https://youtube.com/shorts/fUqc-HD4bis?si=EJBHni_CGreF1xmw
Subscribe ನ್ಯೂಸಿಕ್ಸ್ ಕನ್ನಡ
newsics.com
ಶಿವಮೊಗ್ಗ: ಪತ್ನಿ ಹಿಂದೂ ಧರ್ಮವನ್ನು ತೊರೆದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದು, ಬಳಿಕ ಪತಿ ಹಾಗೂ ಮಕ್ಕಳನ್ನೂ ಸಹ ಮತಾಂತರಗೊಳ್ಳುವಂತೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.ಇದೀಗ ಈ ಪ್ರಕರಣ ಪೊಲೀಸ್ ಮೆಟ್ಟಿಲೇರಿದೆ.
ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿಯಾದ ಬಿ. ವಿನಯ್ ಎಂಬುವವರು ತಮ್ಮ ಪತ್ನಿ ಪ್ರಿಯತಾ ಆರ್. ವಿರುದ್ಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿನಯ್ ಅವರು 2011ರಲ್ಲಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡು ಬನಶಂಕರಿ ಕಲ್ಯಾಣ ಮಂಟಪದಲ್ಲಿ ಪ್ರಿಯತಾ ಆರ್. ಅವರನ್ನು ಲಿಂಗಾಯತ ಕುಂಬಾರ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರು. ಈ ದಂಪತಿಗೆ ಯೋಜ್ಞಾ (14) ಮತ್ತು ಮನೋಜ್ಞಾ (8) ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆರಂಭದಲ್ಲಿ ಸುಖವಾಗಿದ್ದ ಇವರ ಸಂಸಾರದಲ್ಲಿ ಬಿರುಕು ಮೂಡಿದ್ದು 2015ರ ನಂತರ ಎಂದು ವಿನಯ್ ದೂರಿನಲ್ಲಿ ತಿಳಿಸಿದ್ದಾರೆ
2015ರಲ್ಲಿ ಶಿವಮೊಗ್ಗದ ಪ್ರತಿಷ್ಠಿತ ಪೋದಾರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಪ್ರಿಯತಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದ್ದರು. ಅಲ್ಲಿ ಅದೇ ಶಾಲೆಯಲ್ಲಿದ್ದ ಮರಿಯಾ ಪ್ರಿಯದರ್ಶಿನಿ ಎಂಬ ಸಹೋದ್ಯೋಗಿಯ ಸಂಪರ್ಕ ಬೆಳೆದಿದೆ. ಮರಿಯಾ ಅವರ ಪ್ರಭಾವದಿಂದ ಪ್ರಿಯತಾ ಹಿಂದೂ ಧರ್ಮದ ಆಚರಣೆಗಳನ್ನು ಬಿಟ್ಟು ಕ್ರೈಸ್ತ ಧರ್ಮದ ಕಡೆಗೆ ಆಕರ್ಷಿತರಾಗಿದ್ದಾರೆ. ಕ್ರಮೇಣ ಅವರು ಸಂಪೂರ್ಣವಾಗಿ ಮತಾಂತರಗೊಂಡಿದ್ದಾರೆ ಎಂದು ಪತಿ ವಿನಯ್ ಆರೋಪಿಸಿದ್ದಾರೆ.
ಮತಾಂತರಗೊಂಡ ನಂತರ ಪ್ರಿಯತಾ ಅವರ ವರ್ತನೆಯಲ್ಲಿ ಭಾರೀ ಬದಲಾವಣೆ ಕಂಡುಬಂದಿದೆ. ಅವರು ನಿಯಮಿತವಾಗಿ ಚರ್ಚ್ಗೆ ಹೋಗಲಾರಂಭಿಸಿದರು. ಮನೆಯಲ್ಲಿಯೇ ಬೈಬಲ್ ತಂದು ಇಟ್ಟುಕೊಂಡು ಓದುವುದು, ಯೇಸುಕ್ರಿಸ್ತನನ್ನು ಪೂಜಿಸುವುದನ್ನು ರೂಢಿಸಿಕೊಂಡರು. ಪತಿ ಎಷ್ಟೇ ಬುದ್ಧಿವಾದ ಹೇಳಿದರೂ, ನಾನು ಕ್ರೈಸ್ತ ಧರ್ಮ ಪಾಲಿಸುತ್ತಿದ್ದೇನೆ, ನೀವೂ ಅದನ್ನೇ ಪಾಲಿಸಿ ಎಂದು ಒತ್ತಾಯಿಸಿದ್ದಾರೆ.
ಮತಾಂತರದ ವಿಚಾರವಾಗಿ ಮನೆಯಲ್ಲಿ ನಿತ್ಯ ಜಗಳವಾಗುತ್ತಿತ್ತು. 2019ರಲ್ಲಿ ಒಮ್ಮೆ ತವರು ಮನೆಗೆ ಹೋಗಿದ್ದ ಪತ್ನಿಯನ್ನು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ವಿನಯ್ ಅವರು 2020ರಲ್ಲಿ ಮನವೊಲಿಸಿ ಕರೆತಂದಿದ್ದರು. ಆದರೆ, 2024ರ ವೇಳೆಗೆ ಅವರ ವರ್ತನೆ ಮತ್ತಷ್ಟು ತೀವ್ರವಾಯಿತು. ‘ನನ್ನ ಮಾತನ್ನು ನೀವು ಕೇಳದಿದ್ದರೆ ನಾನು ಮನೆಯಲ್ಲಿ ಇರುವುದಿಲ್ಲ’ ಎಂದು ಹಠ ಹಿಡಿದ ಪ್ರಿಯತಾ, ಪತಿ ಮತ್ತು ಮಕ್ಕಳು ಮತಾಂತರಗೊಳ್ಳಲು ಒಪ್ಪದ ಕಾರಣ 2025ರಲ್ಲಿ ಗಂಡ-ಮಕ್ಕಳನ್ನು ಬಿಟ್ಟು ತವರು ಮನೆಗೆ ತೆರಳಿದ್ದಾರೆ ಎಂದು ವಿನಯ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
https://www.newsics.com/2026/02/09/we-have-not-received-good-news-from-bjp-mohan-bhagwat/