newsics.com
ಬೆಂಗಳೂರು: ಮಹಾರಾಷ್ಟ್ರದಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿ ಮೇಲಿನ ಹಲ್ಲೆಯನ್ನು ಖಂಡಿಸಿ, ಬೆಳಗಾವಿ ಗಡಿಯಲ್ಲಿ ಮರಾಠಿ ಸಂಘಟನೆಗಳ ಪುಂಡಾಟದ ವಿರುದ್ಧ ಧ್ವನಿ ಎತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ.
ಬಂದ್ ದಿನ ಏನಿರುತ್ತೆ? ಏನಿರಲ್ಲ?
* ಬ್ಯಾಂಕುಗಳು: ಮಾರ್ಚ್ 22ರಂದು ಬ್ಯಾಂಕುಗಳು ಮುಚ್ಚುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
* ಕ್ಯಾಬ್, ಆಟೋ ರಿಕ್ಷಾಗಳು ಮತ್ತು ಖಾಸಗಿ ರಸ್ತೆ ಸಾರಿಗೆ ಬಸ್ ಚಾಲಕರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಆದರೆ ಮೆಟ್ರೋ ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ.
* ರಾಜ್ಯ ಸರ್ಕಾರಿ ಕಚೇರಿಗಳನ್ನು ಮುಚ್ಚುವ ಬಗ್ಗೆ ಯಾವುದೇ ಅಧಿಕೃತ ಸುತ್ತೋಲೆ ಇಲ್ಲ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
* ಬಹುಮುಖ್ಯವಾಗಿ ಆಸ್ಪತ್ರೆಗಳು ಮತ್ತು ಔಷಧಿ ಅಂಗಡಿಗಳು ನಿರ್ಣಾಯಕ ಸೇವೆಗಳು ರಾಜ್ಯಾದ್ಯಂತ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ.
* ಬಂದ್ ದಿನ ಎಂದಿನಂತೆ ಹೋಟೆಲ್ ಗಳು ತೆರೆದಿರುತ್ತೆ.
ಶಾಲಾ-ಕಾಲೇಜು: ಎಸ್ಎಸ್ಎಲ್ಸಿ ಪರೀಕ್ಷೆ ಹಾಗೂ ವಿವಿಧ ತರಗತಿಗಳ ಪರೀಕ್ಷೆಗಳು ನಡೆಯುತ್ತಿರುವುದರ ನಡುವೆಯೇ ಬಂದ್ ಸಹ ಇರುವುದು ಹಲವು ಗೊಂದಲ ಹಾಗೂ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬಂದ್ಗೆ ಕೆಲವು ಶಾಲಾ – ಕಾಲೇಜುಗಳು ನೈತಿಕ ಬೆಂಬಲವನ್ನು ವ್ಯಕ್ತಪಡಿಸಿದೆ.
ಪರೀಕ್ಷೆಯ ಅವಧಿಯಲ್ಲೇ ಬಂದ್ ಮಾಡಬಾರದು ಬಂದ್ ಮುಂದೂಡಬೇಕು ಎಂದು ಮನವಿ ಮಾಡಿದರೂ ಕನ್ನಡಪರ ಸಂಘಟನೆಗಳು ಇದರಿಂದ ಹಿಂದೆ ಸರಿದಿಲ್ಲ. ಸರ್ಕಾರ ಸಹ ಪರೀಕ್ಷಾ ದಿನಾಂಕವನ್ನು ಮುಂದೂಡಿಲ್ಲ. ಇದರ ನಡುವೆ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ.
ಹೀಗಾಗಿ ಬಂದ್ ದಿನ ಪರೀಕ್ಷೆ ನಡೆದರೆ ಮಕ್ಕಳಿಗೆ ಸಮಸ್ಯೆ ಆಗಲಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಬಂದ್ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಕರ್ನಾಟಕ ಸಾರಿಗೆ ನೌಕರರ ಒಕ್ಕೂಟದಿಂದ ಬೆಂಬಲ ಸಿಕ್ಕಿದೆ. ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ನೌಕರರ ಸಂಘದಿಂದಲೂ ಬೆಂಬಲ ವ್ಯಕ್ತವಾಗಿದೆ. ಕನ್ನಡ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದಿಂದ ಬೆಂಬಲ ಸೂಚಿಸಲಾಗಿದೆ. ಓಲಾ, ಉಬರ್ ಅಸೋಸಿಯೋಷನ್ ಹಾಗೂ ಆಟೋ ಸಂಘಟನೆಗಳಿಂದಲೂ ಬಂದ್ಗೆ ಬೆಂಬಲ ವ್ಯಕ್ತವಾಗಿದೆ.