newsics.com
ನವದೆಹಲಿ: ದೇಶದಲ್ಲಿ ಇಂದಿನಿಂದ ಮೂರು ಕ್ರಿಮಿನಲ್ ಕಾನೂನುಗಳು ಜಾರಿಗೊಳ್ಳುತ್ತಿವೆ. ಬ್ರಿಟಿಷರ ಕಾಲದಿಂದ ಜಾರಿಯಲ್ಲಿದ್ದ ಐಪಿಸಿ, ಸಿಆರ್ ಪಿಸಿ ಹಾಗೂ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ಗೆ ಬದಲಿಗೆ ಹೊಸ ಕಾನೂನು ಜಾರಿಯಾಗಿವೆ.
ಭಾರತೀಯ ದಂಡ ಸಂಹಿತೆಯ ಬದಲು ಭಾರತೀಯ ನ್ಯಾಯ ಸಂಹಿತೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದು ಜಾರಿಯಾದ ಬೆನ್ನಲ್ಲೇ ಭಾರತೀಯ ನ್ಯಾಯ ಸಂಹಿತೆ ಅಡಿ ಮೊದಲ ಪ್ರಕರಣ ದಾಖಲಾಗಿದೆ.
ದೆಹಲಿಯ ಕಮಲಾ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ನ ಮೊದಲ ಎಫ್ಐಆರ್ ದಾಖಲಿಸಲಾಗಿದೆ. ನಿಯಮ ಬಾಹಿರವಾಗಿ ದೆಹಲಿ ರೈಲ್ವೇ ಮೇಲ್ಸೇತುವೆಯಲ್ಲಿ ವ್ಯಾಪಾರ ನಡೆಸಿದ್ದಕ್ಕಾಗಿ ಬೀದಿಬದಿ ವ್ಯಾಪಾರಿಯೊಬ್ಬನ ಮೇಲೆ ಬಿಎನ್ಎಸ್ ಸೆಕ್ಷನ್ 285ರ ಅಡಿ ಪ್ರಕರಣ ದಾಖಲಿಸಲಾಗಿದೆ.
ಆತನ ತಾತ್ಕಾಲಿಕ ಅಂಗಡಿಯು ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿ ಉಂಟುಮಾಡುತ್ತಿತ್ತು. ಅದನ್ನು ತೆರವುಗೊಳಿಸುವಂತೆ ಪದೇ ಪದೇ ಆತನಿಗೆ ಸೂಚನೆ ನೀಡಲಾಗಿತ್ತು. ಆದರೆ ಆತ ಅದಕ್ಕೆ ಕಿವಿಗೊಡದ ಕಾರಣ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಪಿಸಿ ಜಾಗದಲ್ಲಿ ಭಾರತೀಯ ನ್ಯಾಯ ಸಂಹಿತೆ , ಸಿಆರ್ಪಿಸಿ ಜಾಗದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಇಂಡಿಯನ್ ಎವಿಡೆನ್ಸ್ ಆಕ್ಟ್ ಜಾಗದಲ್ಲಿ ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಗೊಂಡಿದೆ.
ಭಾರತೀಯ ನ್ಯಾಯ ಸಂಹಿತೆಯು 358 ಸೆಕ್ಷನ್ ಒಳಗೊಂಡಿದೆ. 20 ಹೊಸ ಅಪರಾಧಗಳು ಸೇರಿಸಲ್ಪಟ್ಟಿವೆ, 33 ಅಪರಾಧಗಳ ಶಿಕ್ಷೆ ಅವಧಿ ಹೆಚ್ಚಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 531 ಸೆಕ್ಷನ್ ಒಳಗೊಂಡಿದೆ. 177 ಕಲಂಗಳನ್ನು ಬದಲಿಸಲಾಗಿದೆ. ಭಾರತೀಯ ಸಾಕ್ಷ್ಯ ಅಧಿನಿಯಮ 170 ಸೆಕ್ಷನ್ ಒಳಗೊಂಡಿದೆ.
ದೇಶದಲ್ಲಿ ಇಂದಿನಿಂದ ಹೊಸ ಅಪರಾಧ ಕಾನೂನು ಜಾರಿ: ಏನೇನು ಬದಲಾವಣೆ? ಇಲ್ಲಿದೆ ಸಮಗ್ರ ಚಿತ್ರಣ