newsics.com
ಬೆಂಗಳೂರು: ಸರ್ಕಾರದ ಸಂಸ್ಥೆಯಾಗಿರುವ ಡಿ ದೇವರಾಜ ಅರಸು ಟ್ರಕ್ ಟರ್ಮಿನಲ್ ಲಿಮಿಟೆಡ್ (DDUTTL) ನಿಗಮದಲ್ಲಿ 47.10 ಕೋಟಿ ರೂಪಾಯಿಗಳ ದುರ್ಬಳಕೆ ಮಾಡಿಕೊಂಡ ಆರೋಪ ಪ್ರಕರಣದಲ್ಲಿ ಬಿಜೆಪಿ ಮಾಜಿ ಎಂಎಲ್ಸಿ ಡಿ.ಎಸ್. ವೀರಯ್ಯ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ರದ್ದಾಗುತ್ತಿದ್ದಂತೆ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಧಿಕಾರಿಗಳು ವೀರಯ್ಯ ಅವರನ್ನು ಶುಕ್ರವಾರ ಮೈಸೂರಿನಲ್ಲಿ ಅರೆಸ್ಟ್ ಮಾಡಿದ್ದಾರೆ.
ಮೂರು ವರ್ಷಗಳ ಹಿಂದೆ ಈ ಅವ್ಯವಹಾರ ನಡೆದಿದ್ದು, ಆಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಿಎಸ್ ವೀರಯ್ಯ ಅವರು ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ಲಿಮಿಟೆಡ್ (ಡಿಡಿಯುಟಿಟಿಎಲ್) ನಿಗಮ ಅಧ್ಯಕ್ಷರಾಗಿದ್ದರು. 47.1 ಕೋಟಿ ರೂಪಾಯಿಗಳ ಅವ್ಯವಹಾರದಲ್ಲಿ ವೀರಯ್ಯ ಅವರ ನೇರಪಾತ್ರವನ್ನು ಸಿಐಡಿ ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ.
ಶುಕ್ರವಾರ (ಜುಲೈ 12) ಬೆಂಗಳೂರು ಕೋರ್ಟ್ ವೀರಯ್ಯ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿತು. ಕೂಡಲೇ ಅಧಿಕಾರಿಗಳು ವೀರಯ್ಯ ಅವರನ್ನು ವಶಕ್ಕೆ ಪಡೆದಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಎಸ್. ಶಂಕರಪ್ಪ ಅವರನ್ನು ಇದೇ ಪ್ರಕರಣದಲ್ಲಿ ಸಿಬಿಐ ಬಂಧಿಸಿತ್ತು. ಅಕ್ರಮ ನಡೆದಾಗ ಶಂಕರಪ್ಪ ಡಿಡಿಯುಟಿಟಿಎಲ್ನಲ್ಲಿ ಉಪ ನಿರ್ದೇಶಕರಾಗಿದ್ದರು. ಇವರ ಬಂಧನವಾಗುತ್ತಿದ್ದಂತೆ ಎಚ್ಚೆತ್ತ ವೀರಯ್ಯ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಟೆಂಡರ್ ಕರೆಯದೆ 2 ಕೋಟಿ ರೂಪಾಯಿಗಳ ವರೆಗಿನ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ನೀಡಿರುವ ಆರೋಪಗಳಿವೆ. ಒಟ್ಟಾರೆಯಾಗಿ 47.1 ಕೋಟಿ ರೂಪಾಯಿಗಳ ಕಾಮಗಾರಿಯ ಅವ್ಯವಹಾರ ನಡೆದಿದೆ ಎಂಬುದು ಸಿಐಡಿ ಅಧಿಕಾರಿಗಳ ವಾದವಾಗಿದೆ.
ಟ್ರಕ್ ಟರ್ಮಿನಲ್ಗಳ ನವೀಕರಣ ಹಾಗೂ ನಿರ್ವಹಣೆ ಕಾಮಗಾರಿ ನಡೆಸದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ 47 ಕೋಟಿ 10 ಲಕ್ಷ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಡಿಎಸ್ ವೀರಯ್ಯ ಮತ್ತು ಎಸ್. ಶಂಕರಪ್ಪ ಅಕ್ರಮವಾಗಿ ತಮ್ಮ ಖಾತೆಗಳಿಗೆ ಹಣ ರವಾನಿಸಿಕೊಂಡಿರುವುದು ಪತ್ತೆಯಾಗಿದೆ.
ಸಿಐಡಿ ಈವರೆಗೆ 765 ಕಡತಗಳನ್ನು ಸಂಗ್ರಹಿಸಿದೆ. 380 ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಲಾದ 450 ಪುಟಗಳ ಡೇಟಾವನ್ನು ವಿಶ್ಲೇಷಣೆ ಬಳಿಕ ಅಕ್ರಮ ನಡೆದಿರುವುದನ್ನು ಪತ್ತೆಹಚ್ಚಲಾಗಿದೆ. ಡಿಡಿಯುಟಿಟಿಎಲ್ನಲ್ಲಿ ಸಿಎನ್ ಶಿವಪ್ರಕಾಶ್ ಅವರು ಉಪ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿತ್ತು. ಇವರು ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರ ವಿಚಾರಣೆ ಬಳಿಕ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು.
ಸಿಎಂ ಸಿದ್ದರಾಮಯ್ಯ ಸ್ವೀಕರಿಸಿದ್ದ ಸಾರ್ವಜನಿಕರ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆ!
ಆರು ತಿಂಗಳ ಹಿಂದೆಯೇ ಮೃತಪಟ್ಟ ನಗರಾಭಿವೃದ್ಧಿ ಇಲಾಖೆ ಇಂಜಿನಿಯರ್ ಈಗ ಸೇಡಂನಿಂದ ಮಡಿಕೇರಿಗೆ ವರ್ಗಾವಣೆ!
ನೃತ್ಯ ಪ್ರದರ್ಶನ ವೇಳೆ ಜೀವಂತ ಕೋಳಿಯ ರಕ್ತ ಹೀರಿದ ಕಲಾವಿದ: ನೃತ್ಯತಂಡದ ವಿರುದ್ಧ ಅಕ್ರೋಶ, ಕೇಸ್ ದಾಖಲು