Newsics.com
ಬೆಂಗಳೂರು: ಟೀಮ್ ಇಂಡಿಯಾದ, ಕರ್ನಾಟಕ ಮೂಲದ ಕ್ರಿಕೆಟಿಗ ಮನೀಷ್ ಪಾಂಡೆ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಚರ್ಚೆಗೆ ಕಾರಣವಾಗಿರುವುದು ದಂಪತಿಗಳ ಇನ್ಸ್ಟಾಗ್ರಾಮ್ ಖಾತೆಯ ಪೋಸ್ಟ್.
2019ರಲ್ಲಿ ಕ್ರಿಕೆಟಿಗ ಮನೀಶ್ ಪಾಂಡೆ ಚಿತ್ರನಟಿ ಆಶ್ರಿತಾ ಶೆಟ್ಟಿ ಅವರ ಕೈ ಹಿಡಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಆಶ್ರಿತಾ ಶೆಟ್ಟಿ ಅವರು ಅರ್ಜುನ್ ಕಾಪಿಕಾಡ್ ಅಭಿನಯದ ‘ತೆಲಿಕೆದ ಬೊಳ್ಳಿ’ ತುಳು ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ್ದರು. ಇದೀಗ ಈ ಜೋಡಿ ಸದ್ಯದಲ್ಲೇ ದೂರವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿವೆ.
ಹೌದು, ಮನೀಶ್ ಪಾಂಡೆ ಮತ್ತು ಆಶ್ರಿತಾ ಶೆಟ್ಟಿ ತಮ್ಮ ತಮ್ಮ ಇನ್ ಸ್ಟಾಗ್ರಾಂ ಖಾತೆಗಳಲ್ಲಿ ಅಪ್ಲೋಡ್ ಮಾಡಿದ್ದ ಮದುವೆ ಮತ್ತು ಅವರಿಬ್ಬರ ಫೋಟೋಗಳನ್ನು ಇಬ್ಬರೂ ಡಿಲೀಟ್ ಮಾಡಿದ್ದಾರೆ. ಹೀಗಾಗಿ ಇವರ ದಾಂಪತ್ಯದಲ್ಲಿ ಏರುಪೇರಾಗಿದ್ದು, ಇಬ್ಬರೂ ಪರಸ್ಪರ ಬೇರೆಯಾಗುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.
https://www.instagram.com/p/C8ZSKIPPCZE/?img_index=
ಮನೀಶ್ ಪಾಂಡೆ ಅವರು ಐಪಿಎಲ್ 2024ರ ಟೂರ್ನಿಯಲ್ಲಿ ತಾವು ಪ್ರತಿನಿಧಿಸಿದ್ದ ಕೆಕೆಆರ್ ತಂಡದ ಮತ್ತು ಟ್ರೋಫಿ ಜೊತೆಗಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಅವರ ಫೋಟೋಗಳ ಲಿಸ್ಟ್ ನಲ್ಲಿ ಪತ್ನಿ ಆಶ್ರಿತಾ ಜತೆಗಿರುವ ಫೋಟೋ ಮಾಯವಾಗಿದೆ. ಇದು ಅಭಿಮಾನಿಗಳ ಶಂಕೆಗೆ ಕಾರಣವಾಗಿದ್ದು ಇಬ್ಬರೂ ಪರಸ್ಪರ ಬೇರೆ ಬೇರೆಯಾಗುತ್ತಿದ್ದಾರೆಯೇ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಈ ಬಗ್ಗೆ ಈ ಜೋಡಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
2009ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಮನೀಷ್ ಪಾಂಡೆ, ಚೊಚ್ಚಲ ಶತಕ ಸಿಡಿಸಿದ ಮೊದಲ ಆನ್ಕ್ಯಾಪ್ಡ್ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದರು. ಇದುವರೆಗೂ 171 ಐಪಿಎಲ್ ಪಂದ್ಯಗಳನ್ನಾಡಿದ ಅವರು ಒಂದು ಶತಕ ಹಾಗೂ 22 ಅರ್ಧಶತಕ ಬಾರಿಸಿದ್ದಾರೆ. ಒಟ್ಟು 3850 ರನ್ ಗಳಿಸಿದ್ದಾರೆ. ಇದರಲ್ಲಿ ಅಜೇಯ 114 ರನ್ ಗರಿಷ್ಠ ಮೊತ್ತವಾಗಿದೆ. ಈ ಬಾರಿ ಕೆಕೆಆರ್ ಪರ ಕೇವಲ 1 ಪಂದ್ಯ ಆಡಿ 42 ರನ್ ಬಾರಿಸಿದ್ದರು.