newsics.com
ಬೆಂಗಳೂರು: ಗುರುವಾರ ರಾತ್ರಿ ನಿಧನರಾದ ಖ್ಯಾತ ನಿರೂಪಕಿ, ನಟಿ ಅಪರ್ಣಾ ವಸ್ತಾರೆ ಪಂಚಭೂತಗಳಲ್ಲಿ ಲೀನವಾಗಿದ್ದಾರೆ.
ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ಸ್ಮಾರ್ತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಅಪರ್ಣಾ ಅವರಿಗೆ ಸರ್ಕಾರಿ ಗೌರವ ನೀಡಲಾಯಿತು.
ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್ನಿಂದ ಬಳಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬನಶಂಕರಿ ಎರಡನೇ ಹಂತದ ತಮ್ಮ ಮನೆಯಲ್ಲಿ ಗುರುವಾರ ರಾತ್ರಿ ಅಪರ್ಣಾ ಕೊನೆಯುಸಿರೆಳೆದರು.
ಅಂತ್ಯಕ್ರಿಯೆ ವೇಳೆಯೂ ಅಂತಿಮ ದರ್ಶನಕ್ಕೆಂದು ಬನಶಂಕರಿ ಚಿತಾಗಾರಕ್ಕೆ ಅಭಿಮಾನಿಗಳು ಓಡೋಡಿ ಬಂದಿದ್ದರಿಂದ ಅಂತ್ಯಕ್ರಿಯೆ ತುಸು ವಿಳಂಬವಾಯಿತು.
ನಟಿ, ನಿರೂಪಕಿ ಅಪರ್ಣಾ ಬಣ್ಣದ ಲೋಕದ ಮೇಲಿನ ಸೆಳೆತದಿಂದ ನಟನಾರಂಗಕ್ಕೆ ಆಗಮಿಸಿದ್ದರು. 1985ರಲ್ಲಿ ತೆರೆಗೆ ಬಂದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಸಣದ ಹೂವು ಸಿನಿಮಾ ಮೂಲಕ ಚಂದನವನಕ್ಕೆ ಆಗಮಿಸಿದ್ದರು ಅಪರ್ಣಾ. ಅದಾದ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು. ಕಿರುತೆರೆಯಲ್ಲಿಯೂ ಗುರುತಿಸಿಕೊಂಡರು. ಆದರೆ, ಸಿನಿಮಾಗಳಿಗಿಂತ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ನಿರೂಪಣೆ. ಸರಿಸುಮಾರು 7 ಸಾವಿರಕ್ಕೂ ಅಧಿಕ ವೇದಿಕೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದ ಹೆಗ್ಗಳಿಕೆ ಅಪರ್ಣಾ ಅವರದ್ದು.
ಅಪರ್ಣಾ ಮೂಲತಃ ಚಿಕ್ಕಮಗಳೂರಿನ ಪಂಚನಹಳ್ಳಿಯವರು. ತಂದೆ ಕೆ. ಎಸ್. ನಾರಾಯಣಸ್ವಾಮಿ ಸಿನಿಮಾ ಪತ್ರಕರ್ತ. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅಪರ್ಣಾ, ಚಿಕ್ಕಂದಿನಿಂದಲೇ ಓದಿನಲ್ಲಿ ಮುಂದು. ಶಾಲಾ ದಿನಗಳಲ್ಲಿಯೇ ವೇದಿಕೆ ಕಾರ್ಯಕ್ರಮಗಳನ್ನು ನಿಭಾಯಿಸುತ್ತಿದ್ದರು. ನಿರೂಪಣೆಯ ಜವಾಬ್ದಾರಿ ಹೊತ್ತಿದ್ದರು. ಅಂದಿನ ಆ ರೂಢಿಯೇ ಅವರ ಅನ್ನಕ್ಕೆ ದಾರಿ ಮಾಡಿಕೊಟ್ಟಿತ್ತು. ತಂದೆಯ ನಿಧನದ ಬಳಿಕ ಬೆಂಗಳೂರಿನ ಮಲ್ಲೇಶ್ವರಕ್ಕೆ ಬಂದು ನೆಲೆನಿಂತರು. ಅದಾದ ಮೇಲೆ ನಾಗರಾಜ್ ವಸ್ತಾರೆ ಜತೆಗೆ ವಿವಾಹವೂ ಆಯ್ತು. ಆದರೆ, ಈ ಜೋಡಿಗೆ ಮಕ್ಕಳಾಗಿಲ್ಲ. ಆ ಕೊರಗೂ ಅಪರ್ಣಾ ಅವರನ್ನು ಕಾಡಿತ್ತು.
ಬರುವ ಅಕ್ಟೋಬರ್ಗೆ 58 ವರ್ಷ ಪೂರೈಸುತ್ತಿದ್ದ ಅಪರ್ಣಾಗೆ, ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು. ನಿರೂಪಣೆಯಲ್ಲಿ ದೊಡ್ಡ ಹೆಸರು ಮಾಡಿದ್ದ ಅಪರ್ಣಾ, ಅದೇ ನಿರೂಪಣೆ ಕಲೆಯನ್ನು ಇತರರಿಗೂ ಹಂಚಲು ಪ್ಲಾನ್ ಮಾಡಿದ್ದರು. ನಿರೂಪಣೆ ಕುರಿತು ಶಾಲೆ ಆರಂಭಿಸುವ ಯೋಜನೆ ಹಾಕಿದ್ದರು. ಆದರೆ, ಆ ಕನಸು ಕೊನೆಗೂ ಈಡೇರಲಿಲ್ಲ. ಈ ವಿಚಾರವನ್ನು ಅವರ ಪತಿ ನಾಗರಾಜ್ ಹೇಳಿಕೊಂಡಿದ್ದಾರೆ.
ನನ್ನ ನೋವು, ನೋವಿನ ಮುಖ ಯಾರಿಗೂ ತಿಳಿಯುವುದು ಬೇಡ ಎಂದಿದ್ದರು ಅಪರ್ಣಾ…
ಅಪರ್ಣಾಗೆ ವಾಯ್ಸ್ ಅನೌನ್ಸ್ ಮೂಲಕ ನಮ್ಮ ಮೆಟ್ರೋ ಶ್ರದ್ಧಾಂಜಲಿ, ಎಂದೆಂದಿಗೂ ನಿಮ್ಮ ಧ್ವನಿ ಜೀವಂತ…
ಮಾತಿನ ಮಂಟಪ ಕಟ್ಟುತ್ತಿದ್ದ ಶುದ್ಧ ಕನ್ನಡತಿ… ಅಪರ್ಣಾ ಮೆಲುಮಾತು ಕರ್ಣಾನಂದ…