newsics.com
ಇಸ್ಲಾಮಾಬಾದ್: ಪಹಲ್ಗಾಮ್ನಲ್ಲಿ ನಡೆದ ಭೀಕರ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿದೆ. ಶನಿವಾರ ಪಾಕಿಸ್ತಾನದ ಅಧಿಕಾರಿಗಳಿಗೆ ತಿಳಿಸದೆ ಭಾರತವು ಇದ್ದಕ್ಕಿದ್ದಂತೆ ಝೀಲಂ ನದಿಗೆ ನೀರನ್ನು ಬಿಡುಗಡೆ ಮಾಡಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದ ಮುಜಫರಾಬಾದ್ ಬಳಿ ನದಿಯ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆ ಕಂಡುಬಂದಿದ್ದು, ಇದಕ್ಕೆ ಭಾರತವೇ ಕಾರಣ ಎಂದು ಪಾಕ್ ಆರೋಪಿಸಿದೆ. ಝೀಲಂ ನದಿಯ ದಡದಲ್ಲಿರುವ ಮುಜಫರಾಬಾದ್ನಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಹಟ್ಟಿಯನ್ ಬಾಲಾದಲ್ಲಿ ಸ್ಥಳೀಯ ಆಡಳಿತವು ನೀರಿನ ತುರ್ತು ಪರಿಸ್ಥಿತಿಯನ್ನು ವಿಧಿಸಿದೆ.
ಇಷ್ಟು ದಿನ ನೀರಿಲ್ಲ ಎಂದು ಪರದಾಡುತ್ತಿದ್ದ ಪಾಕಿಸ್ತಾನ ಇದೀಗ ಪ್ರವಾಹದಿಂದ ತತ್ತರಿಸಿದೆ. ಹಟ್ಟಿಯನ್ ಬಾಲಾದಲ್ಲಿ ಸ್ಥಳೀಯ ಆಡಳಿತವು ನೀರಿನ ತುರ್ತು ಪರಿಸ್ಥಿತಿಯನ್ನು ವಿಧಿಸಿದೆ. ಮಸೀದಿಗಳಲ್ಲಿ ಘೋಷಣೆಗಳ ಮೂಲಕ ಸ್ಥಳೀಯರಿಗೆ ಎಚ್ಚರಿಕೆ ನೀಡಲಾಯಿತು. ಈ ಘೋಷಣೆಯು ನದಿ ದಂಡೆಯ ಬಳಿ ವಾಸಿಸುವ ನಿವಾಸಿಗಳಲ್ಲಿ ಭೀತಿಯನ್ನು ಸೃಷ್ಟಿಸಿದೆ ಎಂದು ವರದಿ ತಿಳಿಸಿದೆ. ಪಾಕಿಸ್ತಾನಿ ಅಧಿಕಾರಿಗಳು ಇದನ್ನು ಖಂಡಿಸಿದರು ಮತ್ತು “ಅಂತರರಾಷ್ಟ್ರೀಯ ನಿಯಮಗಳು ಮತ್ತು ಜಲ ಒಪ್ಪಂದಗಳ ಸಂಪೂರ್ಣ ಉಲ್ಲಂಘನೆ” ಎಂದು ಕರೆದಿದ್ದಾರೆ. ಪಾಕಿಸ್ತಾನ ಮೂಲದ ಭಯೋತ್ಪಾದಕರು ಪಹಲ್ಗಾಮ್ನಲ್ಲಿ ನಡೆಸಿದ ಮಾರಕ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ , 1960 ರ ಸಿಂಧೂ ಜಲ ಒಪ್ಪಂದವನ್ನು ಭಾರತ ಸ್ಥಗಿತಗೊಳಿಸಲು ನಿರ್ಧರಿಸಿದ ನಂತರ ಈ ಆರೋಪಗಳು ಬಂದಿವೆ.
ಸಿಂಧೂ ಜಲ ಒಪ್ಪಂದದಡಿಯಲ್ಲಿ ನದಿ ನೀರು ಬಿಡುಗಡೆ ರದ್ದತಿ ಹಾಗೂ ಬೇರೆಡೆಗೆ ತಿರುಗಿಸಲು ಭಾರತ ನಡೆಸುವ ಯಾವುದೇ ಪ್ರಯತ್ನವನ್ನು “ಯುದ್ಧದ ಕೃತ್ಯ” ಎಂದು ಪರಿಗಣಿಸಲಾಗುತ್ತದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ (Pakistan NSC) ಗುರುವಾರ ಹೇಳಿದೆ. 1960 ರ ಸಿಂಧೂ ಜಲ ಒಪ್ಪಂದ ತನ್ನ 240 ಮಿಲಿಯನ್ ನಾಗರಿಕರಿಗೆ ಜೀವನಾಡಿ ಎಂದು ಕರೆದ ಪಾಕ್, ಒಪ್ಪಂದವನ್ನು ಏಕಪಕ್ಷೀಯವಾಗಿ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದೆ.
1960 ರಲ್ಲಿ ಸಹಿ ಹಾಕಲ್ಪಟ್ಟ ಮತ್ತು ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿದ ಈ ಒಪ್ಪಂದವು ಭಾರತ ಮತ್ತು ಪಾಕಿಸ್ತಾನದ ನಡುವಿನ ಆರು ನದಿಗಳ ವಿಭಜನೆಯನ್ನು ನಿಯಂತ್ರಿಸುತ್ತದೆ. ಸಿಂಧೂ ನದಿ ಮತ್ತು ಅದರ ಉಪನದಿಗಳಾದ ಝೀಲಂ, ಚೆನಾಬ್, ರಾವಿ, ಬಿಯಾಸ್ ಮತ್ತು ಸಟ್ಲುಜ್ಗಳ ನೀರು ಸರಬರಾಜು ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ನದಿಗಳು ಪಾಕಿಸ್ತಾನಕ್ಕೆ ನೀರು ಸರಬರಾಜು ಮಾಡುತ್ತಿದ್ದು ಇದರಿಂದ ಪಾಕಿಸ್ತಾನದ ಲಕ್ಷಾಂತರ ಜನ ಜೀವನ ಅಸ್ತವ್ಯಸ್ತಗೊಳ್ಳಲಿದೆ.