newsics.com
ಮೈಸೂರು: ಅತಿ ಹೆಚ್ಚು ಬೋನ್ಸಾಯ್ ವೃಕ್ಷಗಳನ್ನು ಸಂಗ್ರಹಿಸಿರುವ ಮೈಸೂರಿನ ಅವಧೂತ ದತ್ತಪೀಠ ಗಿನ್ನೆಸ್ ದಾಖಲೆ ನಿರ್ಮಿಸಿದೆ. ಈ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಬೋನ್ಸಾಯ್ ವೃಕ್ಷಗಳಿರುವ ವನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಗಿನ್ನೆಸ್ ಸಂಸ್ಥೆಯ ಪ್ರತಿನಿಧಿ ರಿಷಿನಾಥ್ ಅವರು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಮಂಗಳವಾರ ವಿಶ್ವದಾಖಲೆ ಪ್ರಮಾಣ ಪತ್ರವನ್ನು ಶ್ರೀಗಳಿಗೆ ಪ್ರದಾನ ಮಾಡಿದರು.
ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಜುಲೈ 6ರಿಂದ ಜುಲೈ 15ರವರೆಗೆ ನಡೆದ ವದದುರ್ಗ ಪೂಜೆಯ ಸಂದರ್ಭದಲ್ಲಿ ನಡೆದ ಬೋನ್ಸಾಯ್ ವೃಕ್ಷಗಳ ಸಂಗ್ರಹದಲ್ಲಿ ವಿಶ್ವದಾಖಲೆ ಮಾಡಿದೆ.
ಪ್ರಸ್ತುತ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಒಟ್ಟು 10,836 ಬೋನ್ಸಾಯ್ ವೃಕ್ಷಗಳಿವೆ. ಬೋನ್ಸಾಯ್ ಮಹಿಳೆ ಎಂದೇ ಕರೆಸಿಕೊಳ್ಳುವ ಪುಣೆಯ ಪ್ರಜಕ್ತಾ ಕಾಲೆ ಎನ್ನುವವರ ಬಳಿ 3,333 ಬೋನ್ಸಾಯ್ ವೃಕ್ಷಗಳಿದ್ದು, ಅವರ ದಾಖಲೆಯನ್ನು ಅವಧೂತ ದತ್ತಪೀಠ ಮುರಿದಿದೆ.
ಅವಧೂತ ದತ್ತಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ವಿಶ್ವವಿಖ್ಯಾತ ಕಿಷ್ಕಿಂಧಾ ಮೂಲಿಕಾ ಬೋನ್ಸಾಯ್ ವನವನ್ನು 2006 ರಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಸ್ಥಾಪಿಸಿದರು. ದೇಶಾದ್ಯಂತ ಜನರು, ಪ್ರವಾಸಿಗರು ಹಾಗೂ ಭಕ್ತರನ್ನು ಈ ವನ ಆಕರ್ಷಿಸುತ್ತಿದೆ.
ಸಾವಿರಾರು ಅತಿ ಅಪರೂಪದ ಬೋನ್ಸಾಯ್ ವೃಕ್ಷಗಳನ್ನು ನಮ್ಮ ದೇಶವಷ್ಟೇ ಅಲ್ಲದೆ ತೈವಾನ್, ಇಂಗ್ಲೆಂಡ್, ಜಪಾನ್ ಮತ್ತಿತರ ದೇಶಗಳಿಂದ ತರಿಸಲಾಗಿದೆ.
ಕಾಡಲ್ಲಿ ಬೆಳೆಯುವಂತಹ ಗಿಡವನ್ನು ನೆಡುವುದು ಮುಖ್ಯ ಅಲ್ಲ. ಉಪಯೋಗವಾಗುವ ಭಾವ ವೃಕ್ಷಗಳನ್ನು ಬೆಳೆಸಬೇಕಿದೆ. ಕೆಲವು ಕಡೆ ಭೂಮಿ ಖರೀದಿಸಿ ಅಲ್ಲಿ ಕಾಡು, ವಿವಿಧ ವೃಕ್ಷಗಳನ್ನು ಬೆಳೆಸಲು ಕರ್ನಾಟಕ ಹಾಗೂ ಆಂಧ್ರ ಎರಡನ್ನೂ ಆಯ್ಕೆ ಮಾಡಿಕೊಳ್ಳಲಾಗಿದೆ. ಬೇರೆ ಕಡೆಗೂ ನಿಧಾನಕ್ಕೆ ವಿಸ್ತರಿಸುವ ಚಿಂತನೆ ಇದೆ ಎಂದು ಸ್ವಾಮೀಜಿ ಹೇಳಿದರು.