Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ರಾಜ್ಯದಲ್ಲಿ ನಡೆಯುತ್ತಿರುವ ‘ಗದ್ದುಗೆ ಗುದ್ದಾಟ’ದ ನಿಜವಾದ ಪ್ರಹಸನದಲ್ಲಿ ಗಂಭೀರ ಬೆಳವಣಿಗೆಯೊಂದು ನಡೆದಿದ್ದು, ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೊಸ ತಲೆನೋವೊಂದನ್ನು ತರುವ ಸಾಧ್ಯತೆಯಿದೆ.
ಲೋಕಸಭಾ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಅಸಹಕಾರ ಧೋರಣೆ’ಗೆ ಬೇಸರಗೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಬೆಳವಣಿಗೆ ಮುಂಬರುವ ದಿನಗಳಲ್ಲಿ, ಸಿದ್ದರಾಮಯ್ಯನವರಿಗೆ ಮತ್ತಷ್ಟು ಸಮಸ್ಯೆ ತೊಂದೊಡ್ಡುವ ಸಾಧ್ಯತೆಯಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜತೆಗಿನ ಅಧಿಕಾರ ಹಸ್ತಾಂತರದ ಹೋರಾಟವನ್ನು ನಿರ್ಧರಿಸುವ ಮಟ್ಟಕ್ಕೂ ಹೋಗಬಹುದಾಗಿದೆ.
ಕಳೆದ ವಾರಾಂತ್ಯ ಬೆಂಗಳೂರಲ್ಲಿ ಬೀಡುಬಿಟ್ಟಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ನಿಮ್ಮ ಅಹವಾಲು ಏನಾದರೂ ಇದ್ದರೆ ಅವರಿಗೆ ಹೇಳಿ ಎಂದು ಸಿದ್ದರಾಮಯ್ಯನವರಿಗೆ ರಾಹುಲ್ ಗಾಂಧಿ ಸಂದೇಶ ಕಳುಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಖರ್ಗೆಯವರನ್ನು ಸಿದ್ದರಾಮಯ್ಯ ಭೇಟಿಯಾದರೂ, ತಾನು ರಾಹುಲ್ ಗಾಂಧಿ ಜತೆ ಮಾತ್ರ ಈ ವಿಚಾರ ಚರ್ಚಿಸಬೇಕು ಎಂದು ಹೇಳಿದ್ದಾರೆನ್ನಲಾಗಿದೆ. ಈ ವಿಚಾರ ತಿಳಿದ ರಾಹುಲ್ ಗಾಂಧಿ ತುಂಬಾ ಬೇಸರ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಇದೇ ಕಾರಣಕ್ಕೆ, ಖರ್ಗೆಯವರು ಮಾಧ್ಯಮದ ಜತೆ ಮಾತನಾಡುತ್ತ ಅಧಿಕಾರ ಹಸ್ತಾಂತರದ ವಿಚಾರದಲ್ಲಿ, ‘ಪಕ್ಷದ ಹೈಕಮಾಂಡ್ ಒಂದು ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ಹೇಳಿದ್ದರು. ಖುದ್ದು ಎಐಸಿಸಿ ಅಧ್ಯಕ್ಷರು ಪಕ್ಷದ ಹೈಕಮಾಂಡ್ ಒಂದು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದಾಗ, ಹಾಗಾದರೆ ಕಾಂಗ್ರೆಸ್ ಹೈಕಮಾಂಡ್ ಯಾರು? ಎಐಸಿಸಿ ಅಧ್ಯಕ್ಷರಾದ ಖರ್ಗೆಯವರಲ್ಲವೇ? ಈ ವಿಚಾರ ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರ ಮಟ್ಟದಲ್ಲಿ ಕೂಡ ಚರ್ಚೆಯಾಯಿತು. ವಿರೋಧ ಪಕ್ಷಗಳ ನಾಯಕರುಗಳಿಂದಲೂ ಟೀಕೆಗೆ ಗುರಿಯಾದ ಪಕ್ಷ ಸಂಕೋಚಕ್ಕೆ ಸಿಲುಕಿತು. ಇದಕ್ಕೆ ಕಾರಣವಾಗಿದ್ದು- ಸಿದ್ದರಾಮಯ್ಯನವರ ಅಸಹಕಾರ ಎಂದು ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಅಸಮಾಧಾನಕ್ಕೆ ಸಿದ್ದರಾಮಯ್ಯನವರ ಪುತ್ರನ ವರ್ತನೆಯೂ ಕಾರಣ ಎನ್ನಲಾಗಿದೆ. ಡಾ. ಯತೀಂದ್ರ ಸಿದ್ದರಾಮಯ್ಯ ಸರಕಾರದ ಕೆಲಸದಲ್ಲಿ ಮಾಡುತ್ತಿರುವ ಹಸ್ತಕ್ಷೇಪದ ಕುರಿತು ಕೆಲ ವರದಿ ರಾಹುಲ್ ಗಾಂಧಿಯವರ ಕೈ ತಲುಪಿದ್ದು, ಈ ಬೆಳವಣಿಗೆ ರಾಹುಲ್ ಗಾಂಧಿಯವರಿಗೆ ಅಸಮಾಧಾನ ತಂದಿದೆ ಎನ್ನಲಾಗಿದೆ. ಇದರ ಪರಿಣಾಮವಾಗಿ, ಪಕ್ಷದೊಳಗೆ ಸಿದ್ದರಾಮಯ್ಯನವರ ಸ್ಥಾನ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಸಿದ್ದರಾಮಯ್ಯ ಮಾನಸಿಕವಾಗಿ ತಯಾರಾಗಿದ್ದಾರೆ ಎಂದು ಅವರ ಗುಂಪಿನ ಕೆಲ ಸಚಿವರುಗಳು ಮುಗುಮ್ಮಾಗಿ ಹೇಳುತ್ತಿದ್ದಾರೆ. ಒತ್ತಡ ತೀರಾ ಜಾಸ್ತಿ ಆದರೆ, ಫೆಬ್ರವರಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಮುಂದಿನ ಬಜೆಟ್ ಮಂಡಿಸಿ ಆಮೇಲೆ ಕೆಳಗಿಳಿಯುವ ಸಾಧ್ಯತೆ ಇದೆ ಎಂಬುದು ಅವರ ವಾದ. ಅದರ ಜತೆ ಕರ್ನಾಟಕದಲ್ಲಿ ಅತಿ ಹೆಚ್ಚು ದಿನ ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸ್ ಅವರ ದಾಖಲೆಯನ್ನು ಸಿದ್ದರಾಮಯ್ಯು ಡಿಸೆಂಬರ್ನಲ್ಲಿ ಮುರಿಯುವ ಸಾಧ್ಯತೆ ಇದ್ದು, ಆ ನಂತರ ಕೂಡ ಅವರು ತಮ್ಮ ಸ್ಥಾನ ಬಿಟ್ಟುಕೊಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಹೈಕಮಾಂಡ್ಗಾದ ಮುಜುಗರದ ಈ ಅಸಮಾಧಾನ ರಾಜಸ್ಥಾನ, ಛತ್ತೀಸ್ಗಢನಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಅವಕಾಶ ಕೊಡದೇ ಅಶೋಕ್ ಗೆಹಲೋಟ್ ಮತ್ತು ಭೂಪೇಶ್ ವಘೇಲ್ ಅವರಿಗೆ ಐದು ವರ್ಷದ ಅವಧಿ ನೀಡಿದ್ದ ಕಾಂಗ್ರೆಸ್ ಹೈಕಮಾಂಡ್- ಕರ್ನಾಟಕದಲ್ಲಿ ಒಂದು ಹೊಸ ಸಂಪ್ರದಾಯ ಹುಟ್ಟುಹಾಕುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಮದುವೆ ಹಿಂದಿನ ದಿನ ಪಲಾಶ್ ಚಕ್ಕಂದ; ರೆಡ್ಹ್ಯಾಂಡ್ ಆಗಿ ಸಿಕ್ಕಿದ್ದು ಹೇಗೆ?