newsics.com/ನ್ಯೂಸಿಕ್ಸ್
ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ವಜಾಗೊಂಡಿದ್ದ ಸಂಸದ ರಾಘವ್ ಚಡ್ಡಾ ಅವರು ಇನ್ನಿಬ್ಬರು ಸಂಸದರೊಂದಿಗೆ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿ ಭಾರೀ ಹೊಡೆತ ನೀಡಿದ್ದಾರೆ.
ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಶುಕ್ರವಾರ ಎಎಪಿ ತೊರೆದು ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ.
ಇದು ಅರವಿಂದ ಕೇಜ್ರಿವಾಲ್ ಅವರಿಗೆ ಭಾರೀ ಹೊಡೆತ ನೀಡಿದೆ.
ಸಂಸದರಾದ ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಘವ್ ಚಡ್ಡಾ, “ರಾಜ್ಯಸಭೆಯಲ್ಲಿ ಎಎಪಿಗೆ ಸೇರಿದ ಮೂರನೇ ಎರಡರಷ್ಟು ಸದಸ್ಯರಾದ ನಾವು ಭಾರತದ ಸಂವಿಧಾನದ ನಿಬಂಧನೆಗಳನ್ನು ಚಲಾಯಿಸಲು ಮತ್ತು ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.
ಪಂಜಾಬ್ನಿಂದ ರಾಜ್ಯಸಭಾ ಸಂಸದರಾಗಿರುವ ರಾಘವ್ ಚಡ್ಡಾ ಆಪ್ ನಿಂದ ಅಂತರ ಕಾಯ್ದುಕೊಂಡಿದ್ದರು. ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಚಡ್ಡಾ, ದೆಹಲಿ ಜಲ ಮಂಡಳಿಯ ಮಾಜಿ ಉಪಾಧ್ಯಕ್ಷರಾಗಿದ್ದರು. ಪಾಠಕ್ ಮತ್ತು ಮಿತ್ತಲ್ ಅವರು ಚಡ್ಡಾ ಅವರೊಂದಿಗೆ ಪಕ್ಷ ತೊರೆದಿರುವುದು ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ಹೊಡೆತವಾಗಿದೆ.
”ನಾನು ನನ್ನ ರಕ್ತ ಮತ್ತು ಬೆವರಿನಿಂದ ಪೋಷಿಸಿ, ನನ್ನ ಯೌವನದ 15 ವರ್ಷಗಳನ್ನು ನೀಡಿದ ಆಮ್ ಆದ್ಮಿ ಪಕ್ಷ ತನ್ನ ತತ್ವಗಳು, ಮೌಲ್ಯಗಳು ಮತ್ತು ಮೂಲ ನೈತಿಕತೆಗಳಿಂದ ವಿಮುಖವಾಗಿದೆ. ಈಗ ಈ ಪಕ್ಷವು ರಾಷ್ಟ್ರದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿಲ್ಲ, ಬದಲಾಗಿ ಅದರ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡುತ್ತಿದೆ.ಕಳೆದ ಕೆಲವು ವರ್ಷಗಳಿಂದ, ತಪ್ಪು ಪಕ್ಷದಲ್ಲಿ ನಾನು ಸರಿಯಾದ ವ್ಯಕ್ತಿ ಎಂದು ನನಗೆ ಅನಿಸುತ್ತಿದೆ. ಆದ್ದರಿಂದ, ಇಂದು, ನಾನು ಆಮ್ ಆದ್ಮಿ ಪಕ್ಷದಿಂದ ದೂರ ಸರಿಯುತ್ತಿದ್ದೇನೆ ಮತ್ತು ಸಾರ್ವಜನಿಕರಿಗೆ ಹತ್ತಿರವಾಗುತ್ತಿದ್ದೇನೆ ಎಂದು ಘೋಷಿಸುತ್ತೇವೆ” ಎಂದು ಚಡ್ಡಾ ಹೇಳಿದ್ದಾರೆ.
ಸ್ವಾತಿ ಮಲಿವಾಲ್, ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ ಮತ್ತು ವಿಕ್ರಮ್ಜಿತ್ ಸಿಂಗ್ ಸಾಹ್ನಿ ಕೂಡ ಎಎಪಿ ತೊರೆದು ಬಿಜೆಪಿಗೆ ಸೇರುತ್ತಾರೆ ಎಂದು ರಾಘವ್ ಚಡ್ಡಾ ಹೇಳಿದ್ದಾರೆ.
“ರಾಜ್ಯಸಭೆಯಲ್ಲಿ 10 ಎಎಪಿ ಸಂಸದರಿದ್ದಾರೆ, ಅವರಲ್ಲಿ 2/3 ಕ್ಕಿಂತ ಹೆಚ್ಚು ಜನರು ಇದರಲ್ಲಿ ನಮ್ಮೊಂದಿಗಿದ್ದಾರೆ. ಅವರು ಸಹಿ ಮಾಡಿದ್ದಾರೆ ಮತ್ತು ಇಂದು ಬೆಳಗ್ಗೆ ನಾವು ಸಹಿ ಮಾಡಿದ ಪತ್ರ ಮತ್ತು ದಾಖಲೆಗಳನ್ನು ರಾಜ್ಯಸಭೆಯ ಅಧ್ಯಕ್ಷರಿಗೆ ಸಲ್ಲಿಸಿದ್ದೇವೆ.ಅವರಲ್ಲಿ ಮೂವರು ನಿಮ್ಮ ಮುಂದೆ ಇದ್ದೇವೆ. ನಮ್ಮ ಜತೆಗೆ, ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ, ವಿಕ್ರಮ್ ಸಾಹ್ನಿ ಮತ್ತು ಸ್ವಾತಿ ಮಲಿವಾಲ್ ಇದ್ದಾರೆ” ಎಂದು ಸಂಸದ ರಾಘವ್ ಚಡ್ಡಾ ಹೇಳಿದ್ದಾರೆ.
ರಾಜೀನಾಮೆ ಬೆಳವಣಿಗೆ ಬೆನ್ನಲ್ಲೇ ಆಮ್ ಆದ್ಮಿ ಪಕ್ಷವು ಪಕ್ಷಾಂತರ ಕಾಯ್ದೆ ಅಡಿ ಏಳು ಮಂದಿ ಸಂಸದರ ವಿರುದ್ಧ ರಾಜ್ಯಸಭಾ ಅಧ್ಯಕ್ಷರಿಗೆ ದೂರು ನೀಡಿದೆ.
ಅನರ್ಹ ಸಾಧ್ಯತೆ ಕಡಿಮೆ
ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಒಂದು ಪಕ್ಷದ ಒಟ್ಟು ಸದಸ್ಯರ ಪೈಕಿ 3 ನೇ 2 ಭಾಗದಷ್ಟು ಸದಸ್ಯರು ಬೇರೆ ಪಕ್ಷಕ್ಕೆ ವಿಲೀನವಾದರೆ ಅವರನ್ನು ಪಕ್ಷಾಂತರ ಕಾಯ್ದೆಯ ಅಡಿ ಅನರ್ಹಗೊಳಿಸುವಂತಿಲ್ಲ.
ದ್ರೋಹಿಗಳನ್ನು ಎಂದಿಗೂ ಮರೆಯುವುದಿಲ್ಲ
ಎಎಪಿ ಸಂಸದ ಸಂಜಯ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ “ಪಂಜಾಬ್ ಸರಕಾರದ ಮೇಲೆ ಆಪರೇಷನ್ ಕಮಲ ನಡೆಸಲಾಗುತ್ತಿದೆ.ಈ ಆಪರೇಷನ್ ಕಮಲವನ್ನು ಕಾರ್ಯಗತಗೊಳಿಸಲು ಇ ಡಿ, ಸಿಬಿಐ ಅನ್ನು ಬಳಸಲಾಗುತ್ತಿದೆ.ಪಂಜಾಬ್ ಜನರು ಈ ‘ದ್ರೋಹಿಗಳನ್ನು’ ಎಂದಿಗೂ ಮರೆಯುವುದಿಲ್ಲ” ಎಂದು ಕಿಡಿ ಕಾರಿದ್ದಾರೆ.
ಹೆಣ್ಣು ಮಕ್ಕಳಲ್ಲಿ ಎಂಟು ವರ್ಷಕ್ಕೇ ಋತುಚಕ್ರ : ಆತಂಕಕಾರಿ ವರದಿ ಬಹಿರಂಗ