newsics.com
ಕೊಲ್ಕತ್ತಾ : ಕುಡುಕನೊಬ್ಬ 7 ವರ್ಷಗಳ ಹಿಂದೆ ಹೂತು ಹಾಕಿದ್ದ ಮಹಿಳೆಯ ಶವವನ್ನು ಹೊರತೆಗೆದು, ಅದರ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾನೆ. ಇದನ್ನು ಗಮನಿಸಿದ ಗ್ರಾಮಸ್ಥರು ಕೋಪಗೊಂಡು ಯುವಕನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಘಟನೆ ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯಲ್ಲಿ ನಡೆದಿದೆ.
ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ಕಾಂಟೈ ಗ್ರಾಮದ ನಿವಾಸಿ ಪ್ರಭಾಕರ್, ಸ್ಥಳೀಯ ಸ್ಮಶಾನದಲ್ಲಿ ಸಮಾಧಿ ಅಗೆದು ಶವವನ್ನು ಹೊರತೆಗೆದಿದ್ದಾನೆ. ಅಸ್ಥಿಪಂಜರವಾಗಿ ಮಾರ್ಪಟ್ಟಿದ್ದ ಆ ಮೃತ ದೇಹವು ಏಳು ವರ್ಷಗಳ ಹಿಂದೆ ಹೂಳಲಾದ ಮಹಿಳೆಯದ್ದಾಗಿತ್ತು. ನಂತರ ಅವನು ಅಸ್ಥಿಪಂಜರವನ್ನು ಮರಕ್ಕೆ ನೇತುಹಾಕಿ ಅದರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾನೆ. ಸ್ಥಳೀಯರು ಇದನ್ನು ಗಮನಿಸಿ, ಅವನನ್ನು ಹಿಡಿದು ಹೊಡೆದಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಗೆ ಗ್ರಾಮಸ್ಥರು ಆತನನ್ನು ಒಪ್ಪಿಸಲು ನಿರಾಕರಿಸಿದರು.
ಆತನನ್ನು ರಕ್ಷಿಸಲು ಯತ್ನಿಸಿದ ಪೊಲೀಸರ ಮೇಲೂ ಸ್ಥಳೀಯರು ಕಲ್ಲು ತೂರಾಟ ನಡೆಸಿದರು. ಈ ಘರ್ಷಣೆಯಲ್ಲಿ ಹಲವಾರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಸತತ ಎರಡು ಗಂಟೆಗಳ ನಂತರ, ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಸಧ್ಯ ವ್ಯಕ್ತಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನಾ ಸ್ಥಳದಲ್ಲಿ ಮದ್ಯದ ಬಾಟಲಿ ಪತ್ತೆಯಾಗಿದ್ದು, ಯುವಕ ಮದ್ಯ ಸೇವಿಸಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಭಾಕರ್ ಈ ಹಿಂದೆ ನೆರೆಯ ರಾಜ್ಯದ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದು, ಕುಡಿತದ ಚಟದಿಂದಾಗಿ ಕೆಲಸ ಕಳೆದುಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ, ಆತ ಮಹಿಳೆಯ ಅಸ್ಥಿಪಂಜರವನ್ನು ಸಮಾಧಿಯಿಂದ ಏಕೆ ಹೊರತೆಗೆದ ಎಂಬುದು ಇನ್ನೂ ತಿಳಿದಿಲ್ಲ.
Rain In Karnataka : ಮೇ.28ರವರೆಗೆ ರಾಜ್ಯದೆಲ್ಲೆಡೆ ಭಾರೀ ಮಳೆ : 6 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ