newsics.com
ಬೆಂಗಳೂರು: ಕರಾವಳಿ ಕರ್ನಾಟಕ, ಮಲೆನಾಡು ಪ್ರದೇಶ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ಈ ಭಾಗದ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಮನೆ, ತೋಟಗಳಿಗೆ ನೀರು ನುಗ್ಗಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.
ಈ ಪ್ರದೇಶಗಳಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆ ಸಂಬಂಧಿ ಅವಘಡಗಳಲ್ಲಿ ಕರಾವಳಿ, ಮಲೆನಾಡು ವ್ಯಾಪ್ತಿಯಲ್ಲಿ ಮೂವರು ಮೃತಪಟ್ಟಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ಸೊಸೈಟಿ ಗುಡ್ಡ ಎಂಬಲ್ಲಿ ಗುಡ್ಡ ಕುಸಿದು ಹಳ್ಳಿ ಬೇರು ನಿವಾಸಿ ಅಂಬಾ(55) ಎಂಬಾಕೆ ಮೃತಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬೈಸೆ ಗ್ರಾಮದಲ್ಲಿ ಗದ್ದೆಗೆ ಹೋಗುತ್ತಿದ್ದ ಮಹಿಳೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಅಜಿಲಮೊಗರು ಸಮೀಪದ ಕೂಟೇಲು ಸೇತುವೆಯ ಬಳಿ ನದಿಗೆ ಮೀನು ಹಿಡಿಯಲು ಹೋದ ಮೈಕಲ್ ಎಂಬುವರು ನೀರು ಪಾಲಾಗಿದ್ದಾರೆ
.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಒಂದೇ ದಿನ(ಜುಲೈ 4) 167 ಮಿಮೀ ಮಳೆ ಆಗಿದ್ದು, ನದಿಗಳೆಲ್ಲಾ ಭೋರ್ಗರೆಯುತ್ತಿವೆ. ಗಂಗಾವಳಿ ನದಿ ಅಬ್ಬರಕ್ಕೆ ಅಂಕೋಲ ತಾಲೂಕಿನ ಬಿಳೆಹೊಂಗಿ, ಮಂಜುಗುಣಿ, ಪಣಸಗೊಳಿ, ಹೊನ್ನೆಬೈಲು ಸೇರಿ 5ಕ್ಕೂ ಹೆಚ್ಚು ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ತಿಂಗಳಿನಿಂದ ಸುರಿದ ವರ್ಷಧಾರೆಗೆ 92 ಮನೆಗಳಿಗೆ ಹಾನಿಯಾಗಿದ್ದು ಓರ್ವ ಮಹಿಳೆ ಮತ್ತು ಜಾನುವಾರು ಸಾವನ್ನಪ್ಪಿವೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾಹಿತಿ ನೀಡಿದ್ದಾರೆ. ಕುಮಟಾ, ಭಟ್ಕಳ, ಹೊನ್ನಾವರ ತಾಲೂಕಿನ ಶಾಲಾ ಕಾಲೇಜಿಗೆ ಇಂದು ರಜೆ ಘೋಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಿಗೆ ಮುಂಜಾಗ್ರತಾ ಕ್ರಮವಾಗಿ 35 ಸಿಬ್ಬಂದಿಯ ಎರಡು ಎನ್ಡಿಆರ್ಎಫ್ ತಂಡವನ್ನು ರವಾನಿಸಲಾಗಿದೆ. ಈ ತಂಡ ಕಾರವಾರ, ಕುಮಟಾ, ಅಂಕೋಲಾಗೆ ತೆರಳಿ ಪರಿಸ್ಥಿತಿ ಪರಿಶೀಲಿಸಿದೆ.
ಉಡುಪಿಯ ರಟ್ಟಾಡಿಯಲ್ಲಿ ಭಾರಿ ಸುಂಟರಗಾಳಿ ಬೀಸಿ 40ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಸುಂಟರಗಾಳಿ ಹೊಡೆತಕ್ಕೆ 5 ಸಾವಿರಕ್ಕೂ ಅಧಿಕ ಅಡಕೆ ಮರಗಳು, 2 ಸಾವಿರ ರಬ್ಬರ್ ಮರಗಳು ನಾಶವಾಗಿವೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನೆತಾಳು ಗ್ರಾಮದಲ್ಲಿ ಯಕ್ಷಗಾನ ಕಲಾವಿದ ನಂದನ್ ಶೆಟ್ಟಿ ಎಂಬುವರ ಮನೆ ಕುಸಿದು ಬಿದ್ದಿದೆ. ಮನೆ ಕುಸಿಯುತ್ತಿದ್ದಾಗ ಕುಟುಂಬದವರು ಹೊರಗೆ ಓಡಿ ಬಂದಿದ್ದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ.
ವಾಂಖೆಡೆ ಸ್ಟೇಡಿಯಂನಲ್ಲಿ ಭಾರೀ ಜನಸಮೂಹ: ಬಿಸಿಸಿಐನಿಂದ 125 ಕೋಟಿ ಬಹುಮಾನ, ಮಾರ್ದನಿಸಿದ ವಂದೇ ಮಾತರಂ
‘ಪೆನ್ಡ್ರೈವ್’ ಚಿತ್ರದಲ್ಲಿ ತನಿಷಾ ಕುಪ್ಪಂಡ! ಇದು ಪ್ರಜ್ವಲ್ ರೇವಣ್ಣ ಕಥೆನಾ?