newsics.com/ನ್ಯೂಸಿಕ್ಸ್
ನಟ ದಿಗಂತ್ ಚಿತ್ರರಂಗಕ್ಕೆ 20 ವರ್ಷ ಆಗಿದೆ. ಈ 20 ವರ್ಷದಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಸೋಲು-ಗೆಲುವು ಎರಡನ್ನೂ ನೋಡಿದ್ದಾರೆ. ಆದರೆ, ಯಾವತ್ತೂ ಸಿನಿಮಾಗಳಿಲ್ಲದೇ ಖಾಲಿ ಕುಳಿತವರಲ್ಲ. ಈಗ ಅಂತಹ ಒಂದು ಅನುಭವ ಕೂಡಾ ದಿಗಂತ್ ಅವರಿಗೆ ಆಗಿದೆಯಂತೆ. ಅದಕ್ಕೆ ಕಾರಣ ಕನ್ನಡ ಚಿತ್ರರಂಗದಲ್ಲಿನ ಗೆಲುವಿನ ಕೊರತೆ.
ಇತ್ತೀಚೆಗಷ್ಟೇ ದಿಗಂತ್ ಅವರ ರುದ್ರ ನಾಗ ಸಿನಿಮಾ ಸೆಟ್ಟೇರಿದೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ದಿಗಂತ್, ಇವತ್ತಿನ ಈ ಪರಿಸ್ಥಿತಿಗೆ ಕಾರಣ ಕನ್ನಡದಲ್ಲಿ ಒಳ್ಳೆಯ ಸಿನಿಮಾ ಬಾರದಿರುವುದು. ಸಿನಿಮಾ ಗೆದ್ದಾಗ ಚಿತ್ರರಂಗ ಚೆನ್ನಾಗಿ ಇರುತ್ತದೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಸಿನಿಮಾ ಮಾಡಲು ಹೊಸ ನಿರ್ಮಾಪಕರು ಭಯಪಡುತ್ತಾರಂತೆ ಎನ್ನುತ್ತಾರೆ.
ಈ ಅನುಭವದ ಕುರಿತು ಮಾತನಾಡುವ ದಿಗಂತ್, ಆರು ತಿಂಗಳ ಹಿಂದೆ ಎರಡು ಸಿನಿಮಾ ಒಪ್ಪಿಕೊಂಡಿದ್ದೆ. ಆದರೆ, ನಿರ್ಮಾಪಕರು ಬಂದು ಸದ್ಯ ಪರಿಸ್ಥಿತಿ ಸರಿ ಇಲ್ಲ ಈಗ ಸಿನಿಮಾ ಮಾಡೋದು ಬೇಡ ಎಂದರು. ಆಗಲೇ ನನಗೆ ಗೊತ್ತಾಗಿದ್ದು, ಪರಿಸ್ಥಿತಿ ಸರಿಯಿಲ್ಲ ಎಂದು. ಏನು ಮಾಡೋದು, ಬೇರೆ ಕೆರಿಯರ್ ಹುಡುಕಬೇಕಾ ಎಂಬ ಯೋಚನೆ ಬಂತು.
ತೀರ್ಥಹಳ್ಳಿಗೆ ಹೋಗಿ ತೋಟ ನೋಡಿಕೊಳ್ಳೋದಾ ಅಥವಾ ಯಾವುದಾದರೂ ಕೋಸ್ ಮಾಡೋದಾ ಎಂಬ ಯೋಚನೆ ಬಂದಿದ್ದು ಸುಳ್ಳಲ್ಲ. ಏಕೆಂದರೆ ನಾನು ವರ್ಷಪೂರ್ತಿ ಬಿಝಿ ಇದ್ದವನು, ಸೋಲು-ಗೆಲುವು ಏನೇ ಇರಬಹುದು, ಕೈ ತುಂಬಾ ಕೆಲಸ ಇತ್ತು. ಆದರೆ, ಮೊದಲ ಬಾರಿಗೆ ಸಿನಿಮಾಕ್ಕಾಗಿ ಎದುರು ನೋಡುವಂತಾಗಿದೆ ಎನ್ನುತ್ತಾರೆ.
ನಂದಿ ಹಿಲ್ಸ್ ಬಳಿ ನನ್ನದೊಂದು ಗೇಟೆಡ್ ಕಮ್ಯುನಿಟಿಯಲ್ಲಿ ಮನೆ ಇದೆ. ಈಗ ಆ ಮನೆಯನ್ನು ಬಾಡಿಗೆಗೆ ಬಿಟ್ಟಿದ್ದೇನೆ. ಆ ಬಾಡಿಗೆಯನ್ನೂ ಈಗ ನಂಬಿಕೊಳ್ಳುವಂತಾಗಿದೆ ಎನ್ನುವ ಮೂಲಕ ಸದ್ಯ ಕನ್ನಡ ಚಿತ್ರರಂಗದ ಪರಿಸ್ಥಿತಿ ಬಗ್ಗೆ ಹೇಳುತ್ತಾರೆ ದಿಗಂತ್.
ದಿಗಂತ್ ಹೇಳುವಂತೆ ಇಂತಹ ಪರಿಸ್ಥಿತಿ ಇರೋದು ಕನ್ನಡದಲ್ಲಿ ಮಾತ್ರ. ಅದೇ ತೆಲುಗು ಸೇರಿದಂತೆ ಬೇರೆ ಭಾಷೆಗಳಲ್ಲಿ ಸಿನಿಮಾ ಕೆಲಸಗಳು ಜೋರಾಗಿ ನಡೆಯುತ್ತಿವೆ. ಸಿನಿಮಾ ಆರಂಭವಾಗುತ್ತಿದ್ದಂತೆ ಬಿಜಿನೆಸ್ ಕೂಡಾ ಆಗುತ್ತಿದೆ. ಆದರೆ, ಕನ್ನಡದಲ್ಲಿ ಅಂತಹ ಸಹಕಾರ ಸಿಗುತ್ತಿಲ್ಲ ಎನ್ನುವ ದಿಗಂತ್, ಇವತ್ತು ಚಿತ್ರಮಂದಿರಗಳು ದುಬಾರಿಯಾಗಿರೋದು ಕೂಡಾ ಜನ ಚಿತ್ರಮಂದಿರಕ್ಕೆ ಬಾರದಿರಲು ಒಂದು ಕಾರಣ ಎನ್ನುತ್ತಾರೆ.