Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸೋಲ್: ಈ ಹೋಟೆಲ್ಗೆ ಒಬ್ಬರೇ ಹೋಗುವಂತಿಲ್ಲ. ಹೋದರೂ ನಿಮಗೆ ಊಟೋಪಹಾರ ಏನೂ ಸಿಗುವುದಿಲ್ಲ. ಊಟ ಬೇಕೇ ಬೇಕು ಎನ್ನುವುದಾದರೆ ಒಬ್ಬರೇ ಹೋದರೂ ಎರಡು ಊಟ ಆರ್ಡರ್ ಮಾಡಬೇಕು!
ವಿಚಿತ್ರವೆನಿಸಿದರೂ ಇದು ಸತ್ಯ. ದಕ್ಷಿಣ ಕೊರಿಯಾದ ಯೋಸು ನಗರದ ರೆಸ್ಟೋರೆಂಟೊಂದು ಒಬ್ಬರೇ ಊಟಕ್ಕೆ ಬರುವ ಗ್ರಾಹಕರನ್ನು ನಿರಾಕರಿಸಿದೆ. ಇದಕ್ಕೆ ಹೋಟೆಲ್ ನೀಡಿರುವ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.
ಇದೇನಪ್ಪಾ ಹೊಸ ನಿಯಮ ಎಂದರೆ, ಈ ರೆಸ್ಟೋರೆಂಟ್ ಉಪಾಹಾರ ಸೇವಿಸಲು ಒಬ್ಬರೇ ಬಂದವರಿಗೆ ಇಬ್ಬರ ಊಟದ ಹಣ ಪಾವತಿಸಲು, ಇಬ್ಬರ ಊಟ ಆರ್ಡರ್ ಮಾಡಲು, ಸ್ನೇಹಿತರನ್ನು ಕರೆತರಲು ಅಥವಾ ಪತ್ನಿ ಜತೆ ಬರಲು ಸೂಚಿಸಿದೆ. ಅಲ್ಲದೆ, ‘ನಾವು ಒಂಟಿತನವನ್ನು ಮಾರಾಟ ಮಾಡುವುದಿಲ್ಲʼ ಎಂದು ಹೇಳಿ ವಿವಾದ ಸೃಷ್ಟಿಸಿದೆ.
ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ‘ಹೊನ್ಬಾಪ್’ (ಒಬ್ಬರೇ ಊಟ ಮಾಡುವುದು) ಎಂಬ ಪರಿಪಾಠ ಜನಪ್ರಿಯವಾಗಿದೆ. ಜನರು ಒಬ್ಬರೇ ಊಟ ಮಾಡುವ ಸ್ವಾತಂತ್ರ್ಯವನ್ನು ಆನಂದಿಸುತ್ತಿದ್ದಾರೆ. ಆದರೆ, ಸಂಪ್ರದಾಯವಾದಿಯಾಗಿರುವ ಕೆಲವು ರೆಸ್ಟೋರೆಂಟ್ಗಳು ಈ ಬದಲಾವಣೆಗೆ ಹೊಂದಿಕೊಳ್ಳಲು ಕಷ್ಟಪಡುತ್ತಿವೆ. ಈ ರೆಸ್ಟೋರೆಂಟ್ನ ನಿರ್ಧಾರವು, ಒಬ್ಬರೇ ಊಟ ಮಾಡುವುದನ್ನು ಒಂಟಿತನಕ್ಕೆ ಸಮನಾಗಿ ನೋಡಿದೆ.
ಅದಕ್ಕೆ, ಅವರು ತಮ್ಮ ಗ್ರಾಹಕರಿಗೆ ‘ನಾವು ಒಂಟಿತನವನ್ನು ಮಾರಾಟ ಮಾಡುವುದಿಲ್ಲ. ದಯವಿಟ್ಟು ಒಬ್ಬರೇ ಬರಬೇಡಿ’ ಎಂದು ರೆಸ್ಟೋರೆಂಟ್ ತನ್ನ ಸೂಚನಾ ಫಲಕದಲ್ಲಿ ಬರೆದುಕೊಂಡಿದೆ. ಒಂಟಿಯಾಗಿ ಊಟಕ್ಕೆ ಹೋಗಲು ಬಯಸುವವರನ್ನು ರೆಸ್ಟೋರೆಂಟ್ನಿಂದ ನಿಷೇಧಿಸಿದ್ದಾರೆ.
ಈ ವಿದ್ಯಮಾನ ದಕ್ಷಿಣ ಕೊರಿಯಾದಲ್ಲಿ ಏಕ ವ್ಯಕ್ತಿ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಡೆದಿದೆ. ಅಂಕಿ ಅಂಶಗಳ ಪ್ರಕಾರ, ಶೇ. 29ರಷ್ಟು ಕುಟುಂಬಗಳು ಒಬ್ಬರೇ ಸದಸ್ಯರನ್ನು ಹೊಂದಿವೆ ಎಂದು ವರದಿಯಾಗಿದೆ.
ಆದರೆ ಈ ಹಳೆಯ ಮನಸ್ಥಿತಿಗೆ ಹಲವರು ನಾನಾ ರೀತಿಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ರೆಸ್ಟೋರೆಂಟ್ ಮಾಲೀಕರ ಮನಸ್ಥಿತಿಯನ್ನು ಹಳೆಯದು ಎಂದು ಟೀಕಿಸಿದ್ದಾರೆ. ‘ಒಬ್ಬರೇ ಊಟ ಮಾಡುವುದನ್ನು ಒಂಟಿತನಕ್ಕೆ ಏಕೆ ಹೋಲಿಸಬೇಕು?’ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ‘ಈ ರೆಸ್ಟೋರೆಂಟ್ ತನ್ನ ಗ್ರಾಹಕರನ್ನು ಗೌರವಿಸುವುದಿಲ್ಲ’ ಎಂದು ಇನ್ನೋರ್ವ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಕೆಲವರು ಮಾಲೀಕರ ನಿರ್ಧಾರವನ್ನು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ‘ಮಾಲೀಕರು ಆರ್ಥಿಕ ನಷ್ಟವನ್ನು ಭರಿಸಲು ಸಿದ್ಧರಿದ್ದರೆ, ಅದು ಅವರ ಆಯ್ಕೆ ಮತ್ತು ಅದನ್ನು ಗೌರವಿಸಬೇಕು’ ಎಂದು ಇನ್ನೊಬ್ಬರು ಹೇಳಿದ್ದಾರೆ.
ಈ ಹಿಂದೆಯೂ ಸಹ ಇದೇ ವರ್ಷದ ಆರಂಭದಲ್ಲಿ ಇಂತಹುದ್ದೇ ಘಟನೆ ನಡೆದಿದ್ದು, ಒಬ್ಬರೇ ಬಂದ ಗ್ರಾಹಕರಿಗೆ ಸಿಬ್ಬಂದಿ ಅವಾಚ್ಯ ಶಬ್ದಗಳನ್ನು ಬಳಸಿದ್ದರು. ‘ಬೇಗ ಊಟ ಮಾಡಿ, ಬೇರೆ ಜನ ಬರ್ತಿದ್ದಾರೆ’ ಎಂದು ಹೇಳಿದ್ದರೆನ್ನಲಾಗಿದೆ.
ಈ ಮಧ್ಯೆ ಮತ್ತೆ ಮರುಕಳಿಸಿದ್ದು, ಗ್ರಾಹಕರ ಆಯ್ಕೆಯನ್ನು ಗೌರವಿಸದೆ ತಮ್ಮ ಸಂಪ್ರದಾಯ ಹಾಗೂ ತಮ್ಮ ಸಿದ್ಧಾಂತ ಹೇರುತ್ತಿರುವುದು ಭಾರೀ ಚರ್ಚೆ ಹುಟ್ಟುಹಾಕಿದೆ.