newsics.com
ಬೆಂಗಳೂರು: ರಾಜ್ಯದಲ್ಲೀಗ ಬಿಸಿಲಿನ ಅಬ್ಬರ ಜೋರಾಗಿದೆ. ತಾಪಮಾನ ಗಗನಕ್ಕೇರುತ್ತಿದ್ದು, ಬಿಸಿ ಗಾಳಿಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ಮುಂಗಾರು ಮಳೆ ಕೊರತೆಯ ಬಗ್ಗೆ ಈಗಾಗಲೇ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಇತ್ತ ರಾಜ್ಯದಲ್ಲಿ ಜೂನ್ವರೆಗೆ ಬಿಸಿಗಾಳಿಯ ಅಬ್ಬರ ಹೆಚ್ಚಿರಲಿದೆ ಎಂದೂ ತಿಳಿಸಿದೆ. ಸುಡು ಬಿಸಿಲಿನ ಮಧ್ಯೆ ಜಲಾಶಯಗಳಲ್ಲಿನ ನೀರಿನ ಪ್ರಮಾಣ ಕುಸಿಯುತ್ತಿರುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದರೊಂದಿಗೆ ಕೆರೆಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದು ರಾಜ್ಯದ ಜನರು, ರೈತರಿಗೆ ಬೇಸಿಗೆ ಬಿಸಿ ಮುಟ್ಟಿಸುತ್ತಿದೆ.
ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕುಸಿತ ಕಂಡಿರುವುದು ಮುಂದೆ ಅನಾವೃಷ್ಟಿ ಪರಿಸ್ಥಿತಿ ಎದುರಾಗುತ್ತಾ? ಎಂಬ ಬಲವಾದ ಆತಂಕ ಸರ್ಕಾರವನ್ನು ಕಾಡುತ್ತಿದೆ. ಪ್ರಸ್ತುತ ಪ್ರಮುಖ ಜಲಾಶಯಗಳಲ್ಲಿ ಶೇ.36ಎಷ್ಟು ಮಾತ್ರ ನೀರು ಸಂಗ್ರಹವಿದೆ. ಸದ್ಯ ಪ್ರಮುಖ ಜಲಾಶಯಗಳಲ್ಲಿ 321 ಟಿಎಂಸಿ ನೀರಿದೆ. ಕೇಳದ ವರ್ಷ ಇದೇ ಅವಧಿಯಲ್ಲಿ ಸುಮಾರು 330 ಟಿಎಂಸಿ ನೀರಿತ್ತು ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಜಲಸಂಪನ್ಮೂಲ ಇಲಾಖೆಯ ಅಂಕಿಅಂಶದ ಪ್ರಕಾರ ರಾಜ್ಯದ ಪ್ರಮುಖ ಜಲವಿದ್ಯುತ್ ಜಲಾಶಯಗಳಾದ ಲಿಂಗನಮಕ್ಕಿ, ಸೂಪ ಮತ್ತು ವರಾಹಿಯಲ್ಲಿ ಪ್ರಸ್ತುತ ಸುಮಾರು 107 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಏಪ್ರಿಲ್ ಎರಡನೇ ವಾರದ ಅವಧಿಗೆ ಸುಮಾರು 124 ಟಿಎಂಸಿ ನೀರು ಲಭ್ಯವಿತ್ತು. ಈ ಮೂರು ಜಲಾಶಯಗಳ ಗರಿಷ್ಠ ಸಾಮರ್ಥ್ಯ 327.63 ಟಿಎಂಸಿ ಇದೆ. ಈ ಪೈಕಿ ಪ್ರಸ್ತುತ ಶೇಖರಣೆ ಇರುವುದು ಕೇವಲ ಶೇ.33ರಷ್ಟು ಮಾತ್ರ. ಲಿಂಗನಮಕ್ಕಿ ಜಲಾಶಯಕ್ಕೆ ಸುಮಾರು 50 ಕ್ಯುಸೆಕ್ ಒಳಹರಿವಿದೆ. ಉಳಿದ ಜಲಾಶಯಗಳಿಗೆ ಯಾವುದೇ ಒಳಹರಿವು ಇಲ್ಲ
ಕಾವೇರಿ ಕಣಿವೆಯಲ್ಲಿನ ಪ್ರಮುಖ ಜಲಾಶಯಗಳಾದ ಹಾರಂಗಿ, ಹೇಮಾವತಿ, ಕೆ.ಆರ್.ಎಸ್, ಕಬಿನಿಯಲ್ಲಿ ಪ್ರಸ್ತುತ ಒಟ್ಟು ಸುಮಾರು 57 ಟಿಎಂಸಿ ನೀರಿ ಶೇಖರಣೆ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಜಲಾಶಯಗಳಲ್ಲಿ ಒಟ್ಟು ಸುಮಾರು 58 ಟಿಎಂಸಿ ನೀರು ಸಂಗ್ರಹ ಇತ್ತು. ಈ ನಾಲ್ಕು ಜಲಾಶಯಗಳ ಗರಿಷ್ಠ ಸಾಮರ್ಥ್ಯ 114.57 ಟಿಎಂಸಿ ಇದೆ. ಇದರ ಪೈಕಿ ಸುಮಾರು ಶೇ.46 ಮಾತ್ರ ನೀರಿನ ಸಂಗ್ರಹವಿದೆ ಎಂದು ಇಲಾಖೆ ಅಂಕಿಅಂಶ ನೀಡಿದೆ. ಒಟ್ಟು ಒಳಹರಿವಿನ ಪ್ರಮಾಣ ಸುಮಾರು 130 ಟಿಎಂಸಿ ಆಸುಪಾಸು ಇದೆ. ಆದರೆ, ಹೊರ ಹರಿವು ಪ್ರಮಾಣ ಸುಮಾರು 5200 ಟಿಎಂಸಿ ಆಸುಪಾಸು ಇದೆ.
ಕೃಷ್ಣಾ ಕಣಿವೆಯಲ್ಲಿನ ಪ್ರಮುಖ ಜಲಾಶಯಗಳಾದ ಭದ್ರಾ, ತುಂಗಭದ್ರಾ, ಘಟಪ್ರಭಾ, ಆಲಮಟ್ಟಿ, ನಾರಾಯಣಪುರದಲ್ಲಿ ಪ್ರಸ್ತುತ ಒಟ್ಟು 133 ಟಿಎಂಸಿ ನೀರಿನ ಲಭ್ಯತೆ ಇದೆ. ಕಳೆದ ವರ್ಷ ಇದೇ ಅವಧಿಗೆ ಸುಮಾರು 120.79 ಟಿಎಂಸಿ ನೀರಿನ ಶೇಖರಣೆ ಇತ್ತು. ಕೃಷ್ಣಾ ಕಣಿವೆಯಲ್ಲಿನ ಈ ಜಲಾಶಯಗಳ ಒಟ್ಟು ಗರಿಷ್ಠ ಸಾಮರ್ಥ್ಯ 422.45 ಟಿಎಂಸಿಯಾಗಿದೆ. ಈ ಪೈಕಿ ಪ್ರಸ್ತುತ ಶೇ.32 ಮಾತ್ರ ನೀರಿನ ಸಂಗ್ರಹ ಇದೆ ಎಂದು ಮಾಹಿತಿ ನೀಡಿದೆ. ಭದ್ರಾ ಜಲಾಶಯಕ್ಕೆ 146 ಕ್ಯುಸೆಕ್ಸ್ ಒಳ ಹರಿವಿದೆ. ಉಳಿದಂತೆ ಇತರೆ ನಾಲ್ಕು ಜಲಾಶಯಗಳಿಗೆ ಯಾವುದೇ ನೀರಿನ ಒಳ ಹರಿವು ಇಲ್ಲವಾಗಿದೆ. ಈ ಐದೂ ಜಲಾಶಯಗಳಿಂದ ನೀರಿನ ಹೊರಹರಿವು ಸುಮಾರು 12,144 ಕ್ಯುಸೆಕ್ ಇದೆ.
ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುವ 3,788 ಕೆರೆಕಟ್ಟೆಗಳಲ್ಲಿ ನೀರಿನ ಪ್ರಮಾಣವೂ ಕುಸಿತ ಕಾಣುತ್ತಿದೆ. ಮಾರ್ಚ್ ಅಂತ್ಯಕ್ಕೆ 1,503 ಕೆರೆಗಳಲ್ಲಿ ಶೇ.50ಕ್ಕಿಂತ ಅಧಿಕ ನೀರಿನ ಸಂಗ್ರಹಣೆ ಇದೆ ಎಂದು ಸಣ್ಣ ನೀರಾವರಿ ಇಲಾಖೆ ಮಾಹಿತಿ ನೀಡಿದೆ. ಶೇ.50 ಮೇಲ್ಪಟ್ಟು ನೀರು ಸಂಗ್ರಹ ಇರುವ ಕೆರೆಗಳ ಸಂಖ್ಯೆಯಲ್ಲೂ ಪ್ರತಿ ತಿಂಗಳು ಗಣನೀಯ ಇಳಿಕೆ ಕಾಣುತ್ತಿರುವುದು ಆತಂಕ ಹುಟ್ಟು ಹಾಕಿದೆ. ಡಿಸೆಂಬರ್ 2025ರ ಅಂತ್ಯಕ್ಕೆ 2,393 ಕೆರೆಗಳಲ್ಲಿ ಶೇ 50ಕ್ಕೂ ಅಧಿಕ ನೀರಿನ ಮಟ್ಟ ಇತ್ತು. ಅದೇ ಜನವರಿ 2026 ಅಂತ್ಯಕ್ಕೆ ಶೇ.50ಕ್ಕೂ ಅಧಿಕ ನೀರಿನ ಪ್ರಮಾಣ ಹೊಂದಿರುವ ಕೆರೆಗಳ ಸಂಖ್ಯೆ 2,100ಕ್ಕೆ ಇಳಿಕೆಯಾಗಿದೆ. ಅದೇ ಫೆಬ್ರವರಿ ಅಂತ್ಯಕ್ಕೆ ಆ ಪ್ರಮಾಣ 1,923 ಕೆರೆಗಳಿಗೆ ಕುಸಿತ ಆಯಿತು. ಮಾರ್ಚ್ ಅಂತ್ಯಕ್ಕೆ ಶೇ.50 ನೀರಿನ ಮಟ್ಟ ಹೊಂದಿರುವ ಕೆರೆಗಳ ಸಂಖ್ಯೆ ಇನ್ನಷ್ಟು ಕುಸಿದು 1,503ಕ್ಕೆ ತಲುಪಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಂಕಿಅಂಶ ನೀಡಿದೆ.
ಶೇ.30-50ರವರೆಗೆ ನೀರಿನ ಮಟ್ಟ ಹೊಂದಿರುವ ಕೆರೆಗಳ ಸಂಖ್ಯೆ 2,119 ಇದೆ ಎಂದು ಇಲಾಖೆ ತಿಳಿಸಿದೆ. ನೀರಿನ ಪ್ರಮಾಣ ಶೇ.50ಗಿಂತ ಕೆಳಕ್ಕೆ ಕುಸಿತ ಕಂಡಿರುವ ಕೆರೆಗಳ ಸಂಖ್ಯೆಯಲ್ಲಿ ಪ್ರತಿ ತಿಂಗಳು ವೃದ್ಧಿಯಾಗುತ್ತಿದೆ. ಡಿಸೆಂಬರ್ 2025 ಅಂತ್ಯಕ್ಕೆ 1,265 ಕೆರೆಗಳಲ್ಲಿ ಶೇ.30-50ರಷ್ಟು ನೀರಿನ ಪ್ರಮಾಣ ಇದ್ದವು. ಜನವರಿ 2026 ಅಂತ್ಯಕ್ಕೆ ಅದರ ಸಂಖ್ಯೆ 1,593ಗೆ ಏರಿಕೆಯಾಯಿತು.
ಫೆಬ್ರವರಿ ಅಂತ್ಯಕ್ಕೆ ಅದರ ಸಂಖ್ಯೆ 1,746ಕ್ಕೆ ಹೆಚ್ಚಳವಾಯಿತು. ಮಾರ್ಚ್ ಅಂತ್ಯಕ್ಕೆ ಶೇ.50ಗಿಂತಲೂ ಕಡಿಮೆ ನೀರಿನ ಮಟ್ಟದ ಕೆರೆಗಳ ಸಂಖ್ಯೆ 2,119ಕ್ಕೆ ಏರಿಕೆಯಾಯಿತು. ಶೇ.30ಗಿಂತಲೂ ಕಡಿಮೆ ನೀರಿನ ಪ್ರಮಾಣ ಇರುವ ಕೆರೆಗಳ ಸಂಖ್ಯೆ ಮಾರ್ಚ್ ಅಂತ್ಯಕ್ಕೆ 166 ಇದೆ. ಜನವರಿ ಅಂತ್ಯಕ್ಕೆ ಅದರ ಸಂಖ್ಯೆ 95 ಇತ್ತು. ಫೆಬ್ರವರಿ ಅಂತ್ಯಕ್ಕೆ ಅದರ ಸಂಖ್ಯೆ 119 ಇತ್ತು. ತಿಂಗಳುವಾರು ಶೇ.30ಗಿಂತ ಕಡಿಮೆ ನೀರಿನ ಮಟ್ಟ ಹೊಂದಿರುವ ಕೆರೆಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೇ ಹೋದರೆ ಈ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೇಸಿಗೆ ಸುಡು ಬಿಸಿಲು, ಮಳೆಯ ಕೊರತೆಯಿಂದ ಕುಸಿಯುತ್ತಾ ಇರುವ ಜಲಾಶಯಗಳು ಹಾಗೂ ಕೆರೆಕಟ್ಟೆಗಳಲ್ಲಿನ ನೀರಿನ ಮಟ್ಟದಿಂದ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಏಪ್ರಿಲ್ ಎರಡನೇ ವಾರದ ವರೆಗೆ ರಾಜ್ಯದ ಸರ್ಕಾರ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಬಹುದಾದ ತಾಲೂಕುಗಳ ಸಂಖ್ಯೆ 213 ಇದೆ ಎಂದು ಗುರುತಿಸಿದೆ. ಪ್ರಸ್ತುತ ನೀರಿನ ಸಮಸ್ಯೆ ಎದುರಿಸುತ್ತಿರುವ ತಾಲೂಕುಗಳ ಸಂಖ್ಯೆ 114 ಇದೆ ಎಂದು ತಿಳಿಸಿದೆ. ಕುಡಿಯುವ ನೀರಿನ ಸಮಸ್ಯೆ ಎದುರಿಸಬಹುದಾದ ಗ್ರಾಮ ಪಂಚಾಯತಿಗಳ ಸಂಖ್ಯೆ 2,410 ಇದೆ. ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮ ಪಂಚಾಯತಿಗಳ ಸಂಖ್ಯೆ 598 ಇದೆ.
ಅದೇ ರೀತಿ, 95 ನಗರ ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರಿನ ಸಮಸ್ಯೆಗಳನ್ನು ಎದುರಿಸಬಹುದಾಗಿದೆ ಎಂದು ಸರ್ಕಾರ ಗುರುತಿಸಿದೆ. ಪ್ರಸ್ತುತ 27 ನಗರ ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರಿನ ಸಮಸ್ಯೆಗಳನ್ನು ಎದುರಿಸುತ್ತಿದೆ.
ದರ್ಶನ್ ಹೆಸರನ್ನು ದುರ್ಬಳಕೆ ಮಾಡಿಕೊಂಡ ವಂಚಕ ಮಲ್ಲು ನಂಬಿ ಮೋಸ ಹೋಗಬೇಡಿ: ದಿನಕರ್ ತೂಗುದೀಪ