Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನವದೆಹಲಿ: ವರ್ಷದ ಧನತ್ರಯೋದಶಿ ಪ್ರಯುಕ್ತ ದೇಶಾದ್ಯಂತ 1 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ದಾಖಲೆ ವ್ಯಾಪಾರ ನಡೆದಿದೆ.
ಚಿನ್ನ, ಬೆಳ್ಳಿ, ವಾಹನಗಳು, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ವಿವಿಧ ಉತ್ಪನ್ನಗಳ ಭರ್ಜರಿ ಮಾರಾಟವಾಗಿದ್ದು, ಜೈನ ಸಮುದಾಯವೊಂದು 186 ಐಷಾರಾಮಿ ಕಾರುಗಳನ್ನು ಖರೀದಿಸಿ ಗಮನ ಸೆಳೆದಿದೆ.
ಇದು ಇತ್ತೀಚಿನ ವರ್ಷಗಳಲ್ಲೇ ಹಬ್ಬದ ಋತುವಿನಲ್ಲಿ ನಡೆದ ಅತಿ ದೊಡ್ಡ ವಹಿವಾಟು ಎಂದು ವ್ಯಾಪಾರಿ ಒಕ್ಕೂಟ ಅಂದಾಜಿಸಿದೆ.
‘ಧನತ್ರಯೋದಶಿ’ಯಂದು ಆಭರಣ, ವಾಹನ ಇನ್ನಿತರ ವಸ್ತುಗಳನ್ನು ಖರೀದಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಇದರ ಜತೆಗೆ ಈ ವರ್ಷ ಕೇಂದ್ರ ಸರ್ಕಾರ ಜಿಎಸ್ಟಿ ದರ ಇಳಿಕೆ ಮಾಡಿದ್ದರಿಂದ ವಸ್ತುಗಳ ಬೆಲೆ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಭರ್ಜರಿ ಖರೀದಿ ನಡೆಯುತ್ತಿದೆ.
60,000 ಕೋಟಿ ರೂ.ಗೂ ಅಧಿಕ ಮೊತ್ತದ ಚಿನ್ನ ಮತ್ತು ಬೆಳ್ಳಿ ಮಾರಾಟವಾಗಿದೆ. ದೆಹಲಿ ಮಾರುಕಟ್ಟೆಯಲ್ಲಿ 10,000 ಕೋಟಿ ರೂ.ಗಳ ಸ್ಥಳೀಯ ಉತ್ಪನ್ನಗಳು ಬಿಕರಿಯಾಗಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.25 ಹೆಚ್ಚು.
ಇನ್ನು 15,000 ಕೋಟಿ ರೂ.ಗಳ ಅಡುಗೆ ಪಾತ್ರೆ ಮತ್ತು ಉಪಕರಣಗಳು, 10,000 ಕೋಟಿ ರೂ.ಗಳ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ವಸ್ತುಗಳು, 3,000 ಕೋಟಿ ರೂ.ಗಳ ಆಲಂಕಾರಿಕ ಮತ್ತು ಪೂಜಾ ಉತ್ಪನ್ನಗಳು, 12,000 ಕೋಟಿ ರೂ.ಗಳ ಒಣಹಣ್ಣು, ಸಿಹಿತಿಂಡಿ ಮತ್ತು ವಾಹನಗಳು ಮಾರಾಟವಾಗಿವೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ಪ್ರವೀಣ್ ಖಂಡೇಲ್ವಾಲ್ ಮಾಹಿತಿ ನೀಡಿದ್ದಾರೆ.
ಮಾರುತಿ ಸುಜುಕಿ ಶನಿವಾರ 40000ಕ್ಕೂ ಹೆಚ್ಚು ಕಾರು ವಿತರಿಸಿದೆ. ಭಾನುವಾರ ಸುಮಾರು 10000ಕ್ಕೂ ಅಧಿಕ ಕಾರುಗಳನ್ನು ಮಾರಾಟ ಮಾಡಿದೆ. ಹುಂಡೈ ಎರಡು ದಿನದಲ್ಲಿ ಸುಮಾರು 15000ಕ್ಕೂ ಹೆಚ್ಚು ಕಾರು ವಿತರಿಸಿದೆ. ಉಳಿದ ಕಂಪನಿಗಳ ಕಾರಿನ ವಿತರಣೆಯನ್ನು ಸೇರಿದರೆ ಅದು 75000 ದಾಟುವ ಸಾಧ್ಯತೆ ನಿಚ್ಚಳವಾಗಿದೆ.
ಗುಜರಾತಿನಲ್ಲಿ ಜೈನ ಸಮುದಾಯದವರೆಲ್ಲ ಒಟ್ಟು ಸೇರಿ ಒಂದೇ ದಿನ ಬರೋಬ್ಬರಿ 149 ಕೋಟಿ ರು.ಗೆ 186 ಲಕ್ಷುರಿ ಕಾರು ಖರೀದಿಸಿದ್ದಾರೆ.
ಇದರಿಂದಲೇ 21 ಕೋಟಿ ರು. ರಿಯಾಯಿತಿ ಕೂಡ ಪಡೆದಿದ್ದಾರೆ. ಜೈನ ಸಮುದಾಯದವರಿಗಾಗಿ ಸ್ಥಾಪನೆಗೊಂಡಿರುವ ಜೈನ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ (ಜೆಐಟಿಒ)ನ ಸದಸ್ಯರು 149 ಕೋಟಿ ರೂ. ಕೊಟ್ಟು 186 ಅತ್ಯಾಧುನಿಕ ಕಾರುಗಳನ್ನು ಖರೀದಿಸಿದ್ದಾರೆ. ಈ ಕಾರುಗಳು ದುಬಾರಿ ಬೆಲೆಯದ್ದಾಗಿದ್ದು 60 ಲಕ್ಷ ರೂ.ನಿಂದ 1.34 ಕೋಟಿ ರು. ಮೌಲ್ಯವುಳ್ಳದಾಗಿವೆ. ಆದರೆ ಒಂದೇ ಬ್ರೋಕರ್ ಬಳಿ ಕಾರುಗಳನ್ನು ಬುಕ್ಕಿಂಗ್ ಮಾಡಿದ್ದರಿಂದ 21.22 ಕೋಟಿ ರೂ. ರಿಯಾಯ್ತಿ ದೊರೆತಿದೆ.
ಆರೋಗ್ಯದ ನೆಪ ಮುಂದಿಟ್ಟು ಕ್ಯಾನ್ಸರ್ ಕಾರಕ ಎಂದು ಅಡಕೆ ನಿಷೇಧಿಸಲು ವಿಶ್ವ ಆರೋಗ್ಯ ಸಂಸ್ಥೆ ಕರೆ
Rain Alert ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯಾದ್ಯಂತ ಭಾರೀ ಮಳೆ.!