newsics.com
ಬೆಂಗಳೂರು: ತೋತಾಪುರಿ ಮಾವು ಬ್ಯಾನ್ ಮಾಡಿದ ಆಂಧ್ರಪ್ರದೇಶ ಸರ್ಕಾರದ ಕ್ರಮ ವ್ಯಾಪಕ ಟೀಕೆಗೆ ಒಳಗಾಗಿದೆ.
ಅನ್ನದಾತರ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದು ಕರ್ನಾಟಕ ಸರ್ಕಾರ ಮನವಿ ಮಾಡಿದೆ.
ತೋತಾಪುರಿ ಮಾವಿನ ಹಣ್ಣುಗಳ ಪ್ರವೇಶಕ್ಕೆ ಚಿತ್ತೂರು ಜಿಲ್ಲಾಡಳಿತ ವಿಧಿಸಿರುವ ನಿಷೇಧವನ್ನು ರದ್ದುಗೊಳಿಸುವಂತೆ ಕೋರಿ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಮಾವು ಬೆಳೆಗಾರರು ಅತಿ ಹೆಚ್ಚಾಗಿ ಚಿತ್ತೂರಿನಂತಹ ಗಡಿ ಪ್ರದೇಶಗಳಲ್ಲಿ ಸಂಸ್ಕರಣಾ ಘಟಕಗಳನ್ನೇ ಅವಲಂಬಿಸಿರುವುದರಿಂದ ಏಕಾಏಕಿ ಹೇರಲಾಗಿರುವ ನಿಷೇಧದಿಂದ ತೀವ್ರ ಸಂಕಷ್ಟ ಎದುರಾಗಿದೆ ಎಂದು ಶಾಲಿನಿ ರಜನೀಶ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಇಂತಹ ನಿರ್ಧಾರ ‘ಸಹಕಾರಿ ಒಕ್ಕೂಟದ ಮನೋಭಾವ’ಕ್ಕೆ ವಿರುದ್ಧವಾಗಿದೆ ಮತ್ತು ‘ಪ್ರತೀಕಾರದ ಭಾವನೆಗಳನ್ನು ಪ್ರಚೋದಿಸುವ’ ಅಪಾಯವನ್ನು ಹೊಂದಿದೆ ಎಂದು ಮನವಿಪತ್ರದಲ್ಲಿ ವಿವರಿಸಿದ್ದಾರೆ.
ಕರ್ನಾಟಕದ ಗಡಿ ಪ್ರದೇಶಗಳಲ್ಲಿ ವ್ಯಾಪಕವಾಗಿ ತೋತಾಪುರಿ ಮಾವು ಬೆಳೆಯಲಾಗುತ್ತಿದೆ. ಈ ಭಾಗದ ರೈತರಿಗೆ ಚಿತ್ತೂರು ಮಾರುಕಟ್ಟೆಯೇ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಆದರೆ, ಚಿತ್ತೂರು ಮಾರುಕಟ್ಟೆಯಲ್ಲಿ ತೋತಾಪುರಿ ಮಾವಿಗೆ ನಿರ್ಬಂಧ ಹೇರುವ ಆಂಧ್ರ ಸರ್ಕಾರದ ನಡೆಯಿಂದ ಕರ್ನಾಟಕದ ರೈತರಿಗೆ ಆತಂಕ ಎದುರಾಗಿದೆ.