ಇರುತ್ತದೆ.
ಈ ಸೋಂಕು ತಗುಲಿದರೆ ಜ್ವರ, ತಲೆನೋವು, ಸ್ನಾಯು ನೋವು, ಆಯಾಸ ಮತ್ತು ವಾಂತಿಯಂತಹ ರೋಗಲಕ್ಷಣಗಳು ಇರುತ್ತವೆ. ಕೆಲವು ಪ್ರಕರಣಗಳಲ್ಲಿ ಇದು ಮೂತ್ರಪಿಂಡ ವೈಫಲ್ಯ ಅಥವಾ ಸಾವಿಗೆ ಕಾರಣವಾಗಬಹುದು. ಹೀಗಾಗಿ ಸಕಾಲದಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದು ಅಗತ್ಯವಾಗಿದೆ.
ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ: ಭಕ್ತ ಸಾವು, ಹಲವರಿಗೆ ಗಾಯ
ಆಗಸ್ಟ್ 30ಕ್ಕೆ ‘ರಾನಿ’ ರಿಲೀಸ್, ವೈರಲ್ ಆಗ್ತಿದೆ ‘ಹವಾಮಾನವೆ…’ ಹಾಡು, ವಿಡಿಯೋ ನೋಡಿ