newsics.com
ತಿರುನಲ್ವೇಲಿ(ತಮಿಳುನಾಡು): ಮೂಕಾಂಬಿಕಾ ದೇವಿ ಕಣ್ಣು ತೆರೆದಿದ್ದಾಳೆ…
ಇಂಥದ್ದೊಂದು ಸುದ್ದಿ ಇದೀಗ ತಮಿಳುನಾಡಿನಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿದೆ. ತಿರುನನ್ವೇಲಿ ಜಿಲ್ಲೆಯ ದಿವಯನ್ವಿಲೈ ಮುಖ್ಯ ಬಜಾರ್ನಲ್ಲಿ ಅರ್ಬುಟ ವಿನಾಯಕರ್ ಎಂಬ ದೇವಸ್ಥಾನ ಇದೆ. ಈ ದೇಗುಲದ ಆವರಣದಲ್ಲಿ ಅನ್ನೈ ಮೂಕಾಂಬಿಕೈ ಎಂಬ ದೇವಿ ದೇಗುಲವಿದೆ. ಈ ದೇವಿಯ ವಿಗ್ರಹವೇ ಕಣ್ಣು ತೆರೆದಿದೆ ಎಂಬ ಸುದ್ದಿ ಎಲ್ಲೆಡೆ ಜೋರಾಗಿಯೇ ಕೇಳಿಬರುತ್ತಿದೆ.
ಅನ್ನೈ ಮೂಕಾಂಬಿಕೈ ದೇವಾಲಯದಲ್ಲಿ ಪವಾಡ ನಡೆದಿದೆಯಂತೆ. ಮಂಗಳವಾರ ಸಂಜೆ 6.40ಕ್ಕೆ ದೇವಸ್ಥಾನದ ಅರ್ಚಕ ಮುಖೇಶ್ ಭಟ್ಟಾಚಾರ್ಯ ಅವರು ಮೂಕಾಂಬಿಕೈ ದೇವಿಯನ್ನು ಅಲಂಕರಿಸಲು ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿದ್ದರು. ಆ ವೇಳೆ ಆ ಭಾಗದ ಮುತ್ತು ಆಚಾರ್ಯ ಎಂಬ ವ್ಯಕ್ತಿ ತಮ್ಮ ಪತ್ನಿಯೊಂದಿಗೆ ಅಲ್ಲಿಗೆ ಆಗಮಿಸಿ, ಪತ್ನಿಯ ಹೆರಿಗೆ ಚೆನ್ನಾಗಿ ಆಗಲೆಂದು ಪ್ರಾರ್ಥಿಸಿದ್ದರಂತೆ.
ಆ ಸಮಯದಲ್ಲಿ ಮುತ್ತುವಿನ ಹೆಂಡತಿ ದೇವಿಯ ವಿಗ್ರಹದ ಕಣ್ಣುಗಳಿಂದ ಒಂದು ರೀತಿಯ ಬೆಳಕು ಬರುತ್ತಿರುವುದನ್ನು ಗಮನಿಸಿದರಂತೆ. ಇದನ್ನು ತಮ್ಮ ಪತಿಗೆ ತಿಳಿಸಿದರಂತೆ. ಅವರೂ ದೃಶ್ಯ ನೋಡಿದರಂತೆ. ಬಳಿಕ ಪವಾಡಸದೃಶ ದೃಶ್ಯವನ್ನು ಕಂಡು ಅರ್ಚಕರಿಗೆ ತಿಳಿಸಿದರಂತೆ.
ಈ ಸುದ್ದಿ ಸುತ್ತಮುತ್ತಲಿನ ಗ್ರಾಮಗಳಿಗೆ ಹರಡುತ್ತಿದ್ದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ ದೇವಿಯ ಕಣ್ಣುಗಳ ಬೆಳಕನ್ನು ಕಂಡು ಪುಳಕಿತರಾದರಂತೆ. ಬಳಿಕ ರಾತ್ರಿ 10 ಗಂಟೆಗೆ ಎಂದಿನಂತೆ ದೇವಸ್ಥಾನ ಮುಚ್ಚಲಾಯಿತು.
ಬುಧವಾರ ಮುಂಜಾನೆ 5 ಗಂಟೆಗೆ ದೇವಸ್ಥಾನ ತೆರೆದಾಗ ಆಗಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಆದರೆ, ಮೂರ್ತಿಯಲ್ಲಿ ದೇವಿಯ ಕಣ್ಣುಗಳು ಮಾಮೂಲಿಯಂತೆ ಇತ್ತಂತೆ.
ಆದರೂ ದೇವಿ ಕಣ್ಣು ತೆರೆದಿದ್ದಾಳೆ ಎಂಬ ವದಂತಿ ಮಾತ್ರ ಕಡಿಮೆಯಾಗಿಲ್ಲ. ಮೂಕಾಂಬಿಕೈ ವಿಗ್ರಹ ಕಣ್ಣು ಬಿಟ್ಟಿದೆ ಎಂಬ ಸುದ್ದಿ ವೈರಲ್ ಆಗಿದೆ. ಇದು ದೇವಿ ಪವಾಡ ಎಂದೇ ಭಕ್ತರು ಹೇಳುತ್ತಿದ್ದಾರೆ.