newsics.com
ಪ್ರಧಾನಿ ನರೇಂದ್ರ ಮೋದಿ ಘಾನಾ ದೇಶಕ್ಕೆ ಭೇಟಿ ನೀಡಿದ್ದಾರೆ.ಪ್ರಧಾನಿ ಮೋದಿ ಅವರ ಈ ಭೇಟಿಯು 30 ವರ್ಷಗಳ ನಂತರ ಭಾರತದ ಪ್ರಧಾನಮಂತ್ರಿಯೊಬ್ಬರು ಘಾನಾಕ್ಕೆ ನೀಡಿದ ಮೊದಲ ಭೇಟಿಯಾಗಿದೆ.
5 ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮೊದಲು ಘಾನಾ ದೇಶಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಘಾನಾದ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮಾ ಅವರಿಗೆ ಕರ್ನಾಟಕದ ಬೀದರ್ನಲ್ಲಿ ತಯಾರಾದ ಒಂದು ಸೊಗಸಾದ ಬಿದ್ರಿವೇರ್ ಹೂವಿನ ಹೂದಾನಿಗಳನ್ನು ಉಡುಗರೆಯಾಗಿ ನೀಡಿದ್ದಾರೆ. ಕರ್ನಾಟಕದ ಬೀದರ್ನಿಂದ ತೆಗೆದುಕೊಂಡು ಹೋಗಲಾಗಿರುವ ಈ ಸೊಗಸಾದ ಬಿದ್ರಿವೇರ್ ಹೂದಾನಿಗಳು ಕಪ್ಪು ಬಣ್ಣದ್ದಾಗಿದೆ. ಇದು ಬೆಳ್ಳಿಯ ಕುಸುರಿಯನ್ನು ಕೂಡ ಹೊಂದಿದೆ. ಇದು ಭಾರತದ ಪ್ರಸಿದ್ಧ ಲೋಹದ ಕರಕುಶಲತೆಯನ್ನು ಪ್ರದರ್ಶಿಸುತ್ತದೆ.
ಘಾನಾದ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮಾ ಅವರಿಗೆ ಪ್ರಧಾನಿ ಮೋದಿ ಅವರು ಉಡುಗರೆಯಾಗಿ ನೀಡಿರುವ ಹೂವಿನ ಹೂದಾನಿಗಳನ್ನು ಬೀದರ್ನ ಸುಪ್ರಸಿದ್ಧ ಕಲೆಯಾದ ಬಿದ್ರಿವೇರ್ನಿಂದ ಮಾಡಲ್ಪಟ್ಟಿದೆ. ಐನೂರು ವರ್ಷಗಳ ಹಳೆಯದಾದ ಬಿದ್ರಿ ಕಲೆ ಒಂದು ವಿಶಿಷ್ಟವಾದ ಲೋಹ ಕರಕುಶಲ ಕಲೆಯಾಗಿ ಕರ್ನಾಟಕದ ಬೀದರ್ ಜಿಲ್ಲೆಯ ಚಮತ್ಕಾರವಾಗಿದೆ. ಇದು ಬೀದರ್ ನಗರದ ಹೆಸರಿನಿಂದ ಬಂದಿದೆ ಮತ್ತು 14ನೇ ಶತಮಾನದಲ್ಲಿ ಬಹಮನಿ ಸುಲ್ತಾನರ ಆಳ್ವಿಕೆಯ ಅವಧಿಯಲ್ಲಿ ಅಭಿವೃದ್ಧಿ ಹೊಂದಿತು. ಈ ಕಲೆಯು ಪರ್ಷಿಯನ್ ಮೂಲವನ್ನು ಹೊಂದಿದ್ದರೂ, ಬೀದರ್ನಲ್ಲಿ ಇದು ಸಂಪೂರ್ಣವಾಗಿ ಭಾರತೀಯ ಕಲೆಯಾಗಿ ಮಾರ್ಪಟ್ಟಿತು.
ಶತಮಾನಗಳಷ್ಟು ಹಳೆಯ ತಂತ್ರವನ್ನು ಬಳಸಿಕೊಂಡು ಕೌಶಲ್ಯಪೂರ್ಣ ಕುಶಲಕರ್ಮಿಗಳಿಂದ ಕೈಯಿಂದ ರಚಿಸಲಾದ ಈ ಹೂದಾನಿಗಳನ್ನು ಸತು-ತಾಮ್ರದ ಮಿಶ್ರಲೋಹದಿಂದ ತಯಾರಿಸಲಾಗಿದೆ. ಸೌಂದರ್ಯ ಮತ್ತು ಸಮೃದ್ಧಿಯನ್ನು ಸಂಕೇತಿಸುವ ಹೂವಿನ ವಿನ್ಯಾಸದಿಂದ ಕೆತ್ತಲಾಗಿದೆ ಮತ್ತು ಅವುಗಳ ಸಾಂಪ್ರದಾಯಿಕ ನೋಟಕ್ಕಾಗಿ ವಿಶಿಷ್ಟವಾದ ಆಕ್ಸಿಡೀಕರಣವನ್ನು ಮಾಡಲಾಗಿದೆ.