newsics.com
ದೇವರ ನಾಡು ಎಂದೇ ಖ್ಯಾತಿ ಪಡೆದಿರುವ ಕೇರಳದ ಗ್ರಾಮವೊಂದರಲ್ಲಿ ಕುಡಿತವನ್ನು ಬಿಟ್ಟು ಬೇರೊಂದು ಹವ್ಯಾಸಕ್ಕೆ ದಾಸರಾಗಿದ್ದಾರೆ. ಹೌದು, ಚೆಸ್ ಮ್ಯಾನ್ ಎಂದೇ ಅಲ್ಲಿ ಸ್ಥಳೀಯವಾಗಿ ಖ್ಯಾತಿ ಪಡೆದಿರುವ ವ್ಯಕ್ತಿಯಿಂದ ಇದು ಸಾಧ್ಯವಾಗಿದ್ದು.
ಟ್ರಾವೆಲ್ ವ್ಲಾಗರ್ ಶೆನಾಜ್ ಎಂಬುವವರು ಈ ಪ್ರೇರಣೆ ನೀಡುವ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.
ಕುಡಿತಕ್ಕೆ ದಾಸರಾಗಿ ಇಹವನ್ನೇ ಮರೆತಿದ್ದ ಇಲ್ಲಿನ ಜನ ಚೆಸ್ ಮ್ಯಾನ್ ಎಂದು ಕರೆಯಲ್ಪಡುವ ವ್ಯಕ್ತಿಯ ನೇತೃತ್ವದಲ್ಲಿ ತಮ್ಮ ಮಾನಸಿಕ ಗಮನವನ್ನು ಕುಡಿತದಿಂದ ಆಟದತ್ತ ಬದಲಾಯಿಸಿಕೊಂಡರು. ಹಾಗೂ ಇಂದು ಗ್ರಾಮದ ಶೇಕಡಾ 90 ರಷ್ಟು ಗ್ರಾಮಸ್ಥರು ನಿಯಮಿತವಾಗಿ ಚೆಸ್ ಆಡುತ್ತಾರೆ ಮತ್ತು ವರ್ಷಗಳಿಂದ ಇಲ್ಲಿ ಯಾರೂ ಮದ್ಯವನ್ನು ಮುಟ್ಟಿಯೇ ಇಲ್ಲವೆಂದು ಸ್ವತಃ ಗ್ರಾಮದ ಜನರೇ ಹೇಳಿಕೊಳ್ಳುತ್ತಾರೆ.
ಶೆನಾಜ್ ತಮ್ಮ ಹಲವು ಸೋಶಿಯಲ್ ಮೀಡಿಯಾ ಪೋಸ್ಟ್ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ಈಗ ಭಾರಿ ವೈರಲ್ ಆಗುತ್ತಿದೆ. ತಮ್ಮ ಲಿಂಕ್ಡಿನ್ ಪೋಸ್ಟ್ನಲ್ಲಿ ಅವರು ಹೀಗೆ ಬರೆದಿದ್ದಾರೆ. ಒಬ್ಬ ವ್ಯಕ್ತಿ ಅವರಿಗೆ ಚೆಸ್ನ್ನು ಪರಿಚಯಿಸುವವರೆಗೆ ಈ ಹಳ್ಳಿಯಲ್ಲಿ, ಎಲ್ಲರೂ ಒಂದು ಕಾಲದಲ್ಲಿ ಕುಡಿತಕ್ಕೆ ದಾಸರಾಗಿದ್ದರು. ಇದು ಸಿನಿಮಾದಂತೆ ತೋರುತ್ತಿದೆಯೇ? ಆದರೆ ಇದು ನಿಜ.
ಈ ಭಾರತೀಯ ಹಳ್ಳಿಯು ತನ್ನ ಕಥೆಯನ್ನು ಪುನಃ ಬರೆದಿದೆ. ಮದ್ಯವರ್ಜನ ಅಥವಾ ಮನಪರಿವರ್ತನೆಯ ಶಿಬಿರದಿಂದ ಅಲ್ಲ ಕೇವಲ, ಆದರೆ ಆನೆ, ಕುದುರೆ ಪದಾತಿದಳ ಹಾಗೂ ರಾಣಿಯಿಂದಾಗಿ. ಆ ಗ್ರಾಮದ ಜನ ಅವರನ್ನು ‘ಚೆಸ್ ಮ್ಯಾನ್’ ಎಂದು ಕರೆಯುತ್ತಾರೆ. ಈ ವ್ಯಕ್ತಿ ಅಲ್ಲಿನ ಜನರ ವ್ಯಸನವನ್ನು ಏಕಾಗ್ರತೆಯಾಗಿ, ಕೋಪವನ್ನು ತರ್ಕವಾಗಿ ಮತ್ತು ಹತಾಶೆಯನ್ನು ಶಿಸ್ತಾಗಿ ಪರಿವರ್ತಿಸಿದ ವ್ಯಕ್ತಿ ಎಂದು ಶೆನಾಜ್ ಬರೆದುಕೊಂಡಿದ್ದಾರೆ.