newsics.com
ಬೆಂಗಳೂರು: ಬಿಸಿಲಿನ ಝಳಕ್ಕೆ ರಾಜ್ಯದ ಜನತೆ ಹೈರಾಣಾಗಿದ್ದಾರೆ. ಕಳೆದ ಬಾರಿಗಿಂತಲೂ ಹೆಚ್ಚಿನ ತಾಪಮಾನ ಏರಿಕೆಯಾಗಿದ್ದು, ದಿನಗಳಿಂದ ತಾಪಮಾನ ಏರಿಕೆಯಾಗುತ್ತ ಇದೆ. ನಾನಾ ಆರೋಗ್ಯ ಸಮಸ್ಯೆ ಶುರುವಾಗಿವೆ. ಸಿಲಿಕಾನ್ ಸಿಟಿ ಜನರೇ ಆರೋಗ್ಯದ ಬಗ್ಗೆ ಕೊಂಚ ಎಚ್ಚರವಾಗಿರಬೇಕು.
ಅತಿಯಾದ ತಾಪಮಾನ ಜನರನ್ನು ಅತಿಸಾರ ರೋಗದತ್ತ ವಾಲಿಸುತ್ತಿದೆ. ಸೆಕೆ ಅಂತ ಸಿಕ್ಕ ಸಿಕ್ಕ ಕಡೆ ನೀರಿನ ನೈರ್ಮಲ್ಯ ನೋಡದೇ ಕುಡಿಯುವುದರಿಂದ ಕೂಡ ಅತಿಸಾರದ ಮೂಲಕ ಅಪಾಯಕ್ಕೆ ಆಹ್ವಾನ ಕೊಟ್ಟ ಹಾಗೇ ಆಗಿದೆ. ನಿಮಗೆ ಹೊಟ್ಟೆ ನೋವು, ಜ್ವರ, ಕರುಳು ಬೇನೆ, ಟೈಫಾಯಿಡ್, ವೈರಲ್ ಹೆಪಟೈಟಿಸ್ ನೋವಿನಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಯಾಕಂದ್ರೆ ರಾಜ್ಯದಲ್ಲಿ ಕಳೆದೊಂದು ತಿಂಗಳಿನಿಂದ ಅಕ್ಯುಟ್ ಡಯಾರಿಯಲ್ ಡಿಸೀಸ್ ಏರಿಕೆಯಾಗುತ್ತಿದ್ದು, ಅದರ ಅಂಕಿ ಅಂಶಗಳೇ ಆರೋಗ್ಯ ಇಲಾಖೆಯ ಟೆನ್ಷನ್ ಹೆಚ್ಚಿಸಿದೆ.
ಕರುಳು ಬೇನೆ, ಟೈಫಾಯಿಡ್, ವೈರಲ್ ಹೆಪಟೈಟಿಸ್ನಂತಹ ಕರುಳು ಸಂಬಂಧಿ ರೋಗಗಳು ಏರಿಕೆ ಕಂಡಿವೆ. ಕಳೆದ ಎರಡು ತಿಂಗಳಲ್ಲಿ ಬರೋಬ್ಬರಿ 34,276 ಮಂದಿಗೆ ಎಡಿಡಿ ಅಂದ್ರೆ ಅಕ್ಯುಟ್ ಡಯಾರಿಯಲ್ ಡಿಸೀಸ್ ಕಾಣಿಸಿಕೊಂಡಿದೆ.
ಹವಾಮಾನ ಬದಲಾವಣೆ ಮುಂತಾದ ಕಾರಣಗಳಿಂದ ಕರಳು ಬೇನೆ ಗ್ಯಾಸ್ಟ್ರೋ ಎಂಟರಿಟೈಸ್ ಸೇರಿದಂತೆ ಕರುಳು ಸಂಬಂಧಿ ಖಾಯಿಲೆ ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ ರಾಜಧಾನಿಯ ಜನರು ಜಾಗ್ರತೆ ವಹಿಸಬೇಕೆಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.