newsics.com
ಬೆಂಗಳೂರು: ತುಂಗಭದ್ರಾ ಅಣೆಕಟ್ಟೆಯ ಗೇಟ್ ದುರಸ್ತಿ ಕಾರ್ಯ ಆರಂಭವಾಗಿದ್ದು, ನೀರಿನ ಪ್ರಮಾಣ ಕಡಿಮೆ ಮಾಡದ ಹೊರತಾಗಿ ದುರಸ್ತಿ ಕಾರ್ಯ ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ನೀರಾವರಿ ನಿಗಮ ನಮ್ಮೊಬ್ಬರ ಅಧಿಕಾರ ವ್ಯಾಪ್ತಿಯಲ್ಲಿ ಬರುವುದಿಲ್ಲ. ಕೇಂದ್ರ ಹಾಗೂ ಮೂರು ರಾಜ್ಯಗಳ ಸದಸ್ಯರೂ ಇದರಲ್ಲಿ ಇರುತ್ತಾರೆ. ಗೇಟ್ ಚೈನ್ ಕಿತ್ತು ಹೋದ ಪ್ರಕರಣದ ಬಗ್ಗೆ ಎಲ್ಲರಿಗೂ ತಕ್ಷಣ ಮಾಹಿತಿ ನೀಡಲಾಗಿದೆ ಎಂದರು.
ಅಣೆಕಟ್ಟೆ ಸುರಕ್ಷತಾ ಸಮಿತಿಯಲ್ಲಿ ಈ ಮೊದಲೇ ಕೆಲಸ ಮಾಡಿದಂತಹ ತಂತ್ರಜ್ಞರೂ ಇದ್ದರು. ಅವರ ಬಳಿ ಚರ್ಚೆ ನಡೆಸಿ, ನಂತರ ನಕ್ಷೆಯನ್ನು ತೆಗೆಸಿ ಅದರಂತೆ ಗೇಟ್ ತಯಾರಿಸುವವರ ಬಳಿ ಮಾತನಾಡಲಾಗಿದೆ. ನಾನೇ ಖುದ್ದಾಗಿ ಜಿಂದಾಲ್ ಕಾರ್ಖಾನೆಯವರ ಬಳಿ ಮಾತನಾಡಿರುವೆ ಎಂದರು.
50-60 ಟಿಎಂಸಿ ನೀರನ್ನು ಉಳಿಸಲು, ರೈತರಿಗೆ ಒಂದು ಬೆಳೆಗಾದರೂ ನೀರು ಕೊಡಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಕೆರೆ, ಕಾಲುವೆಗೆ ನೀರು ಬಿಡುತ್ತೇವೆ. ಹೀಗಾಗಿ ರೈತರು ಆತಂಕಪಡಬೇಕಾಗಿಲ್ಲ. ನದಿಗೆ ನೀರು ಹರಿದು ಹೋಗುವ ಬದಲು ಎಲ್ಲಾ ಚಾನಲ್ಗಳನ್ನು ತೆರೆದು ಅಲ್ಲಿಗೂ ನೀರು ಹರಿಸಲಾಗುತ್ತಿದೆ. ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಸುರಕ್ಷತೆ ವಹಿಸಲಾಗಿದೆ ಎಂದು ಹೇಳಿದರು.
ಡ್ಯಾಂ 70 ವರ್ಷದ ಹಳೆಯ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ. ಡ್ಯಾಂನ ಎಲ್ಲಾ ಗೇಟ್ಗಳು ಸರಿಯಿವೆ. ಇದೊಂದು ಮಾತ್ರ ಒತ್ತಡ ತಡೆಯಲಾರದೆ ಅವಘಡ ಸಂಭವಿಸಿದೆ. ಇದರಲ್ಲಿ ಅಕಾರಿಗಳ ತಪ್ಪೇನಿದೆ ಎಂದು ಪ್ರಶ್ನಿಸಿದರು.
ನೀರು ಹಾಗೂ ಅಣೆಕಟ್ಟು ಎರಡೂ ಉಳಿಯಬೇಕು. 70 ವರ್ಷದ ಹಳೆಯ ಅಣೆಕಟ್ಟಾದ ಕಾರಣ ಈ ಅವಘಡ ಸಂಭವಿಸಿದೆ. ನಮ್ಮ ಬಳಿ ಎಲ್ಲಾ ನಕ್ಷೆ, ದಾಖಲೆಗಳು ಇದ್ದ ಕಾರಣಕ್ಕೆ ಬೇಗ ಕೆಲಸವಾಗುತ್ತಿದೆ ಎಂದು ತಿಳಿಸಿದರು.
ಅಣೆಕಟ್ಟೆ ಸುರಕ್ಷತಾ ಸಮಿತಿ ರಚನೆ
ಅಣೆಕಟ್ಟೆ ಸುರಕ್ಷತಾ ಸಮಿತಿ ರಚನೆ ಮಾಡಲಾಗುತ್ತಿದ್ದು, ಈ ಸಮಿತಿಯು ರಾಜ್ಯದ ಎಲ್ಲಾ ಅಣೆಕಟ್ಟೆಗಳಿಗೆ ಭೇಟಿ ನೀಡಿ, ಅಧ್ಯಯನ ನಡೆಸಿ ಮುಂದಿನ ಒಂದು ತಿಂಗಳ ಒಳಗಾಗಿ ಸುರಕ್ಷತೆಯ ಬಗ್ಗೆ ವರದಿ ನೀಡುತ್ತದೆ. ತುಂಗಭದ್ರಾ ಅಣೆಕಟ್ಟೆಯ ಗೇಟ್ ದುರಸ್ತಿ ಕಾರ್ಯಕ್ಕೂ ಈ ಸಮಿತಿಗೂ ಸಂಬಂಧವಿಲ್ಲ. ಉಳಿದ ವಿಚಾರದ ಬಗ್ಗೆ ವರದಿ ತಯಾರಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ನೀರಿನ ಹೊರಹರಿವು ಹೆಚ್ಚು ರಭಸದಿಂದ ಕೂಡಿದೆ. ಕೇವಲ 19ನೇ ಗೇಟ್ ಒಂದರಲ್ಲೇ 9 ಸಾವಿರ ಕ್ಯುಸೆಕ್ಗೂ ಹೆಚ್ಚಿನ ನೀರು ಹರಿದುಹೋಗುತ್ತಿದೆ. ನೀರಿನ ರಭಸ ಎಷ್ಟಿದೆ ಎಂದು ತಿಳಿಯಲು ಡ್ರೋಣ್ ಕ್ಯಾಮೆರಾ ಮೂಲಕ ಚಿತ್ರೀಕರಿಸಲಾಗುತ್ತಿದೆ. ಕೂಡಲೇ ಆ ವಿಡಿಯೋ ಬಿಡುಗಡೆ ಮಾಡಲಾಗುವುದು. ಬೇರೆ ಗೇಟ್ಗಳಿಗೆ ತೊಂದರೆ ಆಗದಂತೆ ಕೆಲಸ ಮಾಡಲಾಗುವುದು ಎಂದು ಶಿವಕುಮಾರ್ ಹೇಳಿದರು.